ಬಂಡೀಪುರ ಸಫಾರಿಯಲ್ಲಿ ಭಾರೀ ಬದಲಾವಣೆ; ವಾಹನಗಳ ಮೇಲೆ GPS ಕಣ್ಗಾವಲು

ನಾಲ್ಕು ದಿನಕ್ಕೆ 150ಕೋಟಿ.. (16)

ಚಾಮರಾಜನಗರ ಸೆ.8: ವನ್ಯಜೀವಿಗಳ ಸಹಜ ಚಲನವಲನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಸಫಾರಿ ವೇಳೆ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹೊಸ ನಿಗಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಫಾರಿ ನಡೆಸುವ 18 ವಾಹನಗಳಿಗೆ GPS ಹಾಗೂ ಡ್ಯಾಶ್‌ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಬಂಡೀಪುರ ಸಫಾರಿ ವೇಳೆ ಹುಲಿ, ಚಿರತೆ ಸೇರಿದಂತೆ ಅಪರೂಪದ ವನ್ಯಜೀವಿಗಳು ಕಾಣಿಸಿಕೊಂಡಾಗ ಕೆಲ ವಾಹನಗಳ ಚಾಲಕರು ಇತರ ಸಫಾರಿ ವಾಹನಗಳ ಚಾಲಕರಿಗೆ ಮಾಹಿತಿ ನೀಡುತ್ತಿದ್ದರು. ಇದರಿಂದ ಕೆಲವೇ ಕ್ಷಣಗಳಲ್ಲಿ ಹೆಚ್ಚಿನ ಸಂಖ್ಯೆಯ ಸಫಾರಿ ವಾಹನಗಳು ಪ್ರಾಣಿಗಳು ಇರುವ ಪ್ರದೇಶಕ್ಕೆ ತೆರಳಿ ಒಂದೇ ಕಡೆ ಜಮಾಯಿಸುತ್ತಿದ್ದವು.

ಹಲವು ವಾಹನಗಳು ಏಕಕಾಲದಲ್ಲಿ ಪ್ರಾಣಿಗಳ ಸುತ್ತಮುತ್ತ ಸೇರುವುದರಿಂದ ವನ್ಯಜೀವಿಗಳ ಸಹಜ ಸಂಚಾರ, ಬೇಟೆ ಸೇರಿದಂತೆ ನೈಸರ್ಗಿಕ ಚಟುವಟಿಕೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಇಂತಹ ಘಟನೆಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮುಂದಾಗಿದೆ.

ಇದಲ್ಲದೆ, ಸಫಾರಿಗೆ ನಿಗದಿಪಡಿಸಿರುವ ವಲಯವನ್ನು ಮೀರಿ ನಿರ್ಬಂಧಿತ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿದೆ ಎಂಬ ದೂರುಗಳು ಕೂಡ ಕೇಳಿಬಂದಿದ್ದವು. ಇಂತಹ ಸಂದರ್ಭಗಳಲ್ಲಿ ವನ್ಯಜೀವಿಗಳು ಪ್ರವಾಸಿಗರ ಮೇಲೆ ದಾಳಿ ನಡೆಸುವ ಅಪಾಯವೂ ಇರುತ್ತದೆ. ಹೀಗಾಗಿ ಸಫಾರಿ ವಾಹನಗಳ ಸಂಚಾರದ ಮೇಲೆ ನಿರಂತರ ನಿಗಾ ಇರಿಸಲು GPS ಮತ್ತು ಡ್ಯಾಶ್‌ಕ್ಯಾಮೆರಾ ವ್ಯವಸ್ಥೆ ಅಳವಡಿಸಲಾಗಿದೆ.

ಈ ಕುರಿತು ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಕೆ.ಪಿ. ಸತೀಶ್ ಕುಮಾರ್ ಮಾತನಾಡಿ, GPS ಮತ್ತು ಕ್ಯಾಮೆರಾ ಅಳವಡಿಕೆಯಿಂದ ಸಫಾರಿ ವಾಹನಗಳು ಸಂಚರಿಸುವ ಮಾರ್ಗ, ವೇಗ ಹಾಗೂ ಇತರ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಸಫಾರಿ ವೇಳೆ ನಡೆಯುವ ಚಟುವಟಿಕೆಗಳನ್ನು ಡ್ಯಾಶ್‌ಕ್ಯಾಮೆರಾ ಮೂಲಕ ದಾಖಲಿಸಿಕೊಳ್ಳಬಹುದು. ಇದರಿಂದ ಸಫಾರಿ ನಿಯಮ ಉಲ್ಲಂಘನೆಗಳ ಮೇಲೆ ನಿಗಾ ಇಡುವುದರ ಜತೆಗೆ ವನ್ಯಜೀವಿಗಳು ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ತಂತ್ರಜ್ಞಾನದ ಬಳಕೆಯಿಂದ ಬಂಡೀಪುರ ಸಫಾರಿಯಲ್ಲಿ ನಿಯಮ ಪಾಲನೆ ಮತ್ತಷ್ಟು ಕಟ್ಟುನಿಟ್ಟಾಗುವ ನಿರೀಕ್ಷೆಯಿದ್ದು, ವನ್ಯಜೀವಿಗಳ ಸಹಜ ಬದುಕಿಗೆ ಯಾವುದೇ ಅಡ್ಡಿಯಾಗದಂತೆ ಪ್ರವಾಸಿಗರಿಗೆ ಸಫಾರಿ ಅನುಭವ ಕಲ್ಪಿಸುವುದು ಅರಣ್ಯ ಇಲಾಖೆಯ ಪ್ರಮುಖ ಉದ್ದೇಶವಾಗಿದೆ.

Exit mobile version