ಕುವೈತ್, ಮಾರ್ಚ್ 30: ಪರ್ಷಿಯನ್ ಕೊಲ್ಲಿಯಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸುತ್ತಿದೆ.. ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ಕುವೈತ್ನ ವಿದ್ಯುತ್ ಸ್ಥಾವರದ ಸೇವಾ ಕಟ್ಟಡಕ್ಕೆ ಭಾರಿ ಹಾನಿಯಾಗಿದ್ದು, ಒಬ್ಬ ಭಾರತೀಯ ಕಾರ್ಮಿಕ ಸಾವನ್ನಪ್ಪಿದ್ದಾನೆ. ಈ ಘಟನೆಯು ಕೊಲ್ಲಿ ರಾಷ್ಟ್ರಗಳಲ್ಲಿ ಭೀತಿಯನ್ನು ಹೆಚ್ಚಿಸಿದೆ.
ಕುವೈತ್ನ ವಿದ್ಯುತ್ ಸಚಿವಾಲಯವು ಸೋಮವಾರ ಈ ಮಾಹಿತಿಯನ್ನು ದೃಢಪಡಿಸಿದೆ. ಇರಾನ್ ನಡೆಸಿದ ದಾಳಿಯಲ್ಲಿ ಸ್ಥಳದಲ್ಲಿದ್ದ ಭಾರತೀಯ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ವಿದ್ಯುತ್ ಸ್ಥಾವರದ ಸೇವಾ ಕಟ್ಟಡ ಸಂಪೂರ್ಣವಾಗಿ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಧನ ಟ್ಯಾಂಕ್ಗಳ ಮೇಲೂ ಇರಾನ್ ಡ್ರೋನ್ ದಾಳಿ ನಡೆಸಿತ್ತು.
ಇರಾನ್ನ ಪ್ರತೀಕಾರದ ದಾಳಿ ಮುಂದುವರಿಕೆ
ಇಸ್ರೇಲ್ ಮತ್ತು ಅಮೆರಿಕದ ಮಿತ್ರರಾಷ್ಟ್ರಗಳಾದ ಗಲ್ಫ್ ಅರಬ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿಯನ್ನು ತೀವ್ರಗೊಳಿಸಿದೆ. ಅಮೆರಿಕ ಮತ್ತು ಇಸ್ರೇಲ್ ಕಡೆಯಿಂದ ಇರಾನ್ ಮೇಲೆ ದಾಳಿಗಳು ಮುಂದುವರಿದಿವೆ. ಈ ಸಂಘರ್ಷದಲ್ಲಿ ಒಟ್ಟಾರೆ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ಒಂದೆಡೆ ದಾಳಿಯನ್ನು ಮುಂದುವರೆಸಿದ್ದರೆ, ಅಮೆರಿಕ ಯುದ್ಧ ವಿರಾಮದ ಕುರಿತು ಮಾತನಾಡುತ್ತಿದೆ. ಆದರೆ ಇರಾನ್ ತನ್ನ ದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಕುವೈತ್ನ ಮೂಲಸೌಕರ್ಯಗಳು ಇತ್ತೀಚೆಗೆ ಎರಡು ಬಾರಿ ಇರಾನ್ ದಾಳಿಗೆ ತುತ್ತಾಗಿವೆ.
ಕೆಂಪು ಸಮುದ್ರದಲ್ಲಿ ಜಾಗತಿಕ ಸಾಗಣೆಗೆ ಅಪಾಯ
ವಿಶ್ವದ ಒಟ್ಟು ವ್ಯಾಪಾರದ ಸುಮಾರು 12% ಸಾಗಣೆ ಮಾರ್ಗವಾಗಿರುವ ಬಾಬ್ ಎಲ್-ಮಂಡೇಬ್ ಜಲಸಂಧಿಯಲ್ಲಿ ಹೌತಿ ಬಂಡುಕೋರರು ಮತ್ತೊಮ್ಮೆ ಹಡಗುಗಳನ್ನು ಗುರಿಯಾಗಿಸಿಕೊಳ್ಳಬಹುದು ಎಂಬ ಆತಂಕ ಕೂಡ ಮೂಡಿದೆ. ಇದು ಜಾಗತಿಕ ಸಾಗಣೆ ವ್ಯವಸ್ಥೆಗೆ ದೊಡ್ಡ ಹೊಡೆತವಾಗಲಿದೆ.
ಕುವೈತ್ನಲ್ಲಿ ಬೆಂಕಿ ನಂದಿಸಲು ಹರಸಾಹಸ
ಕುವೈತ್ ವಿದ್ಯುತ್ ಸ್ಥಾವರದಲ್ಲಿ ದಾಳಿಯಿಂದ ಉಂಟಾದ ಬೆಂಕಿಯನ್ನು ನಂದಿಸಲು ಕುವೈತ್ ಅಗ್ನಿಶಾಮಕ ತಂಡಗಳು, ಕುವೈತ್ ಸೇನೆ, ರಾಷ್ಟ್ರೀಯ ಗಾರ್ಡ್ ಮತ್ತು ತೈಲ ವಲಯದ ಘಟಕಗಳು ಸಂಜೆಯವರೆಗೂ ಹರಸಾಹಸ ಪಟ್ಟವು. ಆದರೂ ಅದನ್ನು ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಈ ಉದ್ವಿಗ್ನತೆಯು ಗಲ್ಫ್ ರಾಷ್ಟ್ರಗಳ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಸಮುದಾಯವು ಈ ಸಂಘರ್ಷದ ಕುರಿತು ಆತಂಕ ವ್ಯಕ್ತಪಡಿಸಿದ್ದು, ಯುದ್ಧ ವಿರಾಮದ ಕರೆಗಳು ಹೆಚ್ಚಾಗಿವೆ.
