ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶ ಮಾಡಿದೆ. ರೈತರು, ಜನರು, ಪ್ರತಿಪಕ್ಷಗಳು ಪ್ರತಿಭಟನೆ ಮಾಡಿದರೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹಾವೇರಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾದ ವಿರೂಪಾಕ್ಷಪ್ಪ ಬಳ್ಳಾರಿಯವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ತೋರಿಸಿರುವ ಉತ್ಸಾಹದಿಂದ ಹೊಸ ಹುಮ್ಮಸ್ಸು ಬಂದಿದೆ. ನಾವೆಲ್ಲರೂ ಅಧಿಕಾರದಲ್ಲಿದ್ದಾಗಲೂ ಪಕ್ಷ ಸಂಘಟನೆ ಮಾಡಿದ್ದೇವೆ. ಅಧಿಕಾರ ಇಲ್ಲದಿರುವಾಗಲೂ ಹೋರಾಟ ಮಾಡಿದ್ದೇವೆ. ಈ ಭಾಗದ ಜೀವನದಿಗಳಿಗಾಗಿ ಹೋರಾಟ ಮಾಡಿದ್ದೇವೆ. ಅಧಿಕಾರಕ್ಕೆ ಬಂದಾಗ ಅವೆಲ್ಲ ಕಾರ್ಯ ಮಾಡಿದ್ದೇವೆ. ನಮ್ಮ ನಾಯಕ ಯಡಿಯೂರಪ್ಪ ಅವರು ಹೊರಾಟ ಮಾಡುವುದನ್ನು ಹೇಳಿದ್ದಾರೆ.
ನಾವು ಬಡವರ ಪರ, ಜನಪರ ಸರ್ಕಾರವನ್ನು ಇಡೀ ದೇಶವೇ ಮೆಚ್ಚುಮತೆ ಮಾಡಿದ್ದೇವೆ. ನಮ್ಮ ಶಾಕಸರು ಮುಖಂಡರಿಗೆ ಕವಿ ಮಾತು ಹೇಳುತ್ತೇನೆ. ಮುಂದಿನ ಎರಡೂವರೆ ವರ್ಷದಲ್ಲಿ ಪಕ್ಷದ ಗೆಲುವಿಗೆ ಹೇಗೆ ಶ್ರಮಿಸಬೇಕು ಎಂದು ಚಿಂತನೆ ಮಾಡಬೇಕಿದೆ. ಪ್ರತಿದಿನ ಸತ್ಯಾಗ್ರಹ ಮಾಡುವಷ್ಟು ವಿಷಯ ಕಾಂಗ್ರೆಸ್ ವಿಷಯ ಕೊಡುತ್ತಿದೆ. ಐದು ವರ್ಷದ ಕೊನೆಯಲ್ಲಿ ಬರುವ ಪರಿಸ್ಥಿತಿ ಎರಡೇ ವರ್ಷದಲ್ಲಿ ರಾಜ್ಯದಲ್ಲಿ ಬಂದಿದೆ ರಾಜ್ಯದಲ್ಲಿ ಅತ್ಯಂತ ಕೆಟ್ಟ ದುಷ್ಟ ಸರ್ಕಾರ ಇದೆ. ಒಂದೂ ಕೂಡ ಜನಪರ ನಿರ್ಣಯ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಕಾಲದಲ್ಲಿ ರೈತರ ಮಕ್ಕಳಿಗೆ ಸಬ್ಸಿಡಿ ಕೊಡುತ್ತಿದ್ದೇವು ಅದನ್ನು ನಿಲ್ಲಿಸಿದ್ದಾರೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವು ಅದನ್ನು ನಿಲ್ಲಿಸಿದ್ದಾರೆ. ಬಡಮಕ್ಕಳಿಗೆ ವಿಶೇಷವಾಗಿ ಹೆಚ್ಚಿನ ಹಾಸ್ಟೆಲ್ ವ್ಯವಸ್ಥೆ ಮಾಡಿದ್ದೇವು ಅದನ್ನು ಕಡಿತಗೊಳಿಸಿದರು. ಪ್ರಜಾಪ್ರಭುತ್ವವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸಂಪೂರ್ಣ ನಾಶ ಮಾಡಿದೆ. ರೈತರು, ಜನರು, ಪ್ರತಿಪಕ್ಷಗಳು ಪ್ರತಿಭಟನೆ ಮಾಡಿದರೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಐವತ್ತು ವರ್ಷಗಳ ಹಿಂದೆ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ಎಲ್ಲರ ಹಕ್ಕುಗಳನ್ನು ಮೊಟಕುಗೊಳಿಸಿದ್ದರು.
ಈಗ ಅಘೋಷಿತವಾಗಿ ತುರ್ತುಪರಿಸ್ಥಿತಿ ಇದೆ. ಪೊಲಿಸ್ ಸ್ಟೇಷನ್ ಗಳು ವಸೂಲಿ ಕೇಂದ್ರಗಳಾಗಿವೆ. ಶಾಲಾ ಕಾಲೇಜುಗಳ ಪಕ್ಕದಲ್ಲಿ ಡ್ರಗ್ಸ್ ಗಾಂಜಾ ಮಾರಾಟ ಮಾಡಲಾಗುತ್ತಿದೆ. ನಮ್ಮ ಮಕ್ಕಳ ಭವಿಷ್ಯದ ಹಾಳಾಗುತ್ತಿದೆ. ರಾಜಕೀಯ ಪ್ರೇರಿತ ಪ್ರಕರಣ ದಾಖಲಾಗುತ್ತಿವೆ. ಹಾನಗಲ್ ತಾಲೂಕಿನಲ್ಲಿ ಒಬ್ಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಅವರನ್ನು ಬೇಲ್ ಮೇಲೆ ಬಿಡುಗಡೆ ಮಾಡಲು ಹುನ್ನಾರ ನಡೆದಿದೆ. ಅದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಒಸಿ ಬರೆಯುವವರನ್ನು, ರೇಪ್ ಮಾಡುವವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕೊಡುಗೆ ಏನು?
ಹಾವೇರಿ ಜಿಲ್ಲೆಯಲ್ಲಿ ನಾವು 8 ನೀರಾವರಿ ಯೋಜನೆಗಳನ್ನು ಮಾಡಿದ್ದೇವೆ. ಸಿಎಂ ಇಲ್ಲಿ ಬಂದು ಯಡಿಯೂರಪ್ಪ, ಬೊಮ್ಮಾಯಿ ಕೊಡುಗೆ ಏನು ಎಂದು ಕೇಳುತ್ತಾರೆ. ನಾವು ಮಾಡಿರುವ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದ್ಸಾರೆ. ಹಾವೇರಿ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು ? ಮೆಡಿಕಲ್ ಕಾಲೇಜ್, ಎಂಜನೀಯರಿಂಗ್ ಕಾಲೇಜ್ , ಕೆಎಂಎಫ್ ಮೆಗಾ ಡೈರಿ, ಎಂಟು ನೀರಾವರಿ ಯೋಜನೆಗಳು ಬಿಜೆಪಿ ಅವಧಿಯಲ್ಲಿ ಆಗಿವೆ. ಯಡಿಯೂರಪ್ಪ ನಮ್ಮ ಅವಧಿಯಲ್ಲಿ ಒಂದೂವರೆ ಲಕ್ಷ ಎಕರೆ ನೀರಾವರಿಯಾಗಿದೆ ಎಂದರು.
ಕಾಂಗ್ರೆಸ್ ವಿರುದ್ದ ಅಲೆ
ರಾಜ್ಯದಲ್ಲಿ ಈಗ ಕಾಂಗ್ರೆಸ್ ವಿರುದ್ದ ಅಲೆ ಎದ್ದಿದೆ. ಕಾಂಗ್ರೆಸ್ ಶಾಸಕರೇ ಆರೋಪ ಮಾಡುತ್ತಿದ್ದಾರೆ. ಅವರೇ ರಾಜಿನಾಮೆ ಕೊಡುವ ಮಾತನಾಡುತ್ತಿದ್ದಾರೆ. ಸಚಿವ ಎಚ್. ಕೆ ಪಾಟೀಲರು ಸಂಪುಟದಲ್ಲಿದ್ದರೂ ಬಹಿರಂಗವಾಗಿ ಹೇಳಿದ್ದಾರೆ. ಈಗ ಸಿಎಂ ಏನು ಮಾಡುತ್ತಾರೆ ಹೇಳಬೇಕು. ಭ್ರಷ್ಟಾಚಾರದ ವಿರುದ್ದ ಪಾದಯಾತ್ರೆ ಮಾಡಿದ್ದರು. ಈಗ ಏನು ಮಾಡುತ್ತಾರೆ ಹೇಳಬೇಕು. ಕೇಂದ್ರ ಸರ್ಕಾರ ಗಣಿ ಗುತ್ತಿಗೆ ನೀಡಲು ಪಾರದರ್ಶಕತೆ ತರಲು ಕಾನೂನು ರೂಪಿಸಿದೆ. ಅದು ಜಾರಿಯಾಗುವ ಹಿಂದಿನ ದಿನ ಸಿದ್ದರಾಮಯ್ಯ ಲೈಸೆನ್ಸ್ ನವೀಕರಣ ಮಾಡಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ಎಚ್.ಕೆ. ಪಾಟಿಲರಿಗೆ ಕಳಕಳಿ ಇದ್ದರೆ ಅದನ್ನೂ ತನಿಖೆಗೆ ಕೊಡಿ ಎಂದು ಆಗ್ರಹಿಸಿದರು.