ಬಡಜೀವದ ಮೇಲೆ ಜವರಾಯನ ಅಟ್ಟಹಾಸ ..! ನಿನ್ನೆ ಸುರಿದ ಅಪಾಯಕಾರಿ ಮಳೆಗೆ ಇನ್ನೊಂದು ಜೀವ ಬಲಿ..

562

ಬೆಂಗಳೂರು: ಬೆಂಗಳೂರಿನ ಕಸ್ತೂರಬಾ ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ನಾಗರಿಕರ ಸುರಕ್ಷತೆಯ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಿದೆ. ಆರು ಅಂತಸ್ತಿನ ಕಟ್ಟಡದ ಟೆರಸ್ ಮೇಲೆ ಅವೈಜ್ಞಾನಿಕವಾಗಿ ಹಾಕಲಾದ ಶೀಟ್ ಮತ್ತು ಅದರ ಮೇಲಿಟ್ಟ ಬೃಹತ್ ಕಲ್ಲುಗಳೇ ಈ ದುರಂತಕ್ಕೆ ಕಾರಣ.

ನಿನ್ನೆ ಸುರಿದ ಬಿರುಗಾಳಿ ಮಳೆಯ ರಭಸಕ್ಕೆ ಟೆರಸ್ ಮೇಲಿನ ಶೀಟ್ ಹಾರಿಹೋಗಿ ಆ ವೇಳೆ ಅದರ ಮೇಲಿದ್ದ ಬೃಹತ್ ಕಲ್ಲು ನೇರವಾಗಿ ಕೆಳಗೆ ಬಿದ್ದು, ಕಟ್ಟಡದ ಕಾವಲುಗಾರ ಮಂಜುನಾಥ್ ಅವರ ಮನೆಯ ಶೀಟ್ ಅನ್ನು ಸೀಳಿಕೊಂಡು ಅವರ ತಲೆಗೆ ಅಪ್ಪಳಿಸಿತು. ತಲೆ ಎರಡು ಸೀಳಿದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದುರಂತದ ಮುಂಚೆ, ಮಂಜುನಾಥ್ ಅವರು ರಾತ್ರಿ ಪಾಳಿಯ ಡ್ಯೂಟಿ ಮುಗಿಸಿ ನಿರಾಳವಾಗಿ ಮಲಗಿದ್ದರು. ತಮ್ಮ ಕೊನೆಯ ಗಳಿಗೆಯ ಬಗ್ಗೆ ಸಣ್ಣ ಸುಳಿವೂ ಅವರಿಗಿರಲಿಲ್ಲ. ಅದೃಷ್ಟವಶಾತ್, ಅವರ ಪತ್ನಿ ಮತ್ತು ಮಗು ಊರಿಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಡತನದ ಜೀವವೊಂದು ಮಾಲೀಕನ ಬೇಜವಾಬ್ದಾರಿತನಕ್ಕೆ ಬಲಿಯಾಗಿರುವುದು ಸಮಾಜದ ಬೆನ್ನುಮೂಳೆ ನೋವನ್ನು ಹೆಚ್ಚಿಸಿದೆ. ಬೃಹತ್ ಕಲ್ಲನ್ನು ಅಸುರಕ್ಷಿತವಾಗಿ ಇಡುವುದು, ಮಳೆಗಾಳಿಯನ್ನು ಲೆಕ್ಕಿಸದ ನಿರ್ಲಕ್ಷ್ಯ – ಇದು ಕೊಲೆಗೆ ಸಮಾನವಾಗಿದೆ.

ಮಂಜುನಾಥ್ ಅವರಂಥ ಬಡ ಕಾರ್ಮಿಕರು ನಮ್ಮ ಸಮಾಜದ ಅವಿಭಾಜ್ಯ ಅಂಗ. ಅವರ ಸುರಕ್ಷತೆಯನ್ನು ಖಾತ್ರಿಪಡಿಸುವುದು ಪ್ರತಿಯೊಬ್ಬ ಕಟ್ಟಡ ಮಾಲೀಕನ ಮೂಲಭೂತ ಜವಾಬ್ದಾರಿಯಾಗಿದೆ. ಪ್ರಾಸಿಕ್ಯೂಷನ್ ಈ ಪ್ರಕರಣದಲ್ಲಿ ಆರೋಪಿ ಮಾಲೀಕನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ, ಅಜಾಗರೂಕ ನಿರ್ಮಾಣಗಳ ವಿರುದ್ಧ ನಗರಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯ ಕೂಡಾ ಇದೆ.

 

Exit mobile version