ಅಣ್ಣನ ಮಗುವಿನ ಕುತ್ತಿಗೆ ಕೊಯ್ದು ಹತ್ಯೆಗೈದ ತಮ್ಮ

Untitled design (69)

ಮೂರು ವರ್ಷದ ಮಗುವನ್ನು ತನ್ನ ಸ್ವಂತ ಚಿಕ್ಕಪ್ಪನೇ ಹತ್ಯೆಗೈದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ. ಅಂಗನವಾಡಿಗೆ ತೆರಳಿದ್ದ ಮಗುವನ್ನು ಚಿಕ್ಕಪ್ಪ ಭೀರಪ್ಪ ಎಂಬಾತ ಜಾಕಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಕೃತ್ಯಕ್ಕೆ ಕಾರಣ, ಅಣ್ಣ ಹೇಳಿದ ಬುದ್ಧಿವಾದಕ್ಕೆ ತಮ್ಮ ಇಟ್ಟುಕೊಂಡಿದ್ದ ಸೇಡು ಎಂದು ತಿಳಿದುಬಂದಿದೆ.

ಗ್ರಾಮದ ಮಾರುತಿ ವಾಲಿಕಾರ ಎಂಬುವರ ಮೂರು ವರ್ಷದ ಮಗು ಎಂದಿನಂತೆ ಮುಂಜಾನೆ ಅಂಗನವಾಡಿಗೆ ಹೋಗಿತ್ತು. ಎಲ್ಲ ಮಕ್ಕಳೊಂದಿಗೆ ಖುಷಿಯಿಂದ ಕುಳಿತಿದ್ದ ಬಾಲಕನನ್ನು ಚಿಕ್ಕಪ್ಪ ಭೀರಪ್ಪ ಕರೆದುಕೊಂಡು ಹೋಗಿದ್ದಾನೆ. ಮನೆಗೆ ಕರೆದೊಯ್ದ ಭೀರಪ್ಪ, ಮಗುವನ್ನು ನೆಲದ ಮೇಲೆ ಹಾಕಿ, ಹರಿತವಾದ ಆಯುಧದಿಂದ ಇರಿದಿದ್ದಾನೆ. ನೋವಿನಿಂದ ಚೀರಾಡಿದ ಮಗು ಕ್ಷಣಾರ್ಧದಲ್ಲಿ ಜೀವ ಬಿಟ್ಟಿತ್ತು.

ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಗಳು ಮತ್ತು ಗ್ರಾಮಸ್ಥರು ಆರೋಪಿಯನ್ನು ಕಟ್ಟಿಹಾಕಿದ್ದಾರೆ. ಕೆಲವರು ಆಕ್ರೋಶದಿಂದ ಭೀರಪ್ಪನನ್ನು ಸುಟ್ಟುಹಾಕಲು ಯತ್ನಿಸಿದರೂ, ಆ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಮೀನಗಡ ಠಾಣೆಯ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

ಮಗುವಿನ ತಂದೆ ಮಾರುತಿ ಮತ್ತು ಆರೋಪಿ ಭೀರಪ್ಪ ಇಬ್ಬರೂ ಸಹೋದರರು. ಇವರಿಬ್ಬರ ಪತ್ನಿಯರೂ ಕೂಡ ಸ್ವಂತ ಸಹೋದರಿಯರಾಗಿದ್ದಾರೆ. ಆದರೆ, ಇತ್ತೀಚಿಗೆ ಭೀರಪ್ಪ ತನ್ನ ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದ. ಈ ವಿಷಯವನ್ನು ಮಾರುತಿ ತನ್ನ ತಮ್ಮನಿಗೆ ತಪ್ಪು ಎಂದು ಬುದ್ಧಿವಾದ ಹೇಳಿದ್ದ. ಇದರಿಂದ ಕೋಪಗೊಂಡ ಭೀರಪ್ಪ, ಸೇಡಿನ ರೂಪದಲ್ಲಿ ಮಾರುತಿಯ ಮಗುವಿನ ಮೇಲೆ ದಾಳಿ ಮಾಡಿ, ಈ ಕೃತ್ಯವನ್ನು ಎಸಗಿದ್ದಾನೆ.

Exit mobile version