BREAKING: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ

Untitled design 2026 01 06T160503.837

ಬೆಳಗಾವಿ: ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕನ ಮೇಲೆ ಕಿಡಿಗೇಡಿಗಳು ಭೀಕರವಾಗಿ ಚಾಕುವಿನಿಂದ ದಾಳಿ ನಡೆಸಿರುವ ಘಟನೆ ನಗರದ ಹೃದಯಭಾಗದಲ್ಲಿರುವ ಕ್ಲಬ್ ರಸ್ತೆಯಲ್ಲಿ ಸಂಭವಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಘಟನೆಯ ವಿವರ:

ದಾಳಿಗೊಳಗಾದವರನ್ನು ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿ ಬಸವಂತ ಕಡೋಲ್ಕರ್ (32) ಎಂದು ಗುರುತಿಸಲಾಗಿದೆ. ಬಸವಂತ ಅವರು ಕಳೆದ ಹಲವು ದಿನಗಳಿಂದ ಮೃಣಾಲ್ ಹೆಬ್ಬಾಳ್ಕರ್ ಅವರ ವೈಯಕ್ತಿಕ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇಂದು ಬಸವಂತ ಅವರು ಕ್ಲಬ್ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಕೆಳಗೆ ನಿಂತಿದ್ದ ಸಂದರ್ಭದಲ್ಲಿ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಕಿಡಿಗೇಡಿಗಳು ಏಕಾಏಕಿ ಅವರ ಮೇಲೆ ದಾಳಿ ಮಾಡಿದ್ದಾರೆ.

ನಾಲ್ಕು ಕಡೆ ಚಾಕು ಇರಿತ:

ದಿಡೀರನೇ ಬಸವಂತ ಅವರ ಮೇಲೆ ದಾಳಿ ಮಾಡಿದ ಕಿಡಿಗೇಡಿಗಳು, ಎದೆ, ಭುಜ ಹಾಗೂ ತೊಡೆ ಭಾಗ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಚಾಕುವಿನಿಂದ ಇರಿದಿದ್ದಾರೆ. ಕೂಡಲೆ ಸ್ಥಳೀಯರು ಬಸವಂತ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ತಿಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್‌ ಪುತ್ರ ಮೃಣಾಲ್ ಹೆಬ್ಬಾಳ್ಕರ್ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ಚಾಲಕನ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಬೆಳಗಾವಿ ಡಿಸಿಪಿ ಮತ್ತು ಎಸಿಪಿ ಅವರು ಸಹ ಆಸ್ಪತ್ರೆಗೆ ಭೇಟಿ ನೀಡಿ, ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Exit mobile version