ಅಮೃತಹಳ್ಳಿ ವಿಲ್ಲಾ ರೇಪ್ ಕೇಸ್‌ಗೆ ಬಿಗ್ ಟ್ವಿಸ್ಟ್: ಮಾಜಿ ಕಾರ್ಪೊರೇಟರ್ ಮಗ ಅಂದರ್..!

Untitled design (6)

ಬೆಂಗಳೂರು: ಸಿಲಿಕಾನ್ ಸಿಟಿಯ ಅಮೃತಹಳ್ಳಿಯ ವಿಲ್ಲಾವೊಂದರಲ್ಲಿ ನಡೆದಿದ್ದ ಭೀಕರ ಡ್ರಗ್ಸ್ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣದ ಮಾಸ್ಟರ್ ಮೈಂಡ್ ನಿಖಿಲ್ ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ದಾವಣಗೆರೆ ಮೂಲದ ಮಾಜಿ ಕಾರ್ಪೊರೇಟರ್ ಪುತ್ರ ಅನಿರುದ್ಧ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳ ವಿವರ

ಈಗಾಗಲೇ ಈ ಪ್ರಕರಣದ ಪ್ರಮುಖ ಆರೋಪಿಗಳಾದ ನಿಖಿಲ್ ಮತ್ತು ಡಿಕ್ಸನ್ ಸಾಂಡ್ರಾನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಇವರ ವಿಚಾರಣೆ ವೇಳೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಇದೀಗ ಅನಿರುದ್ಧ, ಶ್ರವಣ್ ಮತ್ತು ಮೋಹಿತ್ ಎಂಬುವವರನ್ನು ಬಂಧಿಸಲಾಗಿದೆ.

ಅನಿರುದ್ಧ, ದಾವಣಗೆರೆಯ ಮಾಜಿ ಕಾರ್ಪೊರೇಟರ್ ಪುತ್ರ ಮತ್ತು ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿರುವ ಈತ, ಪಾರ್ಟಿಗಳಿಗೆ ವಿಲ್ಲಾ ಬುಕ್ ಮಾಡುವುದು ಮತ್ತು ಹಣಕಾಸಿನ ವ್ಯವಸ್ಥೆ ಮಾಡುವ ಜವಾಬ್ದಾರಿ ಹೊತ್ತಿದ್ದ, ಶ್ರವಣ್ ಪಾರ್ಟಿಗೆ ಬರುವ ಯುವತಿಯರನ್ನು ಪಿಕ್ ಅಪ್ ಮಾಡಿ ಕರೆತರುವ ಕೆಲಸ ಮಾಡುತ್ತಿದ್ದ ಇನ್ನೂ ಮೋಹಿತ್ ಗುಜರಾತ್ ಮೂಲದವನಾಗಿದ್ದು, ನಿಖಿಲ್ ನಡೆಸುತ್ತಿದ್ದ ಈ ಅಕ್ರಮ ಪಾರ್ಟಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದ.

ದಂಧೆಯ ಜಾಲ ಬಯಲಾಗಿದ್ದು ಹೇಗೆ ?

ಬಂಧಿತ ಐವರು ಆರೋಪಿಗಳು ಒಂದು ವ್ಯವಸ್ಥಿತ ಜಾಲವನ್ನು ಹೊಂದಿದ್ದರು. ಪಾರ್ಟಿಗಳಲ್ಲಿ ಯುವತಿಯರಿಗೆ ಡ್ರಗ್ಸ್ ನೀಡಿ ಪ್ರಜ್ಞೆ ತಪ್ಪಿಸಿ, ನಂತರ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಇವರ ಹವ್ಯಾಸವಾಗಿತ್ತು. ಪ್ರಮುಖ ಆರೋಪಿ ನಿಖಿಲ್ ಪಾರ್ಟಿಯ ರೂವಾರಿಯಾಗಿದ್ದರೆ, ಡಿಕ್ಸನ್ ಸಾಂಡ್ರಾ ಯುವತಿಯರನ್ನು ಸಂಪರ್ಕಿಸಿ ಪಾರ್ಟಿಗೆ ಕರೆತರುವ ಕೆಲಸ ಮಾಡುತ್ತಿದ್ದ. ಅನಿರುದ್ಧ ಮತ್ತು ಉಳಿದವರು ಈ ನೀಚ ಕೃತ್ಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪೊಲೀಸರು ಕೃತ್ಯಕ್ಕೆ ಬಳಸಲಾಗಿದ್ದ KA 05-NC 7299 ನೋಂದಣಿ ಸಂಖ್ಯೆಯ ಫಾರ್ಚುನರ್ ಕಾರನ್ನು ಸೀಜ್ ಮಾಡಿದ್ದಾರೆ. ಪ್ರೇಮಿಗಳ ದಿನಾಚರಣೆಯ ಪಾರ್ಟಿ ಮುಗಿದ ನಂತರ, ಸಂತ್ರಸ್ತ ಯುವತಿಯನ್ನು ಇದೇ ಕಾರಿನಲ್ಲಿ ಡ್ರಾಪ್ ಮಾಡುವ ನೆಪದಲ್ಲಿ ನಿಖಿಲ್ ಕರೆದೊಯ್ದಿದ್ದ. ಈ ವೇಳೆ ಯುವತಿಗೆ ಅಸಭ್ಯವಾಗಿ ವರ್ತಿಸಿ, ನಡೆದ ವಿಚಾರವನ್ನು ಯಾರಿಗೂ ಹೇಳದಂತೆ ಪ್ರಾಣ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ.

ಪೊಲೀಸ್ ತನಿಖೆ ತೀವ್ರ

ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳ ಹೆಸರು ಕೇಳಿಬರುತ್ತಿರುವುದರಿಂದ ಪೊಲೀಸರು ಅತ್ಯಂತ ಎಚ್ಚರಿಕೆಯಿಂದ ತನಿಖೆ ನಡೆಸುತ್ತಿದ್ದಾರೆ. ಡ್ರಗ್ಸ್ ಜಾಲದ ಹಿಂದೆ ಇನ್ನು ಯಾರ್ಯಾರ ಕೈವಾಡವಿದೆ ? ಈ ವಿಲ್ಲಾದಲ್ಲಿ ಈ ಹಿಂದೆ ಇಂತಹ ಎಷ್ಟು ಪಾರ್ಟಿಗಳು ನಡೆದಿವೆ ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

Exit mobile version