ಬಳ್ಳಾರಿಯಲ್ಲಿ ಪಲ್ಟಿಯಾದ ಎಣ್ಣೆ ಟ್ಯಾಂಕರ್: ಬಕೆಟ್, ಬಿಂದಿಗೆ ಹಿಡಿದು ಓಡೋಡಿ ಬಂದ ಜನರು

Untitled design 2026 01 16T125402.482

ಬಳ್ಳಾರಿ: ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಪಘಾತಕ್ಕೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಕಣಿವೆ ಪ್ರದೇಶದಲ್ಲಿ ನಡೆದಿದೆ. ಟ್ಯಾಂಕರ್ ಪಲ್ಟಿಯಾದ ಕೆಲವೇ ಕ್ಷಣಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಬಕೆಟ್‌, ಚೊಂಬು, ಬಿಂದಿಗೆ, ಡಬ್ಬಾ ಹಿಡಿದು ಸ್ಥಳಕ್ಕೆ ಆಗಮಿಸಿದ್ದು, ಎಣ್ಣೆ ಸಂಗ್ರಹಿಸಿಕೊಳ್ಳಲು ಜನರು ಮುಗಿಬಿದ್ದ ದೃಶ್ಯ ಕಂಡು ಬಂದಿದೆ.

ದೇವಲಾಪುರ ಕಣಿವೆಯಲ್ಲಿರುವ ತೀವ್ರ ತಿರುವಿನಲ್ಲಿ ಲಾರಿ ವೇಗ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟ್ಯಾಂಕರ್ ಪಲ್ಟಿಯಾದ ರಭಸಕ್ಕೆ ಲಾರಿಗೆ ಹಾನಿಯಾಗಿದ್ದು, ಒಳಗಿದ್ದ ಸಾವಿರಾರು ಲೀಟರ್ ಪಾಮ್ ಆಯಿಲ್ ರಸ್ತೆ ಮೇಲೆ ಹಾಗೂ ಪಕ್ಕದ ಜಾಗಗಳಿಗೆ ಹರಿದುಹೋಗಿದೆ.

ಘಟನೆಯ ಸಮಯದಲ್ಲಿ ಟ್ಯಾಂಕರ್‌ನಲ್ಲಿ ಚಾಲಕ ಹಾಗೂ ಕ್ಲೀನರ್ ಇದ್ದರು. ಆದರೆ ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ವಾಹನ ಸವಾರರು ತಕ್ಷಣವೇ ಅವರಿಗೆ ಸಹಾಯ ಮಾಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಟ್ಯಾಂಕರ್ ಪಲ್ಟಿಯಾದ ಸುದ್ದಿ ಹರಡುತ್ತಿದ್ದಂತೆ, ಸಮೀಪದ ದೇವಲಾಪುರ, ಕಂಪ್ಲಿ ಹಾಗೂ ಇತರ ಗ್ರಾಮಗಳಿಂದ ಜನರು ಸ್ಥಳಕ್ಕೆ ಆಗಮಿಸಿದರು. ವಿಶೇಷವಾಗಿ ಮಹಿಳೆಯರು ಪ್ಲಾಸ್ಟಿಕ್ ಬಿಂದಿಗೆ, ಬಕೆಟ್‌, ಡಬ್ಬಾ ಹಿಡಿದು ರಸ್ತೆ ಮೇಲೆ ಹರಿದ ಪಾಮ್ ಆಯಿಲ್ ಸಂಗ್ರಹಿಸಲು ಮುಗಿಬಿದ್ದರು. ಕೆಲವರು ರಸ್ತೆ ಮಧ್ಯೆಯಲ್ಲೇ ನಿಂತು ಎಣ್ಣೆ ತುಂಬಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡುಬಂದವು.

ಘಟನೆಯ ಮಾಹಿತಿ ತಿಳಿದ ತಕ್ಷಣ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಜನರನ್ನು ದೂರ ಸರಿಸಲು ಪೊಲೀಸರು ಹಲವು ಬಾರಿ ಮನವಿ ಮಾಡಬೇಕಾಯಿತು. ರಸ್ತೆ ಮೇಲೆ ಹೆಚ್ಚಾಗಿದ್ದ ಜನಸಂದಣಿಯಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಪೊಲೀಸರ ಸೂಚನೆಯ ಮೇರೆಗೆ ಅಗ್ನಿಶಾಮಕ ದಳ ಹಾಗೂ ಸಂಬಂಧಪಟ್ಟ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ರಸ್ತೆ ಮೇಲೆ ಹರಿದಿದ್ದ ಎಣ್ಣೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದರು. ಸುರಕ್ಷತಾ ಕ್ರಮವಾಗಿ ಕೆಲಕಾಲ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ತಡೆಹಿಡಿಯಲಾಯಿತು. ಬಳಿಕ ಎಣ್ಣೆ ತೆರವು ಕಾರ್ಯ ಮುಗಿದ ನಂತರ ವಾಹನ ಸಂಚಾರ ಪುನಃ ಆರಂಭವಾಯಿತು.

Exit mobile version