ಶೀಘ್ರದಲ್ಲೇ ಬಿಯರ್ ಪ್ರಿಯರಿಗೆ ಬಿಗ್‌‌‌‌‌‌‌‌ ಶಾಕ್: 15 ರೂ.ವರೆಗೆ ದುಬಾರಿ?

Web (36)

ಕರ್ನಾಟಕ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ (ಎಇಡಿ)ಯನ್ನು ಶೇ.10ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಈ ಸಂಬಂಧ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಈ ನಿರ್ಧಾರದಿಂದ ಬಿಯರ್ ಬೆಲೆ ಪ್ರತಿ ಬಾಟಲಿಗೆ 10 ರಿಂದ 15 ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ. ಅಬಕಾರಿ ಇಲಾಖೆಯ ಈ ಕ್ರಮಕ್ಕೆ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಸ್ತುತ, ರಾಜ್ಯದಲ್ಲಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.195ರಷ್ಟಿದೆ. ಹೊಸ ಕರಡು ಅಧಿಸೂಚನೆಯ ಪ್ರಕಾರ, ಈ ಸುಂಕವನ್ನು ಶೇ.205ಕ್ಕೆ ಹೆಚ್ಚಿಸಲಾಗುವುದು. ಇದರಿಂದ ಪ್ರೀಮಿಯಂ ಮತ್ತು ಇತರ ಬಿಯರ್ ಬ್ರಾಂಡ್‌ಗಳ ಬೆಲೆ 10-15 ರೂ. ಹೆಚ್ಚಾಗಬಹುದು ಎಂದು ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ. ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬಿಯರ್ ಬ್ರಾಂಡ್‌ಗಳ ಬೆಲೆ 5 ರೂ. ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.

ADVERTISEMENT
ADVERTISEMENT

ಇದು ಕರ್ನಾಟಕದಲ್ಲಿ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳದ ಮೂರನೇ ಸಂದರ್ಭವಾಗಿದೆ. 2023ರ ಜುಲೈಯಲ್ಲಿ ಕಾಂಗ್ರೆಸ್ ಸರಕಾರ ಸುಂಕವನ್ನು ಶೇ.175ರಿಂದ ಶೇ.185ಕ್ಕೆ ಹೆಚ್ಚಿಸಿತ್ತು. 2025ರ ಜನವರಿ 20ರಂದು ಬಜೆಟ್ಗೆ ಮುನ್ನವೇ ಸುಂಕವನ್ನು ಶೇ.185ರಿಂದ ಶೇ.195ಕ್ಕೆ ಏರಿಸಲಾಗಿತ್ತು. ಕಳೆದ ಎರಡು ಬಾರಿಯ ಏರಿಕೆಯಿಂದ ರಾಜ್ಯದ ವಿವಿಧ 6 ಬಗೆಯ ಬಿಯರ್‌ಗಳ ಬೆಲೆ 10 ರಿಂದ 45 ರೂ. ವರೆಗೆ ದುಬಾರಿಯಾಗಿತ್ತು. ಈಗ ಮತ್ತೊಮ್ಮೆ ತೆರಿಗೆ ಹೆಚ್ಚಳದಿಂದ ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆಯಿದೆ.

ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ಅಬಕಾರಿ ಇಲಾಖೆಯ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಸೋಸಿಯೇಶನ್ ಅಧ್ಯಕ್ಷ ಎಸ್.ಗುರುಸ್ವಾಮಿ ಅವರು, “ಈ ದರ ಏರಿಕೆಯಿಂದ ಮಾರಾಟಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ. ನಾವು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಿದ್ದೇವೆ” ಎಂದು ಹೇಳಿದ್ದಾರೆ. ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಅವರು, “ಮದ್ಯ ಮತ್ತು ಬಿಯರ್ ದರಗಳನ್ನು ನಿಗದಿಪಡಿಸುವಾಗ ಚಿಲ್ಲರೆ ಮಾರಾಟಗಾರರ ಸಭೆ ಕರೆದು ಅಭಿಪ್ರಾಯ ಪಡೆಯಬೇಕು. ದರಗಳು ಗ್ರಾಹಕರ ಕೈಗೆಟಕುವಂತೆ ಇರಬೇಕು” ಎಂದು ಅಬಕಾರಿ ಇಲಾಖೆಗೆ ಮನವಿ ಮಾಡಿದ್ದಾರೆ.

ಅಬಕಾರಿ ಇಲಾಖೆಯು ಕರಡು ಅಧಿಸೂಚನೆ 7 ದಿನಗಳ ಕಾಲಾವಕಾಶವನ್ನು ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ನೀಡಿದೆ. ಈ ಅವಧಿಯಲ್ಲಿ ಗ್ರಾಹಕರು ಮತ್ತು ವ್ಯಾಪಾರಿಗಳು ತಮ್ಮ ಅಭಿಪ್ರಾಯವನ್ನು ಇಲಾಖೆಗೆ ಸಲ್ಲಿಸಬಹುದು. ಆದರೆ, ದರ ಏರಿಕೆಯಿಂದ ಗ್ರಾಹಕರಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುವ      ಸಾಧ್ಯತೆಯಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ.

ಅಬಕಾರಿ ಇಲಾಖೆಯು ಸಾರ್ವಜನಿಕರ ಮತ್ತು ವ್ಯಾಪಾರಿಗಳ ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಆದರೆ, ಬಿಯರ್ ದರ ಏರಿಕೆಯಿಂದ ರಾಜ್ಯದ ಮದ್ಯ ಮಾರಾಟ ವ್ಯವಹಾರದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಬಿಯರ್ ಲಭ್ಯವಾಗುವಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ವೈನ್ ಅಸೋಸಿಯೇಶನ್ ಒತ್ತಾಯಿಸಿದೆ.

Exit mobile version