ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆ: NDA ಮೈತ್ರಿಕೂಟಕ್ಕೆ ಬಹುಮತ, ಕಾಂಗ್ರೆಸ್‌ಗೆ ಭಾರೀ ಮುಖಭಂಗ!

ವರ್ತೂರು ಪ್ರಕಾಶ್ ತಂತ್ರಕ್ಕೆ ಕಾಂಗ್ರೆಸ್ ಸೋಲು!

Untitled design 2025 08 21t134351.333

ಕೋಲಾರ: ಕೋಲಾರ ತಾಲ್ಲೂಕಿನ ವೇಮಗಲ್ ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 17 ಸ್ಥಾನಗಳ ಪೈಕಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯನ್ನುಂಟುಮಾಡಿದ್ದಾರೆ. ಕಾಂಗ್ರೆಸ್‌ಗೆ ಕೇವಲ 6 ಸ್ಥಾನಗಳು ದೊರೆತಿದ್ದು, ಒಬ್ಬ ಪಕ್ಷೇತರ ಅಭ್ಯರ್ಥಿಯೂ ಗೆಲುವು ಸಾಧಿಸಿದ್ದಾರೆ.

ಹೊಸದಾಗಿ ರಚನೆಯಾದ ಪಟ್ಟಣ ಪಂಚಾಯಿತಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕರು ರೂಪಿಸಿದ್ದ ಎಲ್ಲ ಲೆಕ್ಕಾಚಾರಗಳು ವಿಫಲವಾಗಿವೆ. ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್. ಸುದರ್ಶನ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್, ಮತ್ತು ಸಚಿವ ಕೃಷ್ಣ ಬೈರೇಗೌಡ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿದ್ದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದ್ದರೂ, ಫಲಿತಾಂಶ ಕಾಂಗ್ರೆಸ್‌ಗೆ ನಿರಾಸೆ ತಂದಿದೆ.

ಕಾಂಗ್ರೆಸ್‌ಗೆ ಒಳಗೊಳಗೇ ಆಗಿರುವ ಒಡಕುಗಳೂ ಸೋಲಿಗೆ ಕಾರಣವಾಯಿತು. ಸಚಿವ ಕೆ.ಎಚ್. ಮುನಿಯಪ್ಪನವರ ಬೆಂಬಲಿಗರನ್ನು ಶಾಸಕ ಕೊತ್ತೂರು ಮಂಜುನಾಥ್ ಮತ್ತು ಅನಿಲ್ ಕುಮಾರ್ ನಿರ್ಲಕ್ಷಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್ ಮತ್ತು ಕಾರ್ಯಾಧ್ಯಕ್ಷ ಶ್ರೀನಿವಾಸ್‌ರನ್ನು ಪ್ರಚಾರದಿಂದ ದೂರವಿಟ್ಟಿದ್ದರು. ಸಚಿವ ಕೆ.ಎಚ್. ಮುನಿಯಪ್ಪನವರಿಗೆ ಕೂಡ ಪ್ರಚಾರಕ್ಕೆ ಆಹ್ವಾನ ನೀಡಿರಲಿಲ್ಲ. ಇದರ ಜೊತೆಗೆ, ಕಾಂಗ್ರೆಸ್ ನಾಯಕರು ಮುನಿಯಪ್ಪನವರ ಸಮುದಾಯಕ್ಕೆ ಸೇರಿದ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡದಿರುವುದು ಮತದಾರರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್‌ರವರ “ಮಾದಿಗ ಸಮುದಾಯ ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ಟಿಕೆಟ್ ಏಕೆ ನೀಡಬೇಕು” ಎಂಬ ಖಾಸಗಿ ಹೇಳಿಕೆಯೂ ಪಕ್ಷಕ್ಕೆ ದೊಡ್ಡ ತೊಡಕಾಯಿತು. ಇದರಿಂದಾಗಿ, ಮಲ್ಲಪ್ಪನಹಳ್ಳಿ, ಕ್ಯಾಲನೂರು ಸೇರಿದಂತೆ ಎಡಗೈ ಸಮುದಾಯ ಹೆಚ್ಚಿರುವ ಗ್ರಾಮಗಳಲ್ಲಿ ಕಾಂಗ್ರೆಸ್‌ಗೆ ವಿರೋಧ ವ್ಯಕ್ತವಾಯಿತು.

ಇನ್ನೊಂದೆಡೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಾಯಕರಾದ ವರ್ತೂರು ಪ್ರಕಾಶ್ ಚುನಾವಣೆಯನ್ನು ಯಶಸ್ವಿಯಾಗಿ ಸಂಘಟಿಸಿದರು. ಕಾಂಗ್ರೆಸ್‌ನ ಒಳ ದೌರ್ಬಲ್ಯಗಳನ್ನು ಗುರುತಿಸಿ, ಎನ್‌ಡಿಎ ಅಭ್ಯರ್ಥಿಗಳು ತಂತ್ರಗಾರಿಕೆಯಿಂದ ಗೆಲುವು ಸಾಧಿಸಿದರು. ಜೆಡಿಎಸ್ ಕಾರ್ಯಕರ್ತರ ಆರಂಭಿಕ ಅಸಮಾಧಾನವನ್ನು ನಿಭಾಯಿಸಿ, ವರ್ತೂರು ಪ್ರಕಾಶ್ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಗ್ಗೂಡಿಸಿದರು. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕೋಲಾರದಲ್ಲಿ ವಿಜಯೋತ್ಸವ ಆಚರಿಸಿದರು.

ವಿಜೇತ ಅಭ್ಯರ್ಥಿಗಳು ಮತ್ತು ಮತಗಳ ವಿವರ:

ವಾರ್ಡ್ ಸಂಖ್ಯೆ

ಅಭ್ಯರ್ಥಿ ಹೆಸರು

ಪಕ್ಷ

ಪಡೆದ ಮತಗಳು

1

ಅಂಜಲಿ ಪ್ರಕಾಶ್

ಕಾಂಗ್ರೆಸ್

325
2

ರಾಮು

ಬಿಜೆಪಿ

455
3

ರವಿಚಂದ್ರ

ಜೆಡಿಎಸ್

368
4

ಅನುಷ

ಜೆಡಿಎಸ್

397
5

ಲೋಕೇಶ್

ಜೆಡಿಎಸ್

364
6

ಸಿ.ಎಸ್. ವೆಂಕಟೇಶ್

ಬಿಜೆಪಿ

529
7

ಮಂಜುಳ

ಕಾಂಗ್ರೆಸ್

449
8

ಸುಬ್ರಮಣ್ಯಂ

ಬಿಜೆಪಿ

292
9

ರಮೇಶ್

ಜೆಡಿಎಸ್

314
10

ತಾಸೂಫ್ ಖಾನ್

ಕಾಂಗ್ರೆಸ್

352
11

ಗಂಗಪ್ಪ

ಕಾಂಗ್ರೆಸ್

462
12

ಮುನಿರಾಜು

ಬಿಜೆಪಿ

340
13

ಲಲಿತಮ್ಮ

ಬಿಜೆಪಿ

249
14

ನಾಗೇಶ್

ಬಿಜೆಪಿ

450
15

ದೀಪ

ಕಾಂಗ್ರೆಸ್

424
16

ಎಸ್. ಸುಜಾತ

ಬಿಜೆಪಿ

315
17

ಶಶಿಕಲಾ

ಕಾಂಗ್ರೆಸ್

437

ಮಾಹಿತಿ: ಕೃಷ್ಣಮೂರ್ತಿ ವೀರ ವೇಮಗಲ್

Exit mobile version