ಕೇಂದ್ರದ ಮಾರ್ಗಸೂಚಿಯಂತೆ ಅಲ್ಪಸಂಖ್ಯಾತರಿಗೆ ಶೇ.15 ಮೀಸಲಾತಿ: ಸಿಎಂ ಸಿದ್ದರಾಮಯ್ಯ

ಬಿಜೆಪಿಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ

Add a heading (68)

ಬೆಂಗಳೂರು: ಕರ್ನಾಟಕದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಶೇ.10 ರಿಂದ ಶೇ.15 ಕ್ಕೆ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷ ಬಿಜೆಪಿಯು ತೀವ್ರವಾಗಿ ಟೀಕಿಸಿದೆ. ಈ ನಿರ್ಧಾರವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ಕ್ರಮವು ಪ್ರಧಾನಮಂತ್ರಿಯ 15 ಅಂಶಗಳ ಕಾರ್ಯಕ್ರಮ (2019) ಆಧಾರಿತವಾಗಿದ್ದು, ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನರಿಗೆ ವಸತಿ ಯೋಜನೆಗಳಲ್ಲಿ ಭೌತಿಕ ಮತ್ತು ಆರ್ಥಿಕ ಗುರಿಗಳನ್ನು ಸಾಧಿಸಲು ಒತ್ತು ನೀಡುತ್ತದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳು, ರಾಜ್ಯ ಮತ್ತು ಕೇಂದ್ರ ಸಂಸ್ಥೆಗಳಲ್ಲಿ ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಅಲ್ಪಸಂಖ್ಯಾತರಿಗೆ 15% ಗುರಿಯನ್ನು ಸಾಧಿಸಬೇಕೆಂದು ಸ್ಪಷ್ಟವಾಗಿ ನಿರ್ದೇಶಿಸುತ್ತವೆ. ಈ ಮಾರ್ಗಸೂಚಿಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದಲೇ ಜಾರಿಗೊಂಡಿದ್ದು, ಹಲವು ವರ್ಷಗಳಿಂದ ಅನುಷ್ಠಾನದಲ್ಲಿವೆ. “ಇದು ಅಸಂವಿಧಾನಿಕ ತುಷ್ಟೀಕರಣ ನೀತಿಯಾಗಿದ್ದರೆ, ಕೇಂದ್ರ ಸರ್ಕಾರವೇ ಈ ನಿಯಮವನ್ನು ಎಲ್ಲ ರಾಜ್ಯಗಳಿಗೆ ಜಾರಿಗೊಳಿಸಲು ಯಾಕೆ ಆದೇಶಿಸಿದೆ? ಪ್ರಧಾನಮಂತ್ರಿ ಆವಾಸ್ ಯೋಜನೆಯಂತಹ ಕೇಂದ್ರದ ಕಾರ್ಯಕ್ರಮಗಳಲ್ಲಿ ಈ ನೀತಿಯನ್ನು ಯಾಕೆ ಅನುಷ್ಠಾನಗೊಳಿಸಲಾಗುತ್ತಿದೆ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ADVERTISEMENT
ADVERTISEMENT

ರಾಜ್ಯ ಸರ್ಕಾರದ ಈ ನಿರ್ಣಯವು ಇಡೀ ರಾಜ್ಯಕ್ಕೆ ಹೆಚ್ಚುವರಿ ಮೀಸಲಾತಿಯನ್ನು ಅನ್ವಯಿಸುವುದಕ್ಕಿಂತ, ನಿರ್ದಿಷ್ಟ ಸವಾಲುಗಳಿಗೆ ಮಾತ್ರ ಸೀಮಿತವಾಗಿದೆ. ಕೆಲವು ಗ್ರಾಮ ಪಂಚಾಯತಿಗಳಲ್ಲಿ ಅಲ್ಪಸಂಖ್ಯಾತ ಜನಸಂಖ್ಯೆ ಶೇ.10ಕ್ಕಿಂತ ಕಡಿಮೆ ಇದ್ದು, ಈ ಪಂಚಾಯತಿಗಳಲ್ಲಿ ನಿಗದಿತ ಶೇ.10 ಮೀಸಲಾತಿಯ ಸದ್ಬಳಕೆಯಾಗುತ್ತಿರಲಿಲ್ಲ. ಆದ್ದರಿಂದ, ಈ ಲೋಪವನ್ನು ಸರಿಪಡಿಸಲು, ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಿಗೆ ಗರಿಷ್ಠ ಶೇ.15 ಮಿತಿಯೊಳಗೆ ವಸತಿ ಹಂಚಿಕೆಯನ್ನು ಮರುಹಂಚಿಕೆ ಮಾಡಲಾಗಿದೆ.

“ಇದು ಕೇವಲ ಆಡಳಿತಾತ್ಮಕ ಹೊಂದಾಣಿಕೆಯಾಗಿದ್ದು, ಎಸ್‌ಸಿ, ಎಸ್‌ಟಿ, ಅಥವಾ ಒಬಿಸಿ ವರ್ಗಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕಾನೂನು ಇಲಾಖೆಯ ವಿಸ್ತೃತ ಪರಾಮರ್ಶೆಯ ನಂತರ ಈ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಇದು ಸಾಂವಿಧಾನಿಕವಾಗಿಯೂ ಸಮರ್ಪಕವಾಗಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಅವರು ಬಿಜೆಪಿಯ ಟೀಕೆಗಳನ್ನು ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ಕೂಡಿದವು ಎಂದು ಖಂಡಿಸಿದ್ದಾರೆ. “ರಾಷ್ಟ್ರಮಟ್ಟದಲ್ಲಿ ಶೇ.15 ಮೀಸಲಾತಿಯನ್ನು ಜಾರಿಗೊಳಿಸಿರುವ ಅದೇ ಬಿಜೆಪಿ, ಕರ್ನಾಟಕದಲ್ಲಿ ತಾವೇ ರೂಪಿಸಿದ ಮಾರ್ಗಸೂಚಿಗಳ ಆಧಾರದ ನಿರ್ಧಾರವನ್ನು ಟೀಕಿಸುತ್ತಿದೆ. ಬಿಜೆಪಿ ನಾಯಕರು ತಮ್ಮ ಕೇಂದ್ರ ಸರ್ಕಾರವು ಈ ಮಾರ್ಗಸೂಚಿಗಳನ್ನು ಯಾಕೆ ಮುಂದುವರೆಸಿದೆ ಎಂದು ಮೊದಲು ವಿವರಿಸಲಿ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ನಿರ್ಧಾರದಿಂದ ಪ್ರಸಕ್ತ ವರ್ಷದಲ್ಲಿ ಸುಮಾರು 34,000 ಅಲ್ಪಸಂಖ್ಯಾತ ಕುಟುಂಬಗಳಿಗೆ ಲಾಭವಾಗಲಿದೆ, ಇವರಲ್ಲಿ ಹೆಚ್ಚಿನವರು ಭೂರಹಿತರು ಮತ್ತು ವಸತಿಯ ತುರ್ತು ಅಗತ್ಯವಿರುವವರು. “ಅಲ್ಪಸಂಖ್ಯಾತ ಅರ್ಜಿದಾರರಿಲ್ಲದ ಪಂಚಾಯತಿಗಳಲ್ಲಿ ಉಪಯೋಗವಾಗದೆ ಉಳಿದ ವಸತಿ ಹಂಚಿಕೆಯನ್ನು ಅಗತ್ಯವಿರುವ ಪ್ರದೇಶಗಳಿಗೆ ಮರುಹಂಚಿಕೆ ಮಾಡುವ ಈ ಕ್ರಮವು, ಯಾವುದೇ ಮನೆಯೂ ತಾಂತ್ರಿಕ ಕಾರಣಗಳಿಂದ ನಿರ್ಮಾಣವಾಗದೆ ಉಳಿಯದಂತೆ ಖಾತರಿಪಡಿಸುತ್ತದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಬಿಜೆಪಿಯ ಕೋಮುವಾದಿ ಆರೋಪಗಳನ್ನು ತಿರಸ್ಕರಿಸಿದ್ದಾರೆ. “ಈ ರೀತಿಯ ವ್ಯವಸ್ಥಿತ ಅಪಪ್ರಚಾರವು ಕೋಮು ವಿವಾದವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಇದು ಬಡವರ ಉದ್ಧಾರಕ್ಕಾಗಿ ನಾವು ಮಾಡುತ್ತಿರುವ ಪ್ರಯತ್ನವನ್ನು ದಿಕ್ಕು ತಪ್ಪಿಸುವ ಕುತಂತ್ರವಾಗಿದೆ. ಕಾಂಗ್ರೆಸ್ ಸರ್ಕಾರವು ಜಾತಿ, ಧರ್ಮದ ಭೇದವಿಲ್ಲದೆ ಸರ್ವರನ್ನೂ ಒಳಗೊಂಡ ಅಭಿವೃದ್ಧಿಗೆ ಬದ್ಧವಾಗಿದೆ. ಬಿಜೆಪಿಯ ದ್ವೇಷಪೂರಿತ ರಾಜಕಾರಣವನ್ನು ನಾವು ತಿರಸ್ಕರಿಸುತ್ತೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಿಹೇಳಿದ್ದಾರೆ.

ಕರ್ನಾಟಕ ಸರ್ಕಾರವು ನ್ಯಾಯ, ಸಮಾನತೆ, ಮತ್ತು ಸಹಾನುಭೂತಿಯ ಆಶಯಗಳೊಂದಿಗೆ ಎಲ್ಲ ಬಡ ಕುಟುಂಬಗಳಿಗೆ ತಲುಪುವ ಯೋಜನೆಗಳನ್ನು ಜಾರಿಗೊಳಿಸುವುದನ್ನು ಮುಂದುವರಿಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. “ಬಿಜೆಪಿ ನಾಯಕರು ತಿರುಚಿದ ಮಾಹಿತಿಯಿಂದ ಕೋಮು ಬಣ್ಣ ಬಳಿಯುವ ಬದಲು, ಬಡವರ ಉದ್ಧಾರಕ್ಕಾಗಿ ನಮ್ಮೊಂದಿಗೆ ಕೈಜೋಡಿಸಲಿ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

Exit mobile version