₹1000 ಕೋಟಿ ಸೈಬರ್ ವಂಚನೆ: ‘ಸ್ವಾಮೀಜಿ.ಕಾಂ-ನಿಯೋ ಸಿಸ್ಟಮ್’ ಜಾಲ ಪತ್ತೆ

Untitled design 2026 01 15T095725.733

ಬೆಂಗಳೂರು : ಷೇರು ಮಾರುಕಟ್ಟೆ ಟ್ರೇಡಿಂಗ್ ಮತ್ತು ಆನ್‌ಲೈನ್ ಬೆಟ್ಟಿಂಗ್ ಹೆಸರಿನಲ್ಲಿ ₹1000 ಕೋಟಿ ರೂಪಾಯಿಗೂ ಅಧಿಕ ಮೊತ್ತ ವಂಚನೆ ಮಾಡಿರುವ ಭಾರೀ ಸೈಬರ್‌ ಕ್ರೈಂ ಜಾಲವನ್ನು ಹುಳಿಮಾವು ಠಾಣೆ ಪೊಲೀಸರು ಬಯಲು ಮಾಡಿದ್ದಾರೆ. ಈ ಪ್ರಕರಣದಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆಯಲು ಸಹಕರಿಸಿದ್ದ ತಾಯಿ–ಮಗ ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಲಾಗಿದ್ದು, ದೇಶದಾದ್ಯಂತ 4,500ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ಹರಿದಾಡುತ್ತಿದ್ದ ಸುಮಾರು ₹240 ಕೋಟಿ ಹಣವನ್ನು ಮುಟ್ಟುಗೋಲು ಹಾಕಲಾಗಿದೆ.

ಬಂಧಿತರಲ್ಲಿ ಜೆಪಿ ನಗರದ ಅಂಜನಾಪುರ ನಿವಾಸಿ ಮೊಹಮ್ಮದ್ ಹುಜೈಪಾ ಹಾಗೂ ಆತನ ತಾಯಿ ಶಬಾನಾ ಪ್ರಮುಖ ಆರೋಪಿಯಾಗಿದ್ದಾರೆ. ಇವರೊಂದಿಗೆ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಜಾರ್ಖಂಡ್ ಮೂಲದ ಆರೋಪಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 58 ಮೊಬೈಲ್ ಫೋನ್‌ಗಳು, 7 ಲ್ಯಾಪ್‌ಟಾಪ್‌ಗಳು, 9 ವಾಚ್‌ಗಳು, 531 ಗ್ರಾಂ ಚಿನ್ನಾಭರಣ, ₹4.89 ಲಕ್ಷ ನಗದು ಸೇರಿ ಸುಮಾರು ₹1 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ದುಬೈನಲ್ಲಿ ಕುಳಿತೇ ಹಗರಣ ನಡೆಸಿದ ಮಾಸ್ಟರ್ ಮೈಂಡ್

ಈ ಸೈಬರ್ ವಂಚನೆ ಜಾಲದ ಮಾಸ್ಟರ್ ಮೈಂಡ್ ಮುಂಬೈ ಮೂಲದ ಪ್ರೇಮ್ ತನೇಜಾ ಎಂಬಾತ. ಆತ ದುಬೈನಲ್ಲಿ ಕುಳಿತುಕೊಂಡೇ ಇಡೀ ಜಾಲವನ್ನು ನಿರ್ವಹಿಸುತ್ತಿದ್ದಾನೆ. ಆತನ ಪತ್ತೆಗಾಗಿ ಬೆಂಗಳೂರು ಪೊಲೀಸರು ಇಂಟರ್‌ಪೋಲ್ ಮೂಲಕ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

‘ಸ್ವಾಮೀಜಿ.ಕಾಂ’ ಮತ್ತು ‘ನಿಯೋ ಸಿಸ್ಟಮ್’ ಮೂಲಕ ಜನರಿಗೆ ಟೋಪಿ

ಪ್ರೇಮ್ ತನೇಜಾ ಮೂರು ವರ್ಷಗಳ ಹಿಂದೆ ‘ಸ್ವಾಮೀಜಿ ಡಾಟ್ ಕಾಂ’ ಹೆಸರಿನಲ್ಲಿ ಆನ್‌ಲೈನ್ ಗೇಮಿಂಗ್ ಆ್ಯಪ್ ಮತ್ತು ‘ನಿಯೋ ಸಿಸ್ಟಮ್’ ಹೆಸರಿನಲ್ಲಿ ಷೇರು ಮಾರುಕಟ್ಟೆ ಟ್ರೇಡಿಂಗ್ ಆ್ಯಪ್ ಅಭಿವೃದ್ಧಿಪಡಿಸಿದ್ದ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಈ ಆ್ಯಪ್‌ಗಳ ಭಾರೀ ಪ್ರಚಾರ ನಡೆಸಿ, “ಹಣ ಹೂಡಿದರೆ ದುಪ್ಪಟ್ಟು ಲಾಭ” ಎಂಬ ಆಮಿಷವೊಡ್ಡಿ ಜನರನ್ನು ಬಲೆಗೆ ಬೀಳಿಸುತ್ತಿದ್ದರು.

ಆರಂಭದಲ್ಲಿ ಸಣ್ಣ ಮೊತ್ತ ಹೂಡಿದವರಿಗೆ ನಿಜವಾಗಿಯೂ ಎರಡು ಪಟ್ಟು ಲಾಭ ನೀಡಲಾಗುತ್ತಿತ್ತು. ಉದಾಹರಣೆಗೆ ₹1,000 ಹೂಡಿದವರಿಗೆ ₹5,000 ವಾಪಸ್ ನೀಡಿ ವಿಶ್ವಾಸ ಗಳಿಸಲಾಗುತ್ತಿತ್ತು. ಇದರಿಂದ ಉತ್ತೇಜಿತರಾದ ಜನರು ಲಕ್ಷಾಂತರ ರೂಪಾಯಿ ಹೂಡಿದಾಗ, ಅಸಲು ಹಣವನ್ನೂ ನೀಡದೆ ವಂಚಕರು ಪರಾರಿಯಾಗುತ್ತಿದ್ದರು.

ದೆಹಲಿಯಲ್ಲಿ ಕೇಂದ್ರ ಕಚೇರಿ, ವೇತನಕ್ಕೆ ಕೆಲಸಗಾರರು

ಈ ವಂಚನೆ ಜಾಲಕ್ಕೆ ದೆಹಲಿಯಲ್ಲಿ ಕೇಂದ್ರ ಕಚೇರಿ ಸ್ಥಾಪಿಸಲಾಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ 9ಕ್ಕೂ ಹೆಚ್ಚು ಸಿಬ್ಬಂದಿಗೆ ಮಾಸಿಕ ವೇತನ ನೀಡಲಾಗುತ್ತಿತ್ತು. ಇವರು ಗ್ರಾಹಕರನ್ನು ಸಂಪರ್ಕಿಸುವುದು, ಖಾತೆ ನಿರ್ವಹಣೆ ಮತ್ತು ಹಣ ವರ್ಗಾವಣೆ ಕಾರ್ಯದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

7,500 ನಕಲಿ ಖಾತೆ ಪೂರೈಸಿದ ಹುಜೈಪ

ಬಂಧಿತ ಹುಜೈಪ ಆನ್‌ಲೈನ್ ಗೇಮಿಂಗ್ ವ್ಯಸನಿಯಾಗಿದ್ದು, ಮೊದಲು ಸ್ವಾಮೀಜಿ ಆ್ಯಪ್‌ನಲ್ಲಿ ಆಟವಾಡಿ ಹೆಚ್ಚಿನ ಹಣ ಗಳಿಸಿದ್ದ. ಬಳಿಕ ಆ್ಯಪ್ ಅನ್ನು ಹ್ಯಾಕ್ ಮಾಡುವಲ್ಲಿ ಯಶಸ್ವಿಯಾದ ಕಾರಣ ವಂಚಕರ ಗಮನ ಸೆಳೆದ. ನಂತರ ಪ್ರೇಮ್‌ನೊಂದಿಗೆ ಸ್ನೇಹ ಬೆಳೆಸಿ, ನಕಲಿ ಬ್ಯಾಂಕ್ ಖಾತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ.

ಕಳೆದ ಎರಡು ವರ್ಷಗಳಲ್ಲಿ ಕೂಲಿ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಬಳಸಿಕೊಂಡು, ಪ್ರತಿ ಖಾತೆಗೆ ₹25,000–₹30,000 ನೀಡಿ ಸುಮಾರು 7,500 ನಕಲಿ ಖಾತೆಗಳನ್ನು ತೆರೆಯಲಾಗಿದೆ. ಈ ಕಾರ್ಯದಲ್ಲಿ ತಾಯಿ ಶಬಾನಾ ಕೂಡ ಸಕ್ರಿಯವಾಗಿ ಭಾಗವಹಿಸಿದ್ದಳು.

ಐಷಾರಾಮಿ ಜೀವನ, ಸ್ಯಾಟಲೈಟ್ ಫೋನ್ ಬಳಕೆ

ವಂಚನೆಯ ಹಣದಿಂದ ಹುಜೈಪ ಐಷಾರಾಮಿ ಜೀವನ ನಡೆಸುತ್ತಿದ್ದ. ತಿಂಗಳಿಗೆ ಮೂರು ಬಾರಿ ದುಬೈ ಪ್ರವಾಸ, ಅಂಜನಾಪುರದಲ್ಲಿ ಫ್ಲ್ಯಾಟ್ ಖರೀದಿ, ಪ್ರಿಯತಮೆಗೆ ಚಿನ್ನಾಭರಣ ಉಡುಗೊರೆ ಇವೆಲ್ಲವೂ ವಂಚನೆ ಹಣದಿಂದಲೇ ನೀಡುತ್ತಿದ್ದ. ಆತನಿಗೆ ತಿಂಗಳಿಗೆ ₹30–35 ಲಕ್ಷ ಆದಾಯ ಬರುತ್ತಿತ್ತು ಎನ್ನಲಾಗಿದೆ. ವಂಚಕರು ಪರಸ್ಪರ ಸಂಪರ್ಕಕ್ಕೆ ಸ್ಯಾಟಲೈಟ್ ಫೋನ್ ಬಳಸುತ್ತಿದ್ದು, ಜಾಡು ಪತ್ತೆಯಾಗದಂತೆ ಎಚ್ಚರ ವಹಿಸುತ್ತಿದ್ದರು.

ಸಂತ್ರಸ್ತರಿಗೆ ಹಣ ವಾಪಸ್

ಈ ಹಗರಣ ಭೇದಿಸಿದ ತನಿಖಾ ತಂಡಕ್ಕೆ ₹50,000 ಬಹುಮಾನ ಘೋಷಿಸಲಾಗಿದೆ. ಮುಟ್ಟುಗೋಲು ಹಾಕಿದ ₹240 ಕೋಟಿ ಹಣದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮೊದಲ ಹಂತದಲ್ಲಿ ₹90 ಲಕ್ಷವನ್ನು ಸಂತ್ರಸ್ತರಿಗೆ ಹಿಂತಿರುಗಿಸಲಾಗುತ್ತದೆ. ಮುಂದಿನ ಹಂತದಲ್ಲಿ ಉಳಿದ ಹಣವನ್ನು ಕೂಡ ವಾಪಸ್ ನೀಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Exit mobile version