ಶೌಚಾಲಯದ ಕಿಟಕಿ ಮೂಲಕ ನುಗ್ಗಿ 12 ಲಕ್ಷ ಚಿನ್ನದ ಗಟ್ಟಿ ಎಗರಿಸಿದ ಕದೀಮರು!

BeFunky collage (8)

ಬೆಂಗಳೂರಿನ ನಗರತ್‌ ಪೇಟೆಯಲ್ಲಿ ಶೌಚಾಲಯದ ಕಿಟಕಿ ಮೂಲಕ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದವರೇ ಆಗಿದ್ದು, ತಮ್ಮ ಕೆಲಸದ ಜಾಗದಲ್ಲೇ ದೊಡ್ಡ ಮಟ್ಟದ ಕಳ್ಳತನಕ್ಕೆ ಸಂಚು ಹೂಡಿದ್ದರು.

ಬಂಧಿತ ಆರೋಪಿಗಳು ಅರ್ಜುನ್ ಅಲಿಯಾಸ್ ರೋಲೆಕ್ಸ್, ರಾಕ್, ನಾಗರಾಜು ಅಲಿಯಾಸ್ ಆರ್‌ಎಕ್ಸ್ ನಾಗ (ಶ್ರೀರಾಮಪುರ ಪೊಲೀಸ್ ಠಾಣೆಯ ರೌಡಿಶೀಟರ್) ಇವರೆಲ್ಲರೂ ಶ್ರೀರಾಮಪುರ ನಿವಾಸಿಗಳಾಗಿದ್ದು, ನಗರತ್‌ಪೇಟೆಯ ಚಿನ್ನದ ಅಂಗಡಿಗಳ ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು.

ಹೇಗೆ ನಡೆಯಿತು ಕಳ್ಳತನ?

ಕಳೆದ ಮೇ 6 ರಂದು ನಗರತ್‌ಪೇಟೆಯ ಆರುಮ್ ಜ್ಯುವೆಲ್ಲರ್ಸ್‌ನ 5ನೇ ಮಹಡಿಯಲ್ಲಿ ಈ ಕಳ್ಳತನ ನಡೆಸಲಾಗಿತ್ತು. ಆರೋಪಿಗಳು ಅಂಗಡಿಯ ಶೌಚಾಲಯದ ಕಿಟಕಿ ಮೂಲಕ ಒಳನುಗ್ಗಿ, ಅಲ್ಲಿದ್ದ 84 ಗ್ರಾಂ ತೂಕದ (12 ಲಕ್ಷ ರೂ. ಮೌಲ್ಯದ) ಚಿನ್ನದ ಗಟ್ಟಿಯನ್ನು ಕದ್ದು ಪರಾರಿಯಾಗಿದ್ದರು.

ಕೊಳಚೆಯಲ್ಲೇ ಚಿನ್ನ ಹುಡುಕುತ್ತಿದ್ದರಂತೆ!

ಇವರು ಕೇವಲ ಸ್ವಚ್ಛತಾ ಕೆಲಸಗಾರರಾಗಿರಲಿಲ್ಲ. ಚಿನ್ನದ ಅಂಗಡಿಗಳ ಶೌಚಾಲಯ ಮತ್ತು ಚರಂಡಿಗಳಿಂದ ಬರುವ ಕೊಳಚೆಯನ್ನು ಸಂಗ್ರಹಿಸಿ, ಅದರಲ್ಲಿ ಕೊಚ್ಚಿ ಹೋಗುತ್ತಿದ್ದ ಸಣ್ಣ ಸಣ್ಣ ಚಿನ್ನದ ಕಣಗಳನ್ನು ಹುಡುಕಿ ಮಾರಾಟ ಮಾಡುತ್ತಿದ್ದರು. ಆದರೆ ದಿನಾಲೂ ಸಣ್ಣಪುಟ್ಟ ಲಾಭಕ್ಕಿಂತ ಒಂದೇ ಬಾರಿಗೆ ದೊಡ್ಡ ಮೊತ್ತ ದೊರಕಿಸಿಕೊಳ್ಳಬೇಕೆಂಬ ದುರಾಸೆಯಿಂದ ಈ ಕಳ್ಳತನ ಮಾಡಲು ಸಂಚು ಹೂಡಿದ್ದರು.

ಪೊಲೀಸರು ಹೇಗೆ ಬಂಧಿಸಿದರು?

ಅಂಗಡಿ ಮಾಲೀಕರು ನೀಡಿದ ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ಪರಾರಿಯಾಗುತ್ತಿರುವುದು ಪತ್ತೆಯಾಗಿತ್ತು. ನಗರತ್‌ಪೇಟೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ಕೆಲವರ ಮೇಲೆ ಅನುಮಾನ ಮೂಡಿತ್ತು. ತೀವ್ರ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

ವಶಕ್ಕೆ ಪಡೆದ ಚಿನ್ನದ ಗಟ್ಟಿ

ಪೊಲೀಸರು ಆರೋಪಿಗಳಿಂದ 12 ಲಕ್ಷ ರೂಪಾಯಿ ಮೌಲ್ಯದ 84 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಜೈಲಿಗೆ ಒಳಪಡಿಸಿದ್ದಾರೆ.

Exit mobile version