ನೇಪಾಳ ಪ್ರವಾಹ: 700ರ ಗಡಿ ದಾಟಿದ ಸಾವಿನ ಸಂಖ್ಯೆ, 3,000ಕ್ಕೂ ಹೆಚ್ಚು ಜನರು ನಾಪತ್ತೆ

Untitled design 2026 08 30T130106.663

ನೇಪಾಳ ಮತ್ತು ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದುವರೆಗೆ ಒಟ್ಟು 734 ಮಂದಿ ಮೃತಪಟ್ಟಿದ್ದು, 3,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಚೀನಾದ ಅಧಿಕಾರಿಗಳ ಪ್ರಕಾರ ಟಿಬೆಟ್ ಭಾಗದಲ್ಲಿ 16 ಮಂದಿ ಮೃತಪಟ್ಟಿದ್ದು, 546 ಜನರು ಕಾಣೆಯಾಗಿದ್ದಾರೆ. ಮತ್ತೊಂದೆಡೆ, ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಸಾವಿನ ಸಂಖ್ಯೆ 734ಕ್ಕೆ ಏರಿಕೆಯಾಗಿದ್ದು, 2,498 ಮಂದಿ ನಾಪತ್ತೆಯಾಗಿದ್ದಾರೆ.

ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ನಿಯಂತ್ರಣ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರವಾಹ ಎಚ್ಚರಿಕೆ ನೀಡಿದೆ. ರಸುವಾ, ನುವಾಕೋಟ್, ಧಾಡಿಂಗ್ ಮತ್ತು ಚಿತ್ವಾನ್ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ನದಿ ತೀರದಲ್ಲಿ ವಾಸಿಸುವವರು ಹಾಗೂ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಪ್ರಾಧಿಕಾರ ಮನವಿ ಮಾಡಿದೆ.

ಐದನೇ ದಿನವೂ ಮುಂದುವರಿದ ರಕ್ಷಣಾ ಕಾರ್ಯ

ಭೀಕರ ಪ್ರವಾಹದಲ್ಲಿ ನಾಪತ್ತೆಯಾದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಐದನೇ ದಿನವೂ ಮುಂದುವರಿದಿವೆ. ಅಧಿಕಾರಿಗಳು ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದು, ರಕ್ಷಿಸಲ್ಪಟ್ಟವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಪರಿಹಾರ ಕೇಂದ್ರಗಳಲ್ಲಿ ನಾಪತ್ತೆಯಾದವರ ಕುಟುಂಬಸ್ಥರು ತಮ್ಮ ಪ್ರೀತಿಪಾತ್ರರಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ನೇಪಾಳದಲ್ಲಿ ಇದುವರೆಗೆ 3,700ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ.

219 ತಮಿಳಿಗರ ರಕ್ಷಣೆ

ಈ ನಡುವೆ ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ತಮಿಳುನಾಡಿನ 219 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಸಚಿವ ರಾಜ್‌ಮೋಹನ್ ತಿಳಿಸಿದ್ದಾರೆ. ಮುಖ್ಯಮಂತ್ರಿ ವಿಜಯ್ ಅವರ ಸೂಚನೆಯ ಮೇರೆಗೆ ಸಚಿವರಾದ ಆಧವ್ ಅರ್ಜುನ, ರಾಜ್‌ಮೋಹನ್, ತೆನ್ನರಸು ಹಾಗೂ ವಿನೋದ್ ಅವರನ್ನು ಒಳಗೊಂಡ ತಂಡ ದೆಹಲಿಗೆ ತೆರಳಿ ರಕ್ಷಣಾ ಕಾರ್ಯಾಚರಣೆಯನ್ನು ಸಮನ್ವಯಗೊಳಿಸಿತ್ತು.

ದೆಹಲಿಯ ತಮಿಳುನಾಡು ಹೌಸ್‌ನಲ್ಲಿ ವಾರ್ ರೂಮ್ ಸ್ಥಾಪಿಸಿ, ನೇಪಾಳದಲ್ಲಿ ಸಿಲುಕಿರುವ ತಮಿಳರ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಿ ಮಾಹಿತಿ ಸಂಗ್ರಹಿಸಲಾಯಿತು. ಭಾರತೀಯ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲಾಗಿದೆ ಎಂದು ಸಚಿವ ರಾಜ್‌ಮೋಹನ್ ಹೇಳಿದ್ದಾರೆ.

ನೇಪಾಳಕ್ಕೆ ತೆರಳಿದ್ದ ತಮಿಳುನಾಡಿನ 319 ಮಂದಿಯಲ್ಲಿ 219 ಜನರನ್ನು ರಕ್ಷಿಸಲಾಗಿದ್ದು, ಅವರು ನಾಳೆ ರಾತ್ರಿ ವೇಳೆಗೆ ತಮಿಳುನಾಡಿಗೆ ತಲುಪುವ ನಿರೀಕ್ಷೆಯಿದೆ. ಉಳಿದ 100 ಮಂದಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕುಂಭಕೋಣಂ ಏಜೆನ್ಸಿ ಮೂಲಕ ನೇಪಾಳಕ್ಕೆ ತೆರಳಿದ್ದ 57 ಮಂದಿಯಲ್ಲಿ 21 ಜನರನ್ನು ಈಗಾಗಲೇ ಸುರಕ್ಷಿತವಾಗಿ ಚೆನ್ನೈಗೆ ಕರೆತರಲಾಗಿದೆ. ಉಳಿದ 36 ಮಂದಿಯ ಹುಡುಕಾಟ ನಡೆಯುತ್ತಿದೆ. ಮತ್ತೊಂದು ತಂಡದಲ್ಲಿದ್ದ 39 ಮಂದಿಯೂ ಸುರಕ್ಷಿತವಾಗಿದ್ದು, ಅವರಲ್ಲಿ ಕೆಲವರು ಕೊಯಮತ್ತೂರು ಹಾಗೂ ಚೆನ್ನೈಗೆ ಮರಳಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಮಹಾದೇವಿ ಯಾತ್ರೆಯ ಮೂಲಕ ನೇಪಾಳಕ್ಕೆ ತೆರಳಿದ್ದ 49 ಮಂದಿಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಅವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಪ್ರವಾಹ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ನೇಪಾಳದ ಸೇನಾ ಪಡೆಗಳು ಜಂಟಿಯಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಹೆಲಿಕಾಪ್ಟರ್‌ಗಳ ಮೂಲಕ ಸಿಲುಕಿರುವವರನ್ನು ಸ್ಥಳಾಂತರಿಸುವುದು, ವೈದ್ಯಕೀಯ ನೆರವು ನೀಡುವುದು ಹಾಗೂ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ. 15,000ಕ್ಕೂ ಹೆಚ್ಚು ಸೈನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Exit mobile version