ಸರ್ಕಾರಿ ಮನೆ ಗೊಂದಲಕ್ಕೆ ಬೈರತಿ ಸುರೇಶ್ ಸ್ಪಷ್ಟನೆ

ನಾಲ್ಕು ದಿನಕ್ಕೆ 150ಕೋಟಿ.. (7)

ಬೆಂಗಳೂರು ಸೆ.8: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ನನ್ನ ನಡುವೆ ಯಾವುದೇ ಗೊಂದಲವಿಲ್ಲ. ಸರ್ಕಾರದ ವಸತಿ ಗೃಹದ ಹಂಚಿಕೆ ವಿಚಾರದಲ್ಲಿ ತಪ್ಪು ಮಾಹಿತಿ ಹೇಗೆ ಹೋಗಿದೆಯೋ ಗೊತ್ತಿಲ್ಲ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಹದೇವಪ್ಪ ಅವರು ವಾಸವಿದ್ದ ಕ್ರೆಸೆಂಟ್ ರಸ್ತೆಯ ನಂಬರ್ 2 ರ ಮನೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನಗೆ ಕೊಟ್ಟಿದ್ದರು. ಅದರಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನೆಯ ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಈ ನವೀಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಮತ್ತು ಮನೆ ಖಾಲಿ ಮಾಡುವಂತೆ ನಾನು ಡಾ.ಮಹದೇವಪ್ಪ ಅವರಿಗೆ ಯಾವುದೇ ರೀತಿಯ ಒತ್ತಡವನ್ನೂ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವರುಗಳಿಗೆ ಸರ್ಕಾರಿ ಮನೆಗಳನ್ನು ಹಂಚಿಕೆ ಮಾಡುವ ವಿವೇಚನೆ ಮುಖ್ಯಮಂತ್ರಿಗಳದ್ದಾಗಿರುತ್ತದೆ. ನನಗೆ ಮನೆ ಬೇಕು ಎಂದು ಕೇಳಿದಾಗ ಸ್ವತಃ ಮುಖ್ಯಮಂತ್ರಿಗಳೇ ನನಗೆ ಕ್ರೆಸೆಂಟ್ ರಸ್ತೆಯಲ್ಲಿ ಖಾಲಿ ಇದ್ದ ಈ ಮನೆ ನೀಡಿದ್ದಾರೆ ಎಂದು ಬೈರತಿ ಸುರೇಶ್ ತಿಳಿಸಿದರು.

ಮನೆ ಖಾಲಿ ಮಾಡಿರುವ ಬಗ್ಗೆ ಎಚ್ ಸಿಎಂ ಪತ್ರ
ತಾವು ವಾಸವಿದ್ದ ಮನೆಯನ್ನು ಮಹದೇವಪ್ಪ ಅವರು ಸಚಿವ ಸ್ಥಾನದಿಂದ ನಿರ್ಗಮಿಸಿದ ನಂತರ ಕಳೆದ ತಿಂಗಳ 15 ರಂದು ಮನೆ ಖಾಲಿ ಮಾಡಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ. ಹೀಗಾಗಿ ಖಾಲಿ ಇದ್ದ ಮನೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನವೀಕರಣ ಆರಂಭಿಸಿದ್ದಾರೆ ಎಂದರು.

ನನ್ನ ಸ್ವಂತ ಮನೆಯಾಗಿದ್ದರೆ ನಾನು ಒತ್ತಡ ಹೇರಬಹುದಿತ್ತು. ಆದರೆ, ಹಂಚಿಕೆ ಮಾಡಿರುವ ಮನೆಯು ಸರ್ಕಾರಕ್ಕೆ ಸೇರಿದ್ದಾಗಿದೆ. ಸಂಬಂಧಪಟ್ಟ ಇಲಾಖೆಯವರು ಕೆಲಸ ಕಾರ್ಯಗಳನ್ನು ಆರಂಭಿಸಿದ್ದಾರೆ. ಯಾವುದೋ ತಪ್ಪು ಗ್ರಹಿಕೆಯಿಂದ ಈ ಗೊಂದಲ ಸೃಷ್ಟಿಯಾಗಿರಬಹುದು ಎಂದು ಅವರು ಹೇಳಿದರು.

ಎಚ್ ಸಿ ಎಂ ಬಗ್ಗೆ ನನಗೆ ಅಸಮಾಧಾನವಿಲ್ಲ

ಮಹದೇವಪ್ಪ ಅವರ ಮನೆಗೆ ನಾನು ನೂರಾರು ಬಾರಿ ಹೋಗಿದ್ದೇನೆ. ಅವರು ನನ್ನ ಸ್ನೇಹಿತರಿಗಿಂತ ಹೆಚ್ಚಾಗಿ ನನಗಿಂತ ದೊಡ್ಡವರು. ನಾನು ಅವರ ಮಗನ ಸಮಾನ. ಅವರು ನಮ್ಮ ಲೀಡರ್ ಆಗಿದ್ದಾರೆ. ಎಂದು ಸಚಿವರು ತಿಳಿಸಿದರು.

ಅದೇ ಮನೆಯಲ್ಲಿ ಇನ್ನೂ ಒಂದು ಮುಕ್ಕಾಲು ವರ್ಷ ಇರಲಿ

ಸದರಿ ಮನೆಯನ್ನು ನನಗೆ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಅನುಮತಿ ನೀಡಿದರೆ ಮತ್ತು ಕಾನೂನಿನಲ್ಲಿ ಅವಕಾಶವಿದ್ದರೆ ಮಹದೇವಪ್ಪಣ್ಣ ಇನ್ನೂ ಒಂದೂಮುಕ್ಕಾಲು ವರ್ಷ ಅದೇ ಮನೆಯಲ್ಲಿ ವಾಸವಾಗಿರಲಿ. ಇದಕ್ಕೆ ನನ್ನದೇನೂ ತಕರಾರಿಲ್ಲ ಎಂದು ಬೈರತಿ ಸುರೇಶ್ ಸ್ಪಷ್ಟಪಡಿಸಿದರು.

ಹಿಂದುಳಿದ ಜಾತಿ ವರ್ಗದವರು ನಡೆಸಿದ ಕಾರ್ಯಕ್ರಮ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹಿಂದುಳಿದ ಜಾತಿ ವರ್ಗದವರ ಕಾರ್ಯಕ್ರಮವನ್ನು ನಾವು ಆಯೋಜನೆ ಮಾಡಿದ್ದಲ್ಲ. ಹಿಂದುಳಿದ ಜಾತಿ ವರ್ಗಗಳ ಒಕ್ಕೂಟದ ಸದಸ್ಯರು ಆಯೋಜನೆ ಮಾಡಿದ್ದರು. ಅದಕ್ಕೆ ನನ್ನನ್ನು, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸಿದ್ದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಅದಾಗಿತ್ತು. ಸಭೆಗೆ ಯಾರನ್ನು ಕರೆಯಬೇಕು?ಎಂಬುದನ್ನು ಒಕ್ಕೂಟದವರೇ ನಿರ್ಧರಿಸುತ್ತಾರೆ ಎಂದು ಬೈರತಿ ಸುರೇಶ್ ಸ್ಪಷ್ಟಪಡಿಸಿದರು.

Exit mobile version