ಗ್ಯಾಸ್ ಇಲ್ಲ, ಊಟ ಇಲ್ಲ..: ಬೆಂಗಳೂರಿನ ಇಂದಿರಾ ಕ್ಯಾಂಟೀನ್‌, ಹೋಟೆಲ್‌ಗಳು ಬಂದ್!

Untitled design 2026 03 12T085250.626

ಬೆಂಗಳೂರು: ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳ ಸೇವೆಗೆ ಗಂಭೀರ ಸಂಕಷ್ಟ ಎದುರಾಗಿದೆ. ಈಗಾಗಲೇ ನಗರದ 30ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಗ್ಯಾಸ್ ಪೂರೈಕೆ ಸರಿಯಾಗಿ ಆಗದಿದ್ದರೆ ಬೆಂಗಳೂರಿನ 175ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಗರದ ಮಲ್ಲೇಶ್ವರಂ ಪ್ರದೇಶದಲ್ಲಿರುವ ಕೇಂದ್ರ ಕಿಚನ್‌ನಿಂದ 33 ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತದೆ. ಆದರೆ ಆ ಕಿಚನ್‌ಗೆ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದೇ ಇರುವ ಕಾರಣ ಮಧ್ಯಾಹ್ನದ ಊಟವನ್ನು ತಯಾರಿಸಲು ಸಾಧ್ಯವಾಗಲಿಲ್ಲ. ಇದರಿಂದ ಆ 33 ಕ್ಯಾಂಟೀನ್‌ಗಳಿಗೆ ಊಟ ಪೂರೈಕೆ ಆಗಿಲ್ಲ. ಸಂಜೆ ವೇಳೆಯೂ ಇದೇ ಪರಿಸ್ಥಿತಿ ಮುಂದುವರಿದಿದೆ..

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಬಿಎ (BBMP) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು, ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಗುತ್ತಿಗೆದಾರರ ಬಳಿ ಇನ್ನೂ ಎರಡು ಅಥವಾ ಮೂರು ದಿನಗಳಿಗೆ ಸಾಕಾಗುವಷ್ಟು ಸಿಲಿಂಡರ್ ಮಾತ್ರ ಲಭ್ಯವಿದೆ ಎಂದು ತಿಳಿಸಿದ್ದಾರೆ. ಇದಾದ ನಂತರ ಸಿಲಿಂಡರ್ ಪೂರೈಕೆ ಆಗದಿದ್ದರೆ ಆಹಾರ ತಯಾರಿಕೆಗೆ ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇನ್ನೊಂದು ಸಮಸ್ಯೆ ಎಂದರೆ ಇಂದಿರಾ ಕ್ಯಾಂಟೀನ್‌ಗಳ ಅಡುಗೆ ಮನೆಗಳಲ್ಲಿ ಎಲೆಕ್ಟ್ರಿಕ್ ಸ್ಟೌವ್ ಬಳಸಿ ಆಹಾರ ತಯಾರಿಸುವ ವ್ಯವಸ್ಥೆ ಇಲ್ಲದಿರುವುದು. ಹೀಗಾಗಿ ಗ್ಯಾಸ್ ಸಿಲಿಂಡರ್ ಇಲ್ಲದೆ ಅಡುಗೆ ಮಾಡುವ ಪರ್ಯಾಯ ವ್ಯವಸ್ಥೆ ಕೂಡ ತಕ್ಷಣಕ್ಕೆ ಲಭ್ಯವಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 175ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಸಾವಿರಾರು ಬಡವರು, ಕೂಲಿ ಕಾರ್ಮಿಕರು, ರಸ್ತೆ ಕಾರ್ಮಿಕರು ಹಾಗೂ ದಿನಗೂಲಿ ಕೆಲಸ ಮಾಡುವವರು ಈ ಕ್ಯಾಂಟೀನ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಅಗ್ಗದ ದರದಲ್ಲಿ ಊಟ ದೊರೆಯುವುದರಿಂದ ಹಲವರಿಗೆ ಇದು ದೊಡ್ಡ ಸಹಾಯವಾಗಿದೆ. ಆದರೆ ಗ್ಯಾಸ್ ಕೊರತೆಯಿಂದ ಈ ಸೇವೆ ಸ್ಥಗಿತಗೊಂಡರೆ ಸಾವಿರಾರು ಜನರಿಗೆ ಆಹಾರದ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಅಲ್ಲದೆ, ಗ್ಯಾಸ್ ಕೊರತೆಯ ಪರಿಣಾಮ ಈಗಾಗಲೇ ಕೆಲವು ಖಾಸಗಿ ಹೋಟೆಲ್‌ಗಳ ಮೇಲೂ ಬೀಳಲು ಆರಂಭವಾಗಿದೆ. ಮಲ್ಲೇಶ್ವರಂನ ಸಂಪಿಗೆ ರೋಡ್‌ನಲ್ಲಿ ಇರುವ ಪ್ರಸಿದ್ಧ ಉಡುಪಿ ಶ್ರೀ ಕೃಷ್ಣ ರಜತಾದ್ರಿ ಹೋಟೆಲ್ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಬಾಗಿಲು ಮುಚ್ಚಿದೆ. ಗ್ಯಾಸ್ ಇಲ್ಲದ ಕಾರಣ ಆಹಾರ ತಯಾರಿಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಿಬ್ಬಂದಿಗೆ ಸಂಬಳ ನೀಡುವುದೂ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದೇ ರೀತಿಯಲ್ಲಿ ಶ್ರೀರಾಮಪುರ ಮೆಟ್ರೋ ಸ್ಟೇಷನ್ ಸಮೀಪದಲ್ಲಿರುವ “ಸವಿ ಸಾಗರ್ ಗ್ರ್ಯಾಂಡ್” ಹೋಟೆಲ್ ಕೂಡ ಗ್ಯಾಸ್ ಕೊರತೆಯಿಂದ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಇನ್ನೂ ನೆನ್ನೆಯವರೆಗೂ ಗ್ರಾಹಕರಿಗೆ ರುಚಿಕರವಾದ ಆಹಾರವನ್ನು ನೀಡುತ್ತಿದ್ದ ಈ ಹೋಟೆಲ್ ಇದೀಗ ಗ್ಯಾಸ್ ಸಿಲಿಂಡರ್ ಲಭ್ಯವಾಗದ ಕಾರಣ ತಾತ್ಕಾಲಿಕವಾಗಿ ಬಂದ್ ಆಗಿದೆ.

ನಗರದಲ್ಲಿ ಈಗಾಗಲೇ ಕೆಲವು ಹೋಟೆಲ್‌ಗಳು ಇದೇ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ ಇನ್ನೂ ಹಲವು ಹೋಟೆಲ್‌ಗಳು ಕೂಡ ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

Exit mobile version