ಪಾಕ್‌ ನಾಶಕ್ಕೆ ಭಾರತದ ಸಹಾಯ ಕೋರಿದ ಬಿಎಲ್‌ಎ

Untitled design 2025 05 11t204150.018

ಕ್ವೆಟ್ಟಾ: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದರೂ, ಪಾಕಿಸ್ತಾನದ ಒಳಗೆ ಶಾಂತಿಯ ಕಿರಣ ಕಾಣಿಸುವ ಲಕ್ಷಣಗಳಿಲ್ಲ. ಒಂದೆಡೆ ಭಾರತದೊಂದಿಗೆ ಶಾಂತಿಯ ಮಾತುಕತೆ ನಡೆಸುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ತನ್ನ ನೆಲದಲ್ಲಿರುವ ಪ್ರತ್ಯೇಕತಾವಾದಿ ಸಂಘಟನೆಗಳಿಂದ ತೀವ್ರ ಒತ್ತಡವನ್ನು ಎದುರಿಸುತ್ತಿದೆ. ಈ ನಡುವೆ, ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನದ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಲು ಭಾರತದ ಸಹಾಯವನ್ನು ಕೋರಿದೆ.

ಪಾಕಿಸ್ತಾನ ಸೇನೆಯ ವಿರುದ್ಧ ದಶಕಗಳಿಂದ ಯುದ್ಧ ಸಾರಿರುವ ಬಿಎಲ್‌ಎ, ತನ್ನ ಇತ್ತೀಚಿನ ಪತ್ರದಲ್ಲಿ ಭಾರತವನ್ನು ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಒತ್ತಾಯಿಸಿದೆ. “ಪಾಕಿಸ್ತಾನವನ್ನು ಪಶ್ಚಿಮದಿಂದ ನಾಶಪಡಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ,” ಎಂದು ಬಿಎಲ್‌ಎ ಘೋಷಿಸಿದೆ. ತಾವು ಯಾವುದೇ ದೇಶದ ಕೈಗೊಂಬೆಯಲ್ಲ ಎಂದು ಸ್ಪಷ್ಟಪಡಿಸಿರುವ ಬಿಎಲ್‌ಎ, ಪ್ರಾದೇಶಿಕ ರಾಜಕೀಯ ಮತ್ತು ಮಿಲಿಟರಿ ಸಮೀಕರಣದಲ್ಲಿ ನಿರ್ಣಾಯಕ ಶಕ್ತಿಯಾಗಿದೆ ಎಂದು ಹೇಳಿದೆ. ಪಾಕಿಸ್ತಾನವನ್ನು “ಭಯೋತ್ಪಾದಕ ಕಾರ್ಖಾನೆ” ಎಂದು ಕರೆದಿರುವ ಬಿಎಲ್‌ಎ, ಐಎಸ್‌ಐ ಜಾಗತಿಕ ಭಯೋತ್ಪಾದನೆಯ ಕೇಂದ್ರವಾಗಿದೆ ಎಂದು ಆರೋಪಿಸಿದೆ.

ಬಿಎಲ್‌ಎ ಪಾಕಿಸ್ತಾನದ ಶಾಂತಿ ಮತ್ತು ಕದನ ವಿರಾಮದ ಹೇಳಿಕೆಗಳನ್ನು “ಸುಳ್ಳು ಪ್ರಚಾರ” ಎಂದು ಟೀಕಿಸಿದೆ. “ಪಾಕಿಸ್ತಾನದ ಮಾತುಗಳಿಗೆ ಮರುಳಾಗಬೇಡಿ, ನಿರ್ಣಾಯಕ ಕ್ರಮ ಕೈಗೊಳ್ಳಿ,” ಎಂದು ಭಾರತ ಮತ್ತು ಇತರ ಪ್ರಾದೇಶಿಕ ಶಕ್ತಿಗಳಿಗೆ ಮನವಿ ಮಾಡಿದೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಸೇನೆಯನ್ನು ಸೋಲಿಸಿರುವುದಾಗಿ ಹೇಳಿಕೊಂಡಿರುವ ಬಿಎಲ್‌ಎ, “ಯಾವುದೇ ಬಾಹ್ಯ ಬೆಂಬಲವಿಲ್ಲದೆ, ಪರಮಾಣು ಶಕ್ತಿಯನ್ನು ಸೋಲಿಸಿದ್ದೇವೆ,” ಎಂದು ಹೇಳಿದೆ. ಪಾಕಿಸ್ತಾನವನ್ನು “ಬೇರುಗಳಿಂದ ನಿರ್ಮೂಲನೆ” ಮಾಡಲು ಭಾರತ ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲ ನೀಡಬೇಕು ಎಂದು ಕೋರಿದೆ.

“ಪಾಕಿಸ್ತಾನ ಇರುವವರೆಗೆ ಈ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಅಸ್ಥಿರತೆ ಮುಂದುವರಿಯುತ್ತದೆ,” ಎಂದು ಬಿಎಲ್‌ಎ ಎಚ್ಚರಿಕೆ ನೀಡಿದೆ. ಭಾರತ ಪಾಕಿಸ್ತಾನವನ್ನು ದುರ್ಬಲಗೊಳಿಸಲು ನಿರ್ಧರಿಸಿದರೆ, ಬಿಎಲ್‌ಎ ಪಶ್ಚಿಮ ಭಾಗದಿಂದ ಮಿಲಿಟರಿ ಬೆಂಬಲ ನೀಡಲು ಸಿದ್ಧವಾಗಿದೆ ಎಂದು ತಿಳಿಸಿದೆ. “ನಾವು ಅವರನ್ನು ನಾಶ ಮಾಡುತ್ತೇವೆ. ಜಗತ್ತು ಈ ಅವಕಾಶವನ್ನು ಗುರುತಿಸದಿದ್ದರೆ, ಬಲೂಚ್ ಜನರು ಈ ಹೋರಾಟವನ್ನು ಸ್ವತಂತ್ರವಾಗಿ ಮುಂದುವರಿಸುತ್ತಾರೆ,” ಎಂದು ಬಿಎಲ್‌ಎ ಘೋಷಿಸಿದೆ.

ಬಿಎಲ್‌ಎ ಪ್ರಕಾರ, ಸ್ವತಂತ್ರ ಬಲೂಚಿಸ್ತಾನವು ಈ ಪ್ರದೇಶದಲ್ಲಿ ಶಾಶ್ವತ ಶಾಂತಿ, ಸ್ಥಿರತೆ ಮತ್ತು ಭಯೋತ್ಪಾದನೆಯ ನಿರ್ಮೂಲನೆಗೆ ಖಾತರಿಯಾಗಲಿದೆ. “ಪಾಕಿಸ್ತಾನದ ದಮನಕಾರಿ ಆಡಳಿತದಿಂದ ಬಲೂಚ್ ಜನರನ್ನು ಮುಕ್ತಗೊಳಿಸುವುದು ಮಾತ್ರವಲ್ಲ, ಇಡೀ ದಕ್ಷಿಣ ಏಷ್ಯಾದ ಭದ್ರತೆಗೆ ಕೊಡುಗೆ ನೀಡುತ್ತದೆ,” ಎಂದು ಬಿಎಲ್‌ಎ ವಾದಿಸಿದೆ. ಈ ಮೂಲಕ, ಬಲೂಚ್ ಹೋರಾಟಗಾರರು ತಮ್ಮ ಸ್ವಾತಂತ್ರ್ಯದ ಕನಸನ್ನು ಸಾಕಾರಗೊಳಿಸಲು ಭಾರತದೊಂದಿಗೆ ಸಹಕಾರಕ್ಕೆ ಕೈಚಾಚಿದ್ದಾರೆ.

Exit mobile version