ದೆಹಲಿಯಲ್ಲಿ ಬೆಳಗಾವಿ ಶಾಸಕ ಅಭಯ್ ಪಾಟೀಲ್ ಕಾರು ಅಪಘಾತ: ಶಾಸಕರು ಸೇಫ್

ಮುನ್ಸೂಚನೆ (4)

ನವದೆಹಲಿ, ಆಗಸ್ಟ್ 24: ದೆಹಲಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಸೇರಿದಂತೆ ಆರು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ರಾತ್ರಿ ದೆಹಲಿಯ ಐಟಿಒ ಜಂಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅಪಘಾತದಲ್ಲಿ ದೆಹಲಿಯ ಕಿರಾರಿ ಕ್ಷೇತ್ರದ ಶಾಸಕ ಅನಿಲ್ ಝಾ ಕೂಡ ಗಾಯಗೊಂಡಿದ್ದಾರೆ. ಇಬ್ಬರೂ ಶಾಸಕರು ‘ಕರ್ನಾಟಕ ಸರ್ಕಾರ’ ಎಂದು ಬೋರ್ಡ್ ಹೊಂದಿದ್ದ ಇನ್ನೋವಾ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಐಟಿಒ ಜಂಕ್ಷನ್‌ನಲ್ಲಿ ಅಪಘಾತ

ಭಾನುವಾರ ರಾತ್ರಿ ಸುಮಾರು 9.30ರ ವೇಳೆಗೆ ಲಕ್ಷ್ಮೀ ನಗರದಿಂದ ಐಟಿಒ ಕಡೆಗೆ ಸ್ವಿಫ್ಟ್ ಕಾರೊಂದು ಸಂಚರಿಸುತ್ತಿತ್ತು. ಪಿಡಬ್ಲ್ಯೂಡಿ ಕಚೇರಿ ಸಮೀಪ ಬರುತ್ತಿದ್ದ ವೇಳೆ ಕಾರಿನಲ್ಲಿದ್ದ ಸಿಲಿಂಡರ್‌ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎನ್ನಲಾಗಿದೆ.

ಸ್ಫೋಟದ ಪರಿಣಾಮ ಕಾರಿನ ನಿಯಂತ್ರಣ ತಪ್ಪಿದೆ. ಬಳಿಕ ಸ್ವಿಫ್ಟ್ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಅಲ್ಲಿದ್ದ ರೇಲಿಂಗ್‌ಗೆ ಅಪ್ಪಳಿಸಿದೆ. ನಂತರ ನಿಯಂತ್ರಣ ತಪ್ಪಿದ ವಾಹನ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇನ್ನೋವಾ ಎಸ್‌ಯುವಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. 

ಸ್ವಿಫ್ಟ್ ಕಾರನ್ನು 32 ವರ್ಷದ ಅಶುತೋಷ್ ಪಾಂಡೆ ಚಲಾಯಿಸುತ್ತಿದ್ದರು. ಅವರೊಂದಿಗೆ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ಕೂಡ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದ ತೀವ್ರತೆಗೆ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವುದಾಗಿ ವರದಿಯಾಗಿದೆ.

ಇನ್ನೋವಾ ಕಾರಿನಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹಾಗೂ ದೆಹಲಿಯ ಕಿರಾರಿ ಕ್ಷೇತ್ರದ ಶಾಸಕ ಅನಿಲ್ ಝಾ ಪ್ರಯಾಣಿಸುತ್ತಿದ್ದರು. ಎರಡೂ ವಾಹನಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ವಾಹನಗಳಿಗೆ ಭಾರಿ ಹಾನಿಯಾಗಿದೆ.

ಏರ್‌ಬ್ಯಾಗ್‌ನಿಂದ ತಪ್ಪಿದ ದೊಡ್ಡ ಅನಾಹುತ

ಅಪಘಾತದ ವೇಳೆ ಎರಡೂ ಕಾರುಗಳ ಮುಂಭಾಗದ ಭಾಗಕ್ಕೆ ತೀವ್ರ ಹಾನಿಯಾಗಿದ್ದರೂ, ವಾಹನಗಳಲ್ಲಿದ್ದ ಏರ್‌ಬ್ಯಾಗ್‌ಗಳು ಸಮಯಕ್ಕೆ ಸರಿಯಾಗಿ ತೆರೆದುಕೊಂಡಿವೆ. ಇದರಿಂದ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಗಾಯಗಳಾಗಿಲ್ಲ. 

ಅಪಘಾತದ ಸದ್ದು ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಬಳಿಕ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

LNJP ಆಸ್ಪತ್ರೆಗೆ ದಾಖಲು

ಅಪಘಾತದಲ್ಲಿ ಗಾಯಗೊಂಡ ಎಲ್ಲ ಆರು ಮಂದಿಯನ್ನು ದೆಹಲಿಯ ಲೋಕನಾಯಕ ಜಯಪ್ರಕಾಶ್ (LNJP) ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಗಾಯಾಳುಗಳನ್ನು ಪರಿಶೀಲಿಸಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶಾಸಕ ಅಭಯ್ ಪಾಟೀಲ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗಂಭೀರ ಅಪಾಯವಿಲ್ಲ ಎಂದು ತಿಳಿದುಬಂದಿದೆ. 

 

Exit mobile version