ಅಡಿಕೆ ಬೆಳೆಗಾರರಿಗೆ ₹16 ಪರಿಹಾರ ಅವಮಾನ: ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

08

ಬೆಂಗಳೂರು: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಅಕಾಲಿಕ ಬಿರುಗಾಳಿ ಮತ್ತು ಮಳೆಯಿಂದ ಭಾರೀ ಪ್ರಮಾಣದಲ್ಲಿ ಅಡಿಕೆ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಪರಿಹಾರ ನೀತಿಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಒಂದು ಅಡಿಕೆ ಮರವನ್ನು ನೆಟ್ಟು ಫಸಲು ನೀಡುವ ಹಂತಕ್ಕೆ ತರಲು ರೈತ ಹಲವು ವರ್ಷಗಳ ಶ್ರಮ, ಸಮಯ ಮತ್ತು ಹಣ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಸರ್ಕಾರದ ಪರಿಹಾರದ ಲೆಕ್ಕಾಚಾರದ ಪ್ರಕಾರ ಒಂದು ಮರಕ್ಕೆ ಸರಾಸರಿ ಕೇವಲ ₹16 ಮಾತ್ರ ದೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಪರಿಹಾರವಲ್ಲ, ರೈತರ ಸ್ವಾಭಿಮಾನಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಭಾಗದಲ್ಲಿ ಅಕಾಲಿಕ ಗಾಳಿ-ಮಳೆಯಿಂದ 12 ಲಕ್ಷಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕುರುಳಿವೆ. ಆದರೂ ಹೆಕ್ಟೇರ್‌ಗೆ ₹22,500 ಎಂಬ ಹಳೆಯ ಮಾನದಂಡದ ಆಧಾರದ ಮೇಲೆ ಪರಿಹಾರ ನಿಗದಿಪಡಿಸಿರುವುದರಿಂದ ರೈತರಿಗೆ ಸಮರ್ಪಕ ನೆರವು ದೊರೆಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇಂದಿನ ಪರಿಸ್ಥಿತಿಯಲ್ಲಿ ₹16ಕ್ಕೆ ಒಂದು ಕಪ್ ಚಹಾವೂ ಸಿಗುವುದಿಲ್ಲ. ಆದರೆ ವರ್ಷಗಳ ಕಾಲ ಬೆಳೆಸಿದ ಅಡಿಕೆ ಮರದ ಮೌಲ್ಯವನ್ನು ಅಷ್ಟೇ ಮೊತ್ತಕ್ಕೆ ಇಳಿಸಿರುವುದು ರೈತರ ಕಣ್ಣೀರಿನೊಂದಿಗೆ ಆಟವಾಡಿದಂತಾಗಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಇದಲ್ಲದೆ, ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿಯಾದವರಿಗೆ ಮಾತ್ರ ಪರಿಹಾರ ಹಾಗೂ ಅದಕ್ಕಿಂತ ಕಡಿಮೆ ಹಾನಿಯಾದರೆ 100 ಮರಗಳಿಗೆ ಕೇವಲ ₹2,500 ನೀಡುವ ನಿಯಮವೂ ಅವೈಜ್ಞಾನಿಕವಾಗಿದೆ ಎಂದು ಅವರು ಹೇಳಿದ್ದಾರೆ. ಕೃಷಿ ವೆಚ್ಚ ಹಲವು ಪಟ್ಟು ಹೆಚ್ಚಾದರೂ, ಪರಿಹಾರದ ಮಾನದಂಡ ಮಾತ್ರ ಹಲವು ವರ್ಷಗಳಿಂದ ಪರಿಷ್ಕರಣೆ ಕಾಣದೇ ಉಳಿದಿದೆ ಎಂದು ಆರೋಪಿಸಿದ್ದಾರೆ.

ಭದ್ರಾವತಿ–ಹೊಳೆಹೊನ್ನೂರು ಭಾಗದ ಅಡಿಕೆ ಬೆಳೆ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಹಳೆಯ ಪರಿಹಾರ ಮಾನದಂಡಗಳನ್ನು ತಕ್ಷಣ ಪರಿಷ್ಕರಿಸಿ ಸಮಗ್ರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಬಿಜೆಪಿ ಸರ್ಕಾರವನ್ನು ಆಗ್ರಹಿಸಿದೆ.

 

Exit mobile version