ಮಾಸ್ಕೋ ಆ.26: ರಷ್ಯಾದ ದೂರದ ಪೂರ್ವದಲ್ಲಿರುವ ಅಮುರ್ ಪ್ರದೇಶದ ಅಮುರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್ (AGCC) ನಲ್ಲಿ ನಿನ್ನೆ ಮಂಗಳವಾರ ಭಾರಿ ಬೆಂಕಿ ಹಾಗೂ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಆರು ಚೀನೀ ಪ್ರಜೆಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಇನ್ನೂ ಒಂಬತ್ತು ಮಂದಿ ನಾಪತ್ತೆಯಾಗಿದ್ದು, 152 ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಸ್ವೊಬೊಡ್ನಿ ಪಟ್ಟಣದ ಸಮೀಪ ನಿರ್ಮಾಣವಾಗುತ್ತಿರುವ ಈ ಬೃಹತ್ ಕೈಗಾರಿಕಾ ಘಟಕವು ಶೀಘ್ರದಲ್ಲೇ ಕಾರ್ಯಾರಂಭ ಮಾಡಬೇಕಿತ್ತು. ಸದ್ಯ ಸ್ಥಾವರದಲ್ಲಿ ಪೂರ್ವ-ಕಾರ್ಯಾಚರಣೆಯ ಸಿದ್ಧತಾ ಕೆಲಸಗಳು ನಡೆಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಬೆಂಕಿಯ ತೀವ್ರತೆಯಿಂದ ಘಟಕದ ಹಲವು ಭಾಗಗಳಿಗೆ ಹಾನಿಯಾಗಿದ್ದು, ದಟ್ಟ ಹೊಗೆ ಆಕಾಶಕ್ಕೆ ವ್ಯಾಪಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆರು ಚೀನೀ ಪ್ರಜೆಗಳು ಸಾವು
ಘಟನೆಯಲ್ಲಿ ಮೃತಪಟ್ಟ ಏಳು ಮಂದಿಯಲ್ಲಿ ಆರು ಮಂದಿ ಚೀನೀ ಪ್ರಜೆಗಳು ಎಂದು ಸ್ಥಾವರದ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರ ಪೈಕಿ 36 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ರಷ್ಯಾದ ಇತರ ವೈದ್ಯಕೀಯ ಕೇಂದ್ರಗಳಿಗೆ ಸ್ಥಳಾಂತರಿಸಲು ತುರ್ತು ಸೇವೆಗಳ ವಿಮಾನವನ್ನೂ ನಿಯೋಜಿಸಲಾಗಿದೆ.
ನಾಪತ್ತೆಯಾಗಿರುವ ಒಂಬತ್ತು ಮಂದಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ. ಬೆಂಕಿ ನಿಯಂತ್ರಣಕ್ಕೆ ಬಂದಿದ್ದರೂ ಘಟನಾ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಶೀಲನಾ ಕಾರ್ಯಾಚರಣೆಗಳು ನಡೆಯುತ್ತಿವೆ.
ರೂ. 95 ಸಾವಿರ ಕೋಟಿಯ ರಷ್ಯಾ-ಚೀನಾ ಯೋಜನೆ
ಅಮುರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್ ರಷ್ಯಾದ ಪೆಟ್ರೋಕೆಮಿಕಲ್ ಕಂಪನಿ ಸಿಬರ್ ಮತ್ತು ಚೀನಾದ ಸರ್ಕಾರಿ ಸ್ವಾಮ್ಯದ ತೈಲ-ಅನಿಲ ಕಂಪನಿ ಸಿನೊಪೆಕ್ ನಡುವಿನ ಜಂಟಿ ಯೋಜನೆಯಾಗಿದೆ. ಸುಮಾರು 10 ಬಿಲಿಯನ್ ಡಾಲರ್, ಅಂದರೆ ಅಂದಾಜು ರೂ. 95,000 ಕೋಟಿಗೂ ಅಧಿಕ ಮೌಲ್ಯದ ಈ ಯೋಜನೆಯ ನಿರ್ಮಾಣದಲ್ಲಿ ಸುಮಾರು 30,000 ಕಾರ್ಮಿಕರು ತೊಡಗಿಸಿಕೊಂಡಿದ್ದರು.
ಪಾಲಿಥಿಲೀನ್ ಮತ್ತು ಪಾಲಿಪ್ರೊಪಿಲೀನ್ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ಘಟಕಗಳಲ್ಲೊಂದಾಗುವ ಗುರಿಯನ್ನು ಹೊಂದಿರುವ AGCC, ಸಂಪೂರ್ಣ ಕಾರ್ಯಾರಂಭಗೊಂಡ ಬಳಿಕ ವರ್ಷಕ್ಕೆ ಸುಮಾರು 23 ಲಕ್ಷ ಟನ್ ಪಾಲಿಥಿಲೀನ್ ಹಾಗೂ 4 ಲಕ್ಷ ಟನ್ ಪಾಲಿಪ್ರೊಪಿಲೀನ್ ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.
ಕೈಗಾರಿಕಾ ಸುರಕ್ಷತೆ ಉಲ್ಲಂಘನೆಯೇ?
ಈ ಸಂಕೀರ್ಣಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಸಮೀಪದಲ್ಲಿರುವ ಅಮುರ್ ಗ್ಯಾಸ್ ಪ್ರೊಸೆಸಿಂಗ್ ಪ್ಲಾಂಟ್ನಿಂದ ಪಡೆಯಲು ಯೋಜಿಸಲಾಗಿದೆ. ಈಥೇನ್ ಮತ್ತು ಎಲ್ಪಿಜಿಯನ್ನು ಸಂಸ್ಕರಿಸಿ ಪ್ಲಾಸ್ಟಿಕ್ ಉತ್ಪಾದನೆಗೆ ಬೇಕಾದ ವಸ್ತುಗಳನ್ನು ತಯಾರಿಸುವುದು ಯೋಜನೆಯ ಉದ್ದೇಶವಾಗಿದೆ.
ಘಟನೆಗೆ ಸಂಬಂಧಿಸಿದಂತೆ ರಷ್ಯಾದ ತನಿಖಾ ಸಮಿತಿ ತನಿಖೆ ಆರಂಭಿಸಿದೆ. ಕೈಗಾರಿಕಾ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ? ಸ್ಫೋಟಕ್ಕೆ ನಿಖರ ಕಾರಣವೇನು? ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಯೋಜನೆಯ ಅಭಿವೃದ್ಧಿ ಹಲವು ವರ್ಷಗಳಿಂದ ನಡೆಯುತ್ತಿದ್ದು, ಎಂಜಿನಿಯರ್ಗಳ ತರಬೇತಿ 2016ರಲ್ಲೇ ಆರಂಭವಾಗಿತ್ತು. 2024ರಲ್ಲಿ ಸಂಕೀರ್ಣವು ಕಾರ್ಯಾರಂಭದ ಪೂರ್ವಸಿದ್ಧತಾ ಹಂತ ಪ್ರವೇಶಿಸಿತ್ತು. ಇದೀಗ ಸಂಭವಿಸಿರುವ ಭೀಕರ ಅವಘಡವು ಯೋಜನೆಯ ಸುರಕ್ಷತಾ ವ್ಯವಸ್ಥೆಗಳ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
