ರಾಜಕೀಯದವರು ದಿನನಿತ್ಯ ಚದುರಂಗದ ದಾಳ ಉರುಳಿಸುತ್ತಿರುತ್ತೇವೆ: ಡಿ.ಕೆ ಶಿವಕುಮಾರ್

Untitled design 2025 04 10t221244.767

ಬೆಂಗಳೂರು, ಏ.10: “ರಾಜಕೀಯ ಚದುರಂಗ ಆಟವಿದ್ದಂತೆ. ನಾವು ರಾಜಕಾರಣಿಗಳು ನಮ್ಮ ದಿನನಿತ್ಯ ಜೀವನದಲ್ಲಿ ನಮ್ಮ ಚದುರಂಗದ ದಾಳ ಉರುಳಿಸುತ್ತಿರುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ 2ನೇ ಆವೃತ್ತಿಯ ನಮ್ಮ ಬೆಂಗಳೂರು ಇಂಟರ್ ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ ಒಪೆನ್ ಚೆಸ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ರಾಜಕೀಯ ಚೆಸ್ ಆಟವಿದ್ದಂತೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ನಾವು ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕು. ರಾಜಕೀಯದಲ್ಲಿ ಪ್ರತಿನಿತ್ಯ ನಮ್ಮ ದಾಳ ಉರುಳಿಸುತ್ತಿರಬೇಕು. ನಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ಆಕ್ರಮಣ ಮಾಡುತ್ತಿರಬೇಕು” ಎಂದು ಹೇಳಿದರು.

“ಇಂತಹ ಅತ್ಯುತ್ತಮ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ಬಹಳ ಸಂತೋಷವಾಗಿದೆ. ಈ ಟೂರ್ನಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಚೆಸ್ ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ನೀವುಗಳು ಗ್ರಾಮೀಣ ಭಾಗದಲ್ಲೂ ಇಂತಹ ಟೂರ್ನಿ ಆಯೋಜಿಸಿ ಆ ಭಾಗದ ಮಕ್ಕಳಿಗೂ ಪ್ರೋತ್ಸಾಹ ನೀಡಬೇಕು. ನೀವು ನಮ್ಮ ಜಿಲ್ಲೆಯಲ್ಲೂ ಟೂರ್ನಿ ಆಯೋಜಿಸಿ” ಎಂದು ಸಲಹೆ ನೀಡಿದರು.

“ಮಕ್ಕಳು ಈ ಆಟವಾಡಲು ಪ್ರೋತ್ಸಾಹ ನೀಡುತ್ತಿರುವ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಚೆಸ್ ಆಟವನ್ನು ಮೈಗೂಡಿಸಿಕೊಂಡ ಮಕ್ಕಳು ಶಿಸ್ತು ಕಲಿಯುತ್ತಾರೆ. ಚೆಸ್ ಆಟದ ಮೂಲಕ ವಿಶ್ವನಾಥನ್ ಆನಂದ್ ಹಾಗೂ ಇತ್ತೀಚಿನ ದಿನಗಳಲ್ಲಿ ಗುಕೇಶ್ ಅವರು ದೇಶದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿದ್ದಾರೆ” ಎಂದರು.

“ಇಂತಹ ಯುವ ಕ್ರೀಡಾಪಟುಗಳ ಜತೆಗೆ ನಮ್ಮ ಸರ್ಕಾರ ಸದಾ ನಿಲ್ಲಲಿದೆ. ಇಂತಹ ದೊಡ್ಡ ಟೂರ್ನಿ ಆಯೋಜಿಸಿರುವ ಸಂಘಟಕರಿಗೆ ಅಭಿನಂದನೆಗಳು” ಎಂದು ತಿಳಿಸಿದರು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version