ಯಾದಗಿರಿಯಲ್ಲಿ ವರುಣನ ಅಟ್ಟಹಾಸ: ಸಿಡಿಲಿಗೆ ಬಲಿಯಾದ 60 ಕುರಿಗಳು

BeFunky collage (63)

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬುದುರು ಗ್ರಾಮದಲ್ಲಿ ಪ್ರಕೃತಿ ವಿಕೋಪಕ್ಕೆ 60 ಕುರಿಗಳು ಬಲಿಯಾಗಿವೆ. ಬಿರುಗಾಳಿ ಸಹಿತ ಸುರಿದ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕುರಿಗಾಹಿ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಘಟನೆಯ ವಿವರ:

ಗುರುಮಠಕಲ್ ತಾಲೂಕಿನ ಬುದುರು ಗ್ರಾಮದ ನಿವಾಸಿಗಳಾದ ಮಲ್ಲಪ್ಪ ಮತ್ತು ಜಲ್ಲಪ್ಪ ಎಂಬುವವರಿಗೆ ಸೇರಿದ ಕುರಿಗಳು ಇವಾಗಿವೆ. ಸಂಜೆ ವೇಳೆ ಎಂದಿನಂತೆ ಕುರಿಗಳನ್ನು ಮೇಯಿಸಿಕೊಂಡು, ಬಿರುಗಾಳಿ ಸಹಿತ ಮಳೆ ಬರುತ್ತಿದ್ದ ಕಾರಣ ಊರಿನತ್ತ ಹಿಂದಿರುಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅಪ್ಪಳಿಸಿದ ಭೀಕರ ಸಿಡಿಲಿಗೆ ಕುರಿಗಳ ಹಿಂಡು ಬಲಿಯಾಗಿದೆ.

ಕುರಿಗಾಹಿಗಳ ಆಕ್ರಂದನ:

ತಮ್ಮ ಜೀವನೋಪಾಯಕ್ಕೆ ಆಧಾರವಾಗಿದ್ದ ಸುಮಾರು 60 ಕುರಿಗಳು ಕಣ್ಣೆದುರೇ ಮೃತಪಟ್ಟಿರುವುದನ್ನು ಕಂಡು ಮಲ್ಲಪ್ಪ ಮತ್ತು ಜಲ್ಲಪ್ಪ ದಂಪತಿಗಳು ಕಂಗಾಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡಿರುವ ಇವರು, ಈಗ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಸರ್ಕಾರ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಗುರುಮಠಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Exit mobile version