ಬೆಂಗಳೂರಿಗರ ಗಮನಕ್ಕೆ: ಜ. 3ರಿಂದ 10ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತ!

Untitled design 2026 01 02T205209.617

ಬೆಂಗಳೂರು, ಜ.2: ಬೆಂಗಳೂರು ನಗರದಲ್ಲಿ ಮುಂದಿನ ಒಂದು ವಾರ ವಿದ್ಯುತ್ ಬಳಕೆದಾರರು ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, 66/11 ಕೆ.ವಿ ಹೆಣ್ಣೂರು ರೋಡ್ ಉಪ-ಕೇಂದ್ರದ ವ್ಯಾಪ್ತಿಯ ಹಲವಾರು ಪ್ರದೇಶಗಳಲ್ಲಿ ಜನವರಿ 3ರಿಂದ ಜನವರಿ 10ರವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.

ಬೆಸ್ಕಾಂ ಮಾಹಿತಿ ಪ್ರಕಾರ, ಈ ಅವಧಿಯಲ್ಲಿ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಂತ ಹಂತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ತುರ್ತು ತಾಂತ್ರಿಕ ನಿರ್ವಹಣೆ, ಲೈನ್ ದುರಸ್ತಿ, ಹಾಗೂ ವಿದ್ಯುತ್ ಪೂರೈಕೆಯ ಭದ್ರತೆ ಮತ್ತು ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಉತ್ತರ-ಪೂರ್ವ ಭಾಗಕ್ಕೆ ಸೇರಿರುವ ಹೆಣ್ಣೂರು ರೋಡ್ ಉಪ-ಕೇಂದ್ರ ವ್ಯಾಪ್ತಿಯ ಅನೇಕ ವಸತಿ ಪ್ರದೇಶಗಳು, ಲೇಔಟ್‌ಗಳು, ಶಾಲಾ-ಕಾಲೇಜುಗಳು ಹಾಗೂ ಕೈಗಾರಿಕಾ ವಲಯಗಳು ಈ ವಿದ್ಯುತ್ ವ್ಯತ್ಯಯಕ್ಕೆ ಒಳಪಡಲಿವೆ. ಹೀಗಾಗಿ ಸಾರ್ವಜನಿಕರು ಮುಂಚಿತವಾಗಿ ಅಗತ್ಯ ಸಿದ್ಧತೆ ಮಾಡಿಕೊಂಡು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ವಿದ್ಯುತ್ ವ್ಯತ್ಯಯ ಎದುರಾಗುವ ಪ್ರಮುಖ ಪ್ರದೇಶಗಳಲ್ಲಿ ಹೆಣ್ಣೂರು ಬಂಡೆ, ಸಾಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ಟ್ ಜಯಂತಿ ಕಾಲೇಜು ಪ್ರದೇಶ, ಕೆ. ನಾರಾಯಣಪುರ, ಬಿಳಿ ಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್ ಸೇರಿವೆ. ಅಲ್ಲದೆ ಕೆ. ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿಎಸ್ಐ ಗೇಟ್, ಬೈರತಿ ಕ್ರಾಸ್ ಮತ್ತು ಬೈರತಿ ಗ್ರಾಮದಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಇದಲ್ಲದೆ ಎವರ್‌ಗ್ರೀನ್ ಲೇಔಟ್, ಕನಕಶ್ರೀ ಲೇಔಟ್, ಗೆದ್ದಲಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ಮೆಂಟ್, ಹಿರೇಮಠ್ ಲೇಔಟ್, ಟ್ರಿನಿಟಿ ಫಾರ್ಚ್ಯೂನ್, ಮೈಕಲ್ ಸ್ಕೂಲ್, ಬಿಎಚ್ಕೆ ಇಂಡಸ್ಟ್ರೀಸ್, ಜಾನಕಿರಾಮ್ ಲೇಔಟ್, ವಡ್ಡರಪಾಳ್ಯ, ಅನುಗ್ರಹ ಲೇಔಟ್, ಕಾವೇರಿ ಲೇಔಟ್ ಹಾಗೂ ಆತ್ಮ ವಿದ್ಯಾನಗರ (ಬೈರತಿ ಗ್ರಾಮ) ಪ್ರದೇಶಗಳು ಸಹ ಈ ಪಟ್ಟಿಯಲ್ಲಿ ಸೇರಿವೆ.

ಅದರ ಜೊತೆಗೆ ಕೆಆರ್‌ಸಿ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್‌ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂಧ್ರ ಕಾಲೋನಿ, ಮಂಜುನಾಥ ನಗರ, ಹೊರಮಾವು ಬಿಬಿಎಂಪಿ ವ್ಯಾಪ್ತಿ, ಅಗರ ಗ್ರಾಮ, ಪಾತಾಳಮ್ಮ ದೇವಸ್ಥಾನ ಸುತ್ತಮುತ್ತ, ಎಕೆಆರ್ ಸ್ಕೂಲ್, ನ್ಯೂ ಮಿಲೇನಿಯಮ್ ಸ್ಕೂಲ್, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್ ಹಾಗೂ ಕ್ರಿಶ್ಚಿಯನ್ ಕಾಲೇಜು ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಅವಧಿಯಲ್ಲಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ವ್ಯಾಪಾರಸ್ಥರು ಮತ್ತು ಕೈಗಾರಿಕಾ ಘಟಕಗಳು ವಿಶೇಷವಾಗಿ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ಅಗತ್ಯ ವಿದ್ಯುತ್ ಉಪಕರಣಗಳಿಗೆ ಬ್ಯಾಕಪ್ ವ್ಯವಸ್ಥೆ, ಇನ್‌ವರ್ಟರ್ ಅಥವಾ ಜನರೇಟರ್ ವ್ಯವಸ್ಥೆ ಮಾಡಿಕೊಂಡರೆ ತೊಂದರೆ ತಪ್ಪಿಸಿಕೊಳ್ಳಬಹುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version