“ನಾವು ಉಳಿಯಬೇಕು ಇಲ್ಲಾ ಜಗತ್ತೇ ನಾಶವಾಗಬೇಕು”: ಪಾಕ್ ಸಚಿವ ಖವಾಜಾ ಆಸೀಫ್

2222 (13)
ADVERTISEMENT
ADVERTISEMENT

ನವದೆಹಲಿ: ಪೆಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ದಾಳಿಗೆ ಸಜ್ಜಾಗುತ್ತಿದೆ ಎಂಬ ವರದಿಗಳು ಪಾಕಿಸ್ತಾನದಲ್ಲಿ ಆತಂಕವನ್ನು ಹೆಚ್ಚಿಸಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್ ಭಾರತಕ್ಕೆ ತೀವ್ರ ನ್ಯೂಕ್ಲಿಯರ್ ಬೆದರಿಕೆಯನ್ನು ಹಾಕಿದ್ದಾರೆ. ಭಾರತ ದಾಳಿ ನಡೆಸಿದರೆ ಪಾಕಿಸ್ತಾನವೇ ಇಲ್ಲವಾಗುವ ಸಂಭವವಿದೆ. ಆದರೆ ತಾವು ಉಳಿಯಲೇಬೇಕಾದರೆ ಜಗತ್ತನ್ನೇ ಸರ್ವನಾಶ ಮಾಡುವುದಾಗಿ ಖವಾಜಾ ಎಚ್ಚರಿಕೆ ನೀಡಿದ್ದಾರೆ. “ಒಂದೋ ನಾವು ಉಳಿಯಬೇಕು, ಇಲ್ಲವೇ ಜಗತ್ತೇ ನಾಶವಾಗಬೇಕು” ಎಂದು ಅವರು ಘೋಷಿಸಿದ್ದಾರೆ.

ಪಾಕಿಸ್ತಾನದ ಅಸ್ತಿತ್ವಕ್ಕೆ ಭಾರತದ ದಾಳಿ ಬೆದರಿಕೆಯಾಗಿದೆ ಎಂದು ಖವಾಜಾ ಆಸೀಫ್ ಹೇಳಿದ್ದಾರೆ. “ಒಂದು ವೇಳೆ ಭಾರತ ದಾಳಿಗೆ ಮುಂದಾದರೆ, ಪಾಕಿಸ್ತಾನದ ಉಳಿವಿನ ಪ್ರಶ್ನೆ ಎದುರಾಗುತ್ತದೆ. ಆಗ ನಾವು ಮುಂದೂ ಹಿಂದೂ ಯೋಚಿಸದೇ ಜಗತ್ತನ್ನೇ ನಾಶಪಡಿಸುವ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಅವರು ತಿಳಿಸಿದ್ದಾರೆ. ಭಾರತದ ವಿರುದ್ಧ ಹೋರಾಡಲು ಅಣ್ವಸ್ತ್ರಗಳನ್ನು ಪ್ರಯೋಗಿಸುವುದಾಗಿ ಖವಾಜಾ ಸ್ಪಷ್ಟವಾಗಿ ಎಚ್ಚರಿಸಿದ್ದಾರೆ.

ಈ ಬೆದರಿಕೆಯ ಜೊತೆಗೆ, ಖವಾಜಾ ಆಸೀಫ್ ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ಉಲ್ಲೇಖಿಸಿ, ಇಸ್ರೇಲ್‌ನ ಜೊತೆ ಉತ್ತಮ ಸಂಬಂಧ ಹೊಂದಿರುವ ಕೆಲವು ರಾಷ್ಟ್ರಗಳು ಇದೇ ರೀತಿಯ ಮನಸ್ಥಿತಿಯನ್ನು ಹೊಂದಿವೆ ಎಂದು ಭಾರತದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. “ಪಾಕಿಸ್ತಾನದ ಅಸ್ತಿತ್ವಕ್ಕೆ ಬೆದರಿಕೆ ಒಡ್ಡಿದರೆ, ನಾವು ಯೋಚಿಸುವ ಅವಶ್ಯಕತೆ ಇಲ್ಲ. ಉಳಿವಿಗಾಗಿ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ. ಈ ಮೂಲಕ ಭಾರತ ದಾಳಿ ನಡೆಸಿದರೆ ಪಾಕಿಸ್ತಾನಕ್ಕೆ ಸಂಪೂರ್ಣ ವಿನಾಶವಾಗಬಹುದು ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತದ ರಕ್ಷಣಾ ಸಚಿವರು ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಮೇಲೆ ದಾಳಿ ಸಾಧ್ಯ ಎಂದು ಹೇಳಿಕೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಾರತ ದಾಳಿಯನ್ನು ಆರಂಭಿಸಬಹುದು ಎಂದು ಎಚ್ಚರಿಕೆ ನೀಡಿದ್ದರು. ಇಂತಹ ದಾಳಿಗೆ ತಕ್ಕ ಉತ್ತರ ನೀಡುವುದಾಗಿ ಪಾಕಿಸ್ತಾನ ಘೋಷಿಸಿತ್ತು. ಇದೀಗ ಖವಾಜಾ ಆಸೀಫ್, ಪೆಹಲ್ಕಾಂ ಉಗ್ರ ದಾಳಿಯ ತನಿಖೆಗೆ ಅಂತಾರಾಷ್ಟ್ರೀಯ ತಟಸ್ಥ ಸಂಸ್ಥೆಯನ್ನು ಒಳಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. “ತಟಸ್ಥ ತನಿಖೆ ನಡೆದರೆ ಭಾರತದ ಕುತಂತ್ರ ಬಯಲಾಗುತ್ತದೆ” ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾದ್ ಷರೀಫ್ ಕೂಡ ಈ ತನಿಖೆಗೆ ಒತ್ತಾಯಿಸಿದ್ದಾರೆ. ಭಾರತದ ದಾಳಿಯ ಭೀತಿಯಿಂದ ಪಾಕಿಸ್ತಾನ ತನ್ನ ರಕ್ಷಣಾ ತಂತ್ರವನ್ನು ತೀವ್ರಗೊಳಿಸಿದೆ. ಆದರೆ, ಅಣ್ವಸ್ತ್ರದ ಬೆದರಿಕೆಯ ಮೂಲಕ ಜಗತ್ತಿನ ಗಮನವನ್ನು ಸೆಳೆಯುವ ಖವಾಜಾ ಆಸೀಫ್‌ರ ಈ ಹೇಳಿಕೆ, ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತ ಈ ಬೆದರಿಕೆಗೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಇಡೀ ವಿಶ್ವದ ಗಮನ ಸೆಳೆದಿದೆ.

Exit mobile version