ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಅಮೆರಿಕ-ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ. ಇರಾನ್ ಸೇನಾ ಕಮಾಂಡರ್ ಲಾರಿಜಾನಿ ಅವರ ಹತ್ಯೆಯ ಬೆನ್ನಲ್ಲೇ, ಇರಾನ್ ಸರ್ಕಾರದ ಪ್ರಭಾವಿ ಸಚಿವ ಹಾಗೂ ಬೇಹುಗಾರಿಕಾ ಮುಖ್ಯಸ್ಥ ಇಸ್ಮಾಯಿಲ್ ಖಾತಿಬ್ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಅಧಿಕೃತವಾಗಿ ಘೋಷಿಸಿದೆ.
ಇಸ್ರೇಲ್ ರಕ್ಷಣಾ ಪಡೆಗಳು (IDF) ನಡೆಸಿದ ನಿಖರವಾದ ದಾಳಿಯಲ್ಲಿ ಇಸ್ಮಾಯಿಲ್ ಖಾತಿಬ್ ಅವರನ್ನು ಗುರಿಪಡಿಸಲಾಗಿದೆ. ಇಸ್ಮಾಯಿಲ್ ಖಾತಿಬ್ ಕೇವಲ ಸಚಿವರಷ್ಟೇ ಅಲ್ಲದೆ, ಇರಾನ್ನ ಗುಪ್ತಚರ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದರು. ಇಸ್ರೇಲ್ ವಿರುದ್ಧ ನಿರಂತರವಾಗಿ ದಾಳಿ ನಡೆಸುತ್ತಿರುವ ಲೆಬನಾನ್ ಮೂಲದ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಜೊತೆ ಖಾತಿಬ್ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಹೆಜ್ಬೊಲ್ಲಾಗೆ ಶಸ್ತ್ರಾಸ್ತ್ರ ಪೂರೈಕೆ ಮತ್ತು ಕಾರ್ಯತಂತ್ರ ರೂಪಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು ಎಂದು ಇಸ್ರೇಲ್ ಆರೋಪಿಸಿದೆ.
ಕಳೆದ ಕೆಲವು ದಿನಗಳಿಂದ ಇರಾನ್ ಮೇಲಿನ ದಾಳಿಯನ್ನು ಇಸ್ರೇಲ್ ತೀವ್ರಗೊಳಿಸಿದೆ. ಕೆಲವೇ ದಿನಗಳ ಹಿಂದೆ ಇರಾನ್ ಸೇನಾ ಕಮಾಂಡರ್ ಲಾರಿಜಾನಿ ಅವರನ್ನು ಹತ್ಯೆ ಮಾಡುವ ಮೂಲಕ ಇರಾನ್ ಸೇನೆಗೆ ಭಾರೀ ಹೊಡೆತ ನೀಡಲಾಗಿತ್ತು. ಆ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಈಗ ಬೇಹುಗಾರಿಕಾ ಸಚಿವರನ್ನೇ ಹತ್ಯೆ ಮಾಡಿರುವುದು ಇರಾನ್ ಸರ್ಕಾರವನ್ನು ಕೆರಳಿಸಿದೆ.
ಇರಾನ್ ಮೇಲೆ ಬೃಹತ್ ದಾಳಿ ನಡೆಸಿ, ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹ*ತ್ಯೆಗೈದ ಇಸ್ರೇಲ್
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿಯುತ್ತಿದೆ. ಇಸ್ರೇಲ್ ನಡೆಸಿದ ದಿಢೀರ್ ವಾಯುದಾಳಿಯಲ್ಲಿ ಇರಾನ್ನ ಅತ್ಯುನ್ನತ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ (Ali Larijani) ಹತರಾಗಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 16ರ ತಡರಾತ್ರಿ ನಡೆದ ಆಪರೇಷನ್
ಇಂದು (ಮಾರ್ಚ್ 17) ಇಸ್ರೇಲಿ ವಾಯುಪಡೆಯು ಇರಾನ್ನ ಆಯಕಟ್ಟಿನ ಪ್ರದೇಶಗಳ ಮೇಲೆ ಭೀಕರ ದಾಳಿ ನಡೆಸಿತು. ಈ ಕಾರ್ಯಾಚರಣೆಯ ಪ್ರಮುಖ ಗುರಿಯೇ ಅಲಿ ಲಾರಿಜಾನಿ ಆಗಿದ್ದರು ಎಂದು ಇಸ್ರೇಲ್ ಸೇನೆಯು (IDF) ಅಧಿಕೃತವಾಗಿ ಘೋಷಿಸಿದೆ. ಕಳೆದ ಕೆಲ ದಿನಗಳಿಂದ ರಹಸ್ಯ ಸ್ಥಳದಲ್ಲಿದ್ದ ಲಾರಿಜಾನಿ ಅವರ ನಿಖರವಾದ ಲೊಕೇಶನ್ ಪತ್ತೆಹಚ್ಚಿದ ಇಸ್ರೇಲ್, ಕ್ಷಿಪಣಿ ದಾಳಿಯ ಮೂಲಕ ಅವರನ್ನು ಹತ್ಯೆ ಮಾಡಲಾಗಿದೆ. ಇಸ್ರೇಲ್ ರಕ್ಷಣಾ ಸಚಿವರು ಈ ಮಾಹಿತಿಯನ್ನು ಖಚಿತಪಡಿಸಿದ್ದು, ಶತ್ರುಗಳ ಉನ್ನತ ನಾಯಕತ್ವವನ್ನು ಹತ್ತಿಕ್ಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.
ಲಾರಿಜಾನಿ ಮಾತ್ರವಲ್ಲದೆ, ಇರಾನ್ನ ಅರೆಸೇನಾ ಪಡೆಯ ಪ್ರಭಾವಿ ಕಮಾಂಡರ್ ಘೋಲಜಾ ಸೊಲೈಮಾನಿ ಕೂಡ ಇಸ್ರೇಲ್ನ ಪ್ರತ್ಯೇಕ ವಾಯುದಾಳಿಯಲ್ಲಿ ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಇಬ್ಬರು ಉನ್ನತ ಮಟ್ಟದ ಸೇನಾ ನಾಯಕರನ್ನು ಕಳೆದುಕೊಂಡಿರುವುದು ಇರಾನ್ಗೆ ಭಾರಿ ಆಘಾತವಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳ (IDF) ಮಾಹಿತಿ ಪ್ರಕಾರ, ಸೊಲೈಮಾನಿ ಅವರು ಇಸ್ರೇಲ್ ವಿರುದ್ಧದ ಸರಣಿ ದಾಳಿಗಳ ಸಂಚಿನ ಸೂತ್ರಧಾರಿಯಾಗಿದ್ದರು.
ತನ್ನ ಇಬ್ಬರು ಪ್ರಮುಖ ನಾಯಕರ ಸಾವು ಸಂಭವಿಸಿದ್ದರೂ, ಇರಾನ್ ಸರ್ಕಾರ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಟೆಹ್ರಾನ್ನ ಈ ಮೌನವು ಬಿರುಗಾಳಿಗೂ ಮುನ್ನಿನ ಶಾಂತಿ ಎಂದು ವಿಶ್ಲೇಷಿಸಲಾಗುತ್ತಿದೆ. ಇರಾನ್ ಮುಂದಿನ ದಿನಗಳಲ್ಲಿ ಇಸ್ರೇಲ್ ಮೇಲೆ ಭೀಕರ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆಗಳಿದ್ದು, ಇದು ಪೂರ್ಣ ಪ್ರಮಾಣದ ಮಹಾಯುದ್ಧಕ್ಕೆ ನಾಂದಿ ಹಾಡಬಹುದು ಎಂದು ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.
