ಇರಾನ್‌-ಇಸ್ರೇಲ್‌ ಯುದ್ಧದಿಂದ ಪರದಾಡ್ತಿದ್ದ ಕನ್ನಡಿಗರು ಕರುನಾಡಿಗೆ ವಾಪಸ್‌

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಸಾವಿರಾರು ಭಾರತೀಯರು, ವಿಶೇಷವಾಗಿ ಕನ್ನಡಿಗರು ಭಾರೀ ಸಂಕಷ್ಟ ಅನುಭವಿಸಿದ್ದರು. ವಿಮಾನ ಹಾರಾಟಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರಿಂದ ದುಬೈ ಮತ್ತು ಅಬುದಾಭಿಯಲ್ಲಿ ಅನೇಕರು ಸಿಲುಕಿಕೊಂಡಿದ್ದರು. ಈಗ ಪರಿಸ್ಥಿತಿ ಹಂತ ಹಂತವಾಗಿ ಸುಧಾರಿಸುತ್ತಿದ್ದು, ಕನ್ನಡಿಗರು ಸುರಕ್ಷಿತವಾಗಿ ರಾಜ್ಯಕ್ಕೆ ಮರಳುತ್ತಿದ್ದಾರೆ.

ಅಬುದಾಭಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ದೇವನಹಳ್ಳಿ) 213 ಕನ್ನಡಿಗರನ್ನು ಹೊತ್ತ ಮೊದಲ ವಿಮಾನ ಸುರಕ್ಷಿತವಾಗಿ ಬಂದಿಳಿದಿದೆ. ಮೂರು ದಿನಗಳ ಕಾಲ ಅಬುದಾಭಿಯಲ್ಲಿ ಸಿಲುಕಿಕೊಂಡಿದ್ದರು. ರಾತ್ರಿ ಸುಮಾರು 2:30ರ ಹೊತ್ತಿಗೆ ಮತ್ತೊಂದು ವಿಮಾನ ದೇವನಹಳ್ಳಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧದ ಹಿನ್ನೆಲೆಯಲ್ಲಿ ಗಲ್ಫ್ ಪ್ರದೇಶದಲ್ಲಿ ವಿಮಾನ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ಹೀಗಾಗಿ ಕೆಲಸ, ವ್ಯವಹಾರ ಹಾಗೂ ಪ್ರವಾಸಕ್ಕಾಗಿ ತೆರಳಿದ್ದ ಹಲವರು ತೊಂದರೆ ಅನುಭವಿಸಿದ್ದರು. ವಿಮಾನ ನಿಲ್ದಾಣಗಳಲ್ಲಿ ಅನಿಶ್ಚಿತತೆ, ಟಿಕೆಟ್ ಮರುಬುಕಿಂಗ್ ಸಮಸ್ಯೆಗಳು ಮತ್ತು ವಸತಿ ತೊಂದರೆಗಳ ನಡುವೆ ಕನ್ನಡಿಗರು ದಿನ ಕಳೆಯಬೇಕಾಯಿತು.

ಈ ನಡುವೆ, ಎಮಿರೇಟ್ಸ್ ಏರ್‌ಲೈನ್ಸ್ ಸೀಮಿತ ಸಂಖ್ಯೆಯಲ್ಲಿ ವಿಮಾನ ಹಾರಾಟಗಳನ್ನು ಪುನರಾರಂಭಿಸಿದೆ. ಪರಿಸ್ಥಿತಿ ಸಂಪೂರ್ಣವಾಗಿ ಸಹಜವಾಗದಿದ್ದರೂ, ಹಂತ ಹಂತವಾಗಿ ಸೇವೆಗಳನ್ನು ಪ್ರಾರಂಭಿಸುವುದಾಗಿ ಸಂಸ್ಥೆ ತಿಳಿಸಿದೆ.

ವಿಮಾನ ಹಾರಾಟ ಆರಂಭ

ಇನ್ನೊಂದೆಡೆ, ಏರ್ ಇಂಡಿಯಾ ಮಸ್ಕತ್ ಮಾರ್ಗದಲ್ಲಿ ನಾಳೆಯಿಂದ ವಿಮಾನ ಹಾರಾಟ ಪುನರಾರಂಭಿಸುವುದಾಗಿ ಘೋಷಿಸಿದೆ. ಮಸ್ಕತ್‌ನಿಂದ ದೆಹಲಿ, ಕೊಚ್ಚಿ, ಕೋಝಿಕೋಡ್, ಮಂಗಳೂರು, ಮುಂಬೈ ಮತ್ತು ತಿರುಚಿರಾಪಲ್ಲಿಗೆ ವಿಮಾನ ಸೇವೆಗಳು ಪುನಃ ಆರಂಭವಾಗಲಿವೆ. ಮಸ್ಕತ್‌ನಿಂದ ಮೊದಲ ವಿಮಾನ ಬೆಳಗ್ಗೆ 10:25ಕ್ಕೆ ಹಾರಾಟ ನಡೆಸಲಿದ್ದು, ತಿರುಚಿರಾಪಲ್ಲಿಗೆ ಹೊರಡುವ ಮೊದಲ ವಿಮಾನಕ್ಕೂ ಪ್ರಯಾಣಿಕರು ನಿರೀಕ್ಷೆಯಿಂದ ಕಾದಿದ್ದಾರೆ.

ಆದರೆ ಇನ್ನೂ ಕೆಲವು ಗಲ್ಫ್ ರಾಷ್ಟ್ರಗಳಿಗೆ ವಿಮಾನ ಹಾರಾಟಗಳು ಸ್ಥಗಿತವಾಗಿಯೇ ಉಳಿದಿವೆ. ಬಹ್ರೇನ್, ಕುವೈತ್, ಕತಾರ್, ಸೌದಿ ಅರೇಬಿಯಾ ಹಾಗೂ ಯುಎಇ ಮಾರ್ಗಗಳಲ್ಲಿ ಸಂಪೂರ್ಣ ಸೇವೆ ಪುನರಾರಂಭವಾಗಿಲ್ಲ. ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿತ ವಿಮಾನ ಸಂಸ್ಥೆಗಳು ಮತ್ತು ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ.

ರಾಜ್ಯ ಸರ್ಕಾರ ಹಾಗೂ ವಿದೇಶಾಂಗ ಇಲಾಖೆಯ ಸಂಯೋಜಿತ ಪ್ರಯತ್ನದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಮರಳಿಸಲು ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕನ್ನಡಿಗರು ತಾವು ಅನುಭವಿಸಿದ ಆತಂಕದ ಕ್ಷಣಗಳನ್ನು ಹಂಚಿಕೊಂಡಿದ್ದು, ಭಾರತಕ್ಕೆ ಸುರಕ್ಷಿತವಾಗಿ ತಲುಪಿದ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Exit mobile version