ಕರ್ನಾಟಕದ ವಿದ್ಯಾರ್ಥಿನಿಯಿಂದ ಪಾಕ್​ ಪರ ಪೋಸ್ಟ್, ದೂರು ದಾಖಲು

Web 2025 05 09t094329.505

ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಮಧ್ಯೆ, ಕರ್ನಾಟಕದ ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ತಷಾವುದ್ದ ಫಾರೂಖಿ ಶೇಖ್ ಪಾಕಿಸ್ತಾನದ ಪರವಾಗಿ ದೇಶವಿರೋಧಿ ಸಾಮಾಜಿಕ ಮಾಧ್ಯಮ ಪೋಸ್ಟ್ ಹಂಚಿಕೊಂಡ ಆರೋಪದಡಿ ದೇಶದ್ರೋಹದ ಪ್ರಕರಣ ಎದುರಿಸುತ್ತಿದ್ದಾಳೆ. ಈ ಘಟನೆಯು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿನಿಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.

ವಿಜಯಪುರ, ಮೇ 9, 2025: ‘ಆಪರೇಷನ್ ಸಿಂದೂರ್’ನಡಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ್ದರಿಂದ ಗಡಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನವು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದು, ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯು ಇವುಗಳನ್ನು ಯಶಸ್ವಿಯಾಗಿ ತಡೆದಿದೆ. ಈ ಸಂಘರ್ಷದ ಮಧ್ಯೆ, ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ತಷಾವುದ್ದ ಫಾರೂಖಿ ಶೇಖ್ ಪಾಕಿಸ್ತಾನದ ಜನರ ಸುರಕ್ಷತೆಗಾಗಿ ಮತ್ತು ಭಾರತವನ್ನು ಟೀಕಿಸುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾಳೆ.

ADVERTISEMENT
ADVERTISEMENT
ವಿದ್ಯಾರ್ಥಿನಿಯ ಪೋಸ್ಟ್‌ನಲ್ಲಿ ಏನಿತ್ತು?

ತಷಾವುದ್ದ ಫಾರೂಖಿ ಶೇಖ್ ತನ್ನ ‘@hoodyyyyyyy’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ, “ನನ್ನ ಪಾಕಿಸ್ತಾನಿ ಸ್ನೇಹಿತರಿಗೆ, ಐಒಜೆಕೆ, ಎಜೆಕೆ ಜನರು ಸರ್ಕಾರಿ ಮಿಲಿಟರಿ ಸ್ಥಳಗಳಿಗೆ ಹೋಗಬೇಡಿ. ಗಡಿಯಿಂದ 200 ಕಿಲೋ ಮೀಟರ್ ಹೋಗಬೇಡಿ. ಅಲ್ಲಾ ಪಾಕಿಸ್ತಾನ ಹಾಗೂ ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸಲಿ ಅಮೀನ್#sos” ಎಂದು ಪೋಸ್ಟ್ ಮಾಡಿದ್ದಾಳೆ. ಇದೇ ರೀತಿಯ ವಿಷಯವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲೂ ಹಂಚಿಕೊಂಡಿದ್ದಾಳೆ. ಈ ಪೋಸ್ಟ್‌ಗಳು ವೈರಲ್ ಆದವು, ಇದರಿಂದ ಸ್ಥಳೀಯರಲ್ಲಿ ಮತ್ತು ಹಿಂದೂ ಸಂಘಟನೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ವಿದ್ಯಾರ್ಥಿನಿಯ ಪೋಸ್ಟ್‌ಗೆ ಸಂಬಂಧಿಸಿದಂತೆ ಹಿಂದೂ ಪರ ಸಂಘಟನೆಗಳು ಕಾನೂನು ಕ್ರಮಕ್ಕೆ ಒತ್ತಾಯಿಸಿದವು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ವಿನೋದ ದೊಡಮನಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ತಷಾವುದ್ದ ಫಾರೂಖಿ ಶೇಖ್ ವಿರುದ್ಧ ಭಾರತೀಯ ನಾಗರಿಕ ಸಂಹಿತೆ (BNS) ಸೆಕ್ಷನ್ 152 ಮತ್ತು 197.3(5) ಅಡಿಯಲ್ಲಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಮತ್ತು ರಾಷ್ಟ್ರೀಯ ಏಕತೆಗೆ ಅಪಾಯಕಾರಿಯಾದ ಪೋಸ್ಟ್‌ಗಳನ್ನು ಹಂಚಿಕೊಂಡ ಆರೋಪದಡಿ ಪ್ರಕರಣ ದಾಖಲಾಗಿದೆ.

ದೂರು ದಾಖಲಾದ ಕೆಲವೇ ಕ್ಷಣಗಳಲ್ಲಿ ತಷಾವುದ್ದ ಫಾರೂಖಿ ಶೇಖ್ ತನ್ನ ನಿಲುವನ್ನು ಬದಲಾಯಿಸಿ ಕ್ಷಮೆಯಾಚಿಸಿದ್ದಾಳೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ, “ನನ್ನ ಕಾಮೆಂಟ್‌ನಿಂದ ಕೆಲವರಿಗೆ ನೋವಾಗಿದೆ. ಮನನೊಂದಿರುವ ಎಲ್ಲರಿಗೂ ಹೃದಯಪೂರ್ವಕ ಕ್ಷಮೆಯಾಚಿಸುತ್ತೇನೆ. ಭಾರತೀಯಳಾದ ನಾನು ನನ್ನ ರಾಷ್ಟ್ರವನ್ನು ಪ್ರೀತಿಸುತ್ತೇನೆ. ಇದು ನನ್ನ ತಾಯ್ನಾಡು. ನನ್ನ ಕಾಮೆಂಟ್ ಮೂರ್ಖತನದ ಕೃತ್ಯವಾಗಿತ್ತು. ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ. ಇಂತಹ ತಪ್ಪನ್ನು ಎಂದಿಗೂ ಮಾಡುವುದಿಲ್ಲ. ಜೈ ಹಿಂದ್,” ಎಂದು ಪೋಸ್ಟ್ ಮಾಡಿದ್ದಾಳೆ. ಪ್ರಸ್ತುತ, ತಷಾವುದ್ದ ಮುಂಬೈನಲ್ಲಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

Exit mobile version