ಅಮೆರಿಕ-ಇರಾನ್ ನಡುವೆ ಯುದ್ಧ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಈ ಬೆಳವಣಿಗೆ ಭಾರತ ಸೇರಿದಂತೆ ಇಡೀ ಪ್ರಪಂಚದ ನಿದ್ದೆಗೆಡಿಸಿದೆ. ಈ ಸಂಘರ್ಷದಿಂದಾಗಿ ಮತ್ತೆ ಜಾಗತಿಕ ಮಟ್ಟದಲ್ಲಿ ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿ, ಅಭಾವ ಸೃಷ್ಟಿಯಾಗುತ್ತದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಅಮೆರಿಕ ಸೈನಿಕರ ಹತ್ಯೆಗೆ ಪ್ರತೀಕಾರ ಬಾರಿಸಿದ ಅಮೆರಿಕ
ಇತ್ತೀಚೆಗೆ ಅಮೆರಿಕದ ಸೈನಿಕರನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ದಾಳಿಯಲ್ಲಿ ಮೂವರು ಅಮೆರಿಕನ್ ಸೈನಿಕರು ಕೊನೆಯುಸಿರೆಳೆದಿದ್ದರು. ಇದರಿಂದ ಕೆರಳಿ ಕೆಂಡವಾಗಿದ್ದ ಅಮೆರಿಕ, ಇರಾನ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿತ್ತು. ಇದೀಗ ರೊಚ್ಚಿಗೆದ್ದಿರುವ ಅಮೆರಿಕದ ಪಡೆಗಳು ಇರಾನ್ ತಾಣಗಳ ಮೇಲೆ ಪ್ರತ್ಯಾಕ್ರಮಣ ಆರಂಭಿಸಿದ್ದು, ಪೂರ್ಣ ಪ್ರಮಾಣದ ಯುದ್ಧ ಮತ್ತೆ ಶುರುವಾಯಿತೇ ಎನ್ನುವ ಭಯ ಜಗತ್ತನ್ನು ಆವರಿಸಿದೆ.
ಇಂಧನ ಪೂರೈಕೆಗೆ ಅಡಚಣೆಯಾದರೆ ಭಾರತ ಸುಮ್ಮನಿರಲ್ಲ!
ಕಳೆದ ಬಾರಿಯ ಯುದ್ಧದ ಸಂದರ್ಭದಲ್ಲಿ ಭಾರತ ಸೇರಿದಂತೆ ಇಡೀ ಏಷ್ಯಾ ಖಂಡದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಗ್ಯಾಸ್ ಅಭಾವ ತಲೆದೋರಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸುತ್ತದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಉಂಟಾಗಿದೆ. ಮೂಲಗಳ ಪ್ರಕಾರ, ಈ ಬಾರಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿ ಆರ್ಥಿಕತೆಗೆ ಧಕ್ಕೆಯಾದರೆ ಭಾರತ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇರಾನ್ ಹಾಗೂ ಸಂಬಂಧಪಟ್ಟ ದೇಶಗಳಿಗೆ ತಲುಪಿಸಿದೆ ಎನ್ನಲಾಗಿದೆ.
ಈ ಹಿನ್ನೆಲೆ ಜಾಗತಿಕ ಇಂಧನ ಭದ್ರತೆ ಕಾಪಾಡಲು ಮತ್ತು ಇರಾನ್-ಅಮೆರಿಕ ನಡುವಿನ ಮಧ್ಯಪ್ರಾಚ್ಯ ಸಂಘರ್ಷವನ್ನು ಶಮನಗೊಳಿಸಲು ಭಾರತ ಯಾವ ರೀತಿಯ ರಾಜತಾಂತ್ರಿಕ ಹೆಜ್ಜೆ ಇಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
