ಕುಣಿಗಲ್‌ಗೆ ಶಿಫ್ಟ್ ಆಗಲಿದೆ ಬೆಂಗಳೂರು ರೇಸ್ ಕೋರ್ಸ್: ಸಚಿವ ಸಂಪುಟದ ಮಹತ್ವದ ನಿರ್ಧಾರ

ಬೆಂಗಳೂರು: ದಶಕಗಳ ಇತಿಹಾಸವಿರುವ ಬೆಂಗಳೂರು ಟರ್ಫ್ ಕ್ಲಬ್ (BTC) ಅಥವಾ ರೇಸ್ ಕೋರ್ಸ್ ಅನ್ನು ರಾಜಧಾನಿಯಿಂದ ಹೊರಹಾಕಲು ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ರೇಸ್ ಕೋರ್ಸ್ ಅನ್ನು ತುಮಕೂರು ಜಿಲ್ಲೆಯ ಕುಣಿಗಲ್ ಸ್ಟಡ್ ಫಾರ್ಮ್‌ಗೆ ಸ್ಥಳಾಂತರಿಸಲು ಅನುಮೋದನೆ ನೀಡಲಾಗಿದೆ.

ಸ್ಥಳಾಂತರಕ್ಕೆ ಪ್ರಮುಖ ಕಾರಣಗಳೇನು ?

ಸಚಿವ ಸಂಪುಟದ ನಿರ್ಧಾರದ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, ರೇಸ್ ಕೋರ್ಸ್ ಸ್ಥಳಾಂತರದ ಹಿಂದೆ ಹಲವು ತಾಂತ್ರಿಕ ಮತ್ತು ಸಾರ್ವಜನಿಕ ಹಿತಾಸಕ್ತಿಗಳಿವೆ ಎಂದು ತಿಳಿಸಿದರು.

  1. ಬಾಡಿಗೆ ಪರಿಷ್ಕರಣೆ ವಿಳಂಬ: 2010ರ ಜನವರಿ 1ರಿಂದ ಟರ್ಫ್ ಕ್ಲಬ್‌ನ ಬಾಡಿಗೆಯನ್ನು ಪರಿಷ್ಕರಿಸಲಾಗಿರಲಿಲ್ಲ. ಈ ಕುರಿತು ಆಡಿಟ್ ವರದಿಗಳಲ್ಲಿ ಗಂಭೀರ ಆಕ್ಷೇಪಣೆಗಳು ವ್ಯಕ್ತವಾಗಿದ್ದವು.

  2. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೂಚನೆ: ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (PAC) ಈ ಹಿಂದೆಯೇ ರೇಸ್ ಕೋರ್ಸ್ ಅನ್ನು ನಗರದ ಹೃದಯಭಾಗದಿಂದ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

  3. ಬಾಕಿ ಪಾವತಿ: 2010ರಿಂದ ಸ್ಥಳಾಂತರವಾಗುವವರೆಗಿನ ಅವಧಿಗೆ, ಟರ್ಫ್ ಕ್ಲಬ್ ತನ್ನ ವಾರ್ಷಿಕ ಆದಾಯದ ಶೇಕಡಾ 2ರಷ್ಟನ್ನು ಲೋಕೋಪಯೋಗಿ ಇಲಾಖೆಗೆ (PWD) ಪಾವತಿಸಬೇಕು ಎಂದು ಸಂಪುಟ ಕಡ್ಡಾಯಗೊಳಿಸಿದೆ.

ಬೆಂಗಳೂರು ಟರ್ಫ್ ಕ್ಲಬ್‌ಗೆ ಪರ್ಯಾಯವಾಗಿ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿರುವ ಐತಿಹಾಸಿಕ ಸ್ಟಡ್ ಫಾರ್ಮ್‌ನಲ್ಲಿ 110 ಎಕರೆ ಜಮೀನನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಶೀಘ್ರವೇ ಅಧಿಕೃತ ಆದೇಶ ಹೊರಬೀಳಲಿದ್ದು, ಎಷ್ಟು ಕಾಲಮಿತಿಯೊಳಗೆ ಕ್ಲಬ್ ಅನ್ನು ಪೂರ್ಣವಾಗಿ ಶಿಫ್ಟ್ ಮಾಡಬೇಕು ಎಂಬ ಗಡುವನ್ನು ಅದರಲ್ಲಿ ಉಲ್ಲೇಖಿಸಲಾಗುತ್ತದೆ.

ಬೆಂಗಳೂರಿನ ಜಾಗ ಏನಾಗಲಿದೆ ?

ರೇಸ್ ಕೋರ್ಸ್ ಸ್ಥಳಾಂತರಗೊಂಡ ನಂತರ ಬೆಂಗಳೂರಿನ ಆ ಬೃಹತ್ ಜಾಗವನ್ನು ಸರ್ಕಾರ ತನ್ನ ವಶದಲ್ಲೇ ಉಳಿಸಿಕೊಳ್ಳಲಿದೆ.

ಈ ನಿರ್ಧಾರವು ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ನಗರದ ಪರಿಸರ ಸಮತೋಲನ ಕಾಯ್ದುಕೊಳ್ಳಲು ಪೂರಕವಾಗಲಿದೆ ಎಂದು ಸರ್ಕಾರ ಆಶಿಸಿದೆ.

Exit mobile version