ನವದೆಹಲಿ: ಆಕ್ಸಿಯಮ್-4 (Axiom-4) ಮಿಷನ್ನಡಿಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಿದ್ದ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಭೂಮಿಯತ್ತ ವಾಪಾಸಾಗುತ್ತಿದ್ದಾರೆ. ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಭೂಮಿಗೆ ಪ್ರಯಾಣ ಬೆಳೆಸಿರುವ ಈ ತಂಡವು ಜುಲೈ 15, 2025ರ ಮಧ್ಯಾಹ್ನ 3 ಗಂಟೆಗೆ (ಭಾರತೀಯ ಕಾಲಮಾನ) ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಇಳಿಯಲಿದೆ. ಈ ತಂಡದಲ್ಲಿ ಶುಭಾಂಶು ಶುಕ್ಲಾ ಜೊತೆಗೆ ಅಮೆರಿಕದ ಪೆಗ್ಗಿ ವ್ಹಿಟ್ಸನ್, ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನೀವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಸೇರಿದ್ದಾರೆ.
18 ದಿನಗಳ ಬಾಹ್ಯಾಕಾಶ ಸಂಶೋಧನೆಯನ್ನು ಯಶಸ್ವಿಯಾಗಿ ಪೂರೈಸಿರುವ ಈ ಗಗನಯಾತ್ರಿಗಳ ತಂಡವು ಡ್ರ್ಯಾಗನ್ ನೌಕೆಯಲ್ಲಿ 580 ಪೌಂಡ್ಗಿಂತಲೂ ಹೆಚ್ಚು ಸರಕುಗಳನ್ನು ಒಯ್ಯುದಿದ್ದವು. ಇದರಲ್ಲಿ ನಾಸಾದ ಹಾರ್ಡ್ವೇರ್ ಮತ್ತು 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳಿಂದ ಸಂಗ್ರಹಿಸಲಾದ ಅಮೂಲ್ಯ ಡೇಟಾ ಸೇರಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, “ನೌಕೆಯ ಭೂಮಿಗೆ ಆಗಮನದ ಸಮಯವು ಸರಿಸುಮಾರು ಒಂದು ಗಂಟೆಯ ವ್ಯತ್ಯಾಸವನ್ನು ಹೊಂದಿರಬಹುದು,” ಎಂದು ತಿಳಿಸಿದ್ದಾರೆ.
ಶುಭಾಂಶು ಶುಕ್ಲಾ ಅವರು ಭೂಮಿಗೆ ವಾಪಾಸಾಗುವ ಮುನ್ನ ಐಎಸ್ಎಸ್ನಿಂದ ಭಾವನಾತ್ಮಕ ವಿದಾಯ ಭಾಷಣವನ್ನು ನೀಡಿದರು. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡಿದ ಅವರು, “41 ವರ್ಷಗಳ ಹಿಂದೆ ಭಾರತೀಯರೊಬ್ಬರು ಬಾಹ್ಯಾಕಾಶಕ್ಕೆ ತೆರಳಿದ್ದರು. ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು ಅವರು ನಮಗೆ ವಿವರಿಸಿದ್ದರು. ಇಂದಿನ ಭಾರತವು ಬಾಹ್ಯಾಕಾಶದಿಂದ ಮಹತ್ವಾಕಾಂಕ್ಷೆಯಂತೆ ಕಾಣುತ್ತಿದೆ. ಇಂದಿನ ಭಾರತವು ನಿರ್ಭೀತವಾಗಿದೆ, ಆತ್ಮವಿಶ್ವಾಸದಿಂದ ಕೂಡಿದೆ, ಹೆಮ್ಮೆಯಿಂದ ತುಂಬಿದೆ. ಇಂದಿನ ಭಾರತವು ಇನ್ನೂ ‘ಸಾರೆ ಜಹಾಂ ಸೆ ಅಚ್ಚಾ’ ಎಂದು ಕಾಣುತ್ತದೆ,” ಎಂದು ಹೇಳಿದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ ಅವರು ನಡೆಸಿದ ಪ್ರಮುಖ ಪ್ರಯೋಗಗಳು ವಿಶ್ವದ ಗಮನ ಸೆಳೆದಿವೆ. ಅವರು ಕೈಗೊಂಡ ಬಾಹ್ಯಾಕಾಶ ಸೂಕ್ಷ್ಮ ಪಾಚಿಗಳ (Microalgae) ಅಧ್ಯಯನವು ಆಹಾರ, ಆಮ್ಲಜನಕ ಮತ್ತು ಜೈವಿಕ ಇಂಧನ ಉತ್ಪಾದನೆಯ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿತ್ತು.
ಈ ಮಿಷನ್ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಶುಭಾಂಶು ಶುಕ್ಲಾ ಅವರ ಈ ಸಾಧನೆಯು ಭಾರತದ ಯುವ ಜನತೆಗೆ ಸ್ಫೂರ್ತಿಯಾಗಿದೆ. “ಬಾಹ್ಯಾಕಾಶ ಪರಿಶೋಧನೆಯ ಮುಂದಿನ ಹಾದಿ ದೀರ್ಘ ಮತ್ತು ಸವಾಲಿನದ್ದಾಗಿರಬಹುದು, ಆದರೆ ಈ ಯಾತ್ರೆ ಆರಂಭವಾಗಿದೆ,” ಎಂದು ಶುಕ್ಲಾ ಹೇಳಿದ್ದಾರೆ.
