ಶಿಗ್ಗಾಂವಿ ಗುತ್ತಿಗೆದಾರ ಕೊಲೆ ಪ್ರಕರಣ: ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್

Untitled design (3)

ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಗುತ್ತಿಗೆದಾರ ಶಿವಾನಂದ ಕುನ್ನೂರನನ್ನು ಜೂನ್ 23ರಂದು ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಈ ಕೊಲೆ ಪ್ರಕರಣದ ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ್ ಸವದತ್ತಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿಗಳು ದಾಳಿ ನಡೆಸಿದಾಗ, ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ನಡೆಸಿದ ಘಟನೆ ಇಂದು ಹಾನಗಲ್‌ನ ಕೊಂಡೋಜಿ ಬಳಿ ನಡೆದಿದೆ.

ಶಿಗ್ಗಾಂವಿ ಠಾಣೆಯ ಸಿಪಿಐ ಸತ್ಯಪ್ಪ ಮಾಳಗೊಂಡ ಮತ್ತು ಪಿಎಸ್‌ಐ ಸಂಪತ್ ಆನಿಕಿವಿ, ಆಡೂರು ಪಿಎಸ್‌ಐ ಶರಣಪ್ಪ ಹಂಡರಗಲ್ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಲು ತೆರಳಿತ್ತು. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಸಿಪಿಐ ಸತ್ಯಪ್ಪ ಮಾಳಗೊಂಡ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಘಟನೆಯಲ್ಲಿ ಸಿಪಿಐ ಸತ್ಯಪ್ಪ ಮಾಳಗೊಂಡ, ಪಿಎಸ್‌ಐ ಸಂಪತ್ ಕುಮಾರ್, ಸಿಬ್ಬಂದಿ ಹರೀಶ್ ಮತ್ತು ರವಿ ಗಾಯಗೊಂಡಿದ್ದಾರೆ. ಗಾಯಗೊಂಡ ಪೊಲೀಸರಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ADVERTISEMENT
ADVERTISEMENT

ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಕರಣದ ತನಿಖೆಯ ಮೊದಲಿಗೆ ಶಿವಾನಂದನ ಕೊಲೆಗೆ ಆಸ್ತಿ ವಿವಾದವೇ ಕಾರಣ ಎಂದು ಭಾವಿಸಲಾಗಿತ್ತು. ಆದರೆ, ಆಡಿಯೋ ಕ್ಲಿಪ್‌ವೊಂದು ವೈರಲ್ ಆಗಿದ್ದು, ಶಿವಾನಂದನೇ ಅಶ್ರಫ್‌ನನ್ನು ಕೊಲೆಗೆ ಸುಪಾರಿ ಕೊಟ್ಟಿದ್ದ ಎಂಬ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಆದಾಗ್ಯೂ, ಕೊಲೆಗೆ ನಿಖರ ಕಾರಣವನ್ನು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

ಶಿವಾನಂದನ ಕೊಲೆಯ ನಂತರ, ಆತನ ಕುಟುಂಬಸ್ಥರು ಆರೋಪಿ ನಾಗರಾಜ್ ಸವದತ್ತಿಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯೂ ಶಿಗ್ಗಾಂವಿಯಲ್ಲಿ ನಡೆದಿತ್ತು. ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಸ್ಥಳೀಯವಾಗಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

Exit mobile version