ಶಿಗ್ಗಾಂವಿಯಲ್ಲಿ ಗುತ್ತಿಗೆದಾರನ ಭೀಕರ ಹತ್ಯೆ: ಆರೋಪಿಯ ಮನೆಗೆ ಬೆಂಕಿ ಹಚ್ಚಿ ಕುಟುಂಬ ಆಕ್ರೋಶ

Untitled design (80)

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಭಾರೀ ಸಂಚಲನ ಸೃಷ್ಟಿಸಿದೆ. ಈ ಹತ್ಯೆಯ ಪ್ರತೀಕಾರವಾಗಿ ಶಿವಾನಂದ ಅವರ ಕುಟುಂಬಸ್ಥರು ಆರೋಪಿಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ (ಜೂನ್ 24) ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿಗ್ಗಾಂವಿ ಪಟ್ಟಣದ ಗಂಗಿಬಾವಿ ಸರ್ಕಲ್ ಬಳಿಯ ಮಹೇಶ್ ಡಾಬಾದಲ್ಲಿ ಶಿವಾನಂದ ಕುನ್ನೂರು ಊಟ ಮಾಡುತ್ತಿದ್ದರು. ಊಟ ಮುಗಿಸಿ ಹೊರಬರುತ್ತಿದ್ದಾಗ ನಾಲ್ವರ ಗುಂಪು ಏಕಾಏಕಿ ದಾಳಿ ನಡೆಸಿತು. ಕತ್ತು, ತಲೆ, ಮತ್ತು ಎದೆಯ ಭಾಗಕ್ಕೆ ಕಬ್ಬಿಣದ ರಾಡ್ ಮತ್ತು ತಲವಾರಿನಿಂದ ದಾಳಿ ಮಾಡಿ ಕೊಲೆಗೈದರು. ಈ ಘಟನೆಯನ್ನು ಕಣ್ಣಾರೆ ಕಂಡ ಜಂಪನಗೌಡ ಎಂಬವರು ಶಿವಾನಂದರ ಜೊತೆ ಊಟಕ್ಕೆ ಬಂದಿದ್ದವರಾಗಿದ್ದು, ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ADVERTISEMENT
ADVERTISEMENT
ಕುಟುಂಬಸ್ಥರ ಆರೋಪ

ಶಿವಾನಂದ ಕುನ್ನೂರು ಅವರಿಗೆ ಹಲವು ಹಣಕಾಸಿನ ವ್ಯವಹಾರಗಳಿದ್ದು, ಕೆಲ ವರ್ಷಗಳ ಹಿಂದೆ ಶಿಗ್ಗಾಂವಿಯಲ್ಲಿ 1 ಗುಂಟೆ ಜಾಗ ಖರೀದಿಸಿದ್ದರು. ಈ ಜಾಗ ಖರೀದಿಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ, ಪ್ರಕರಣ ನ್ಯಾಯಾಲಯಕ್ಕೆ ಹೋಗಿತ್ತು. ಶಿವಾನಂದ ಕುನ್ನೂರು ನ್ಯಾಯಾಲಯದಲ್ಲಿ ಜಯಸಾಧಿಸಿದ್ದರೂ, ಈ ವಿಚಾರದಲ್ಲಿ ವಿರೋಧಿಗಳ ದ್ವೇಷಕ್ಕೆ ಗುರಿಯಾಗಿದ್ದರು. ಈ ಕಾರಣದಿಂದಾಗಿ ವಿರೋಧಿಗಳು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆರೋಪಿಗಳು ಯಾರು?

ನಾಗರಾಜ ಸವದತ್ತಿ, ಹನುಮಂತ, ಅಶ್ರಫ್, ಸುದೀಪ್, ಮತ್ತು ಸುರೇಶ್ ಈ ದಾಳಿಯ ಪ್ರಮುಖ ಆರೋಪಿಗಳು. ಸ್ಥಳೀಯರು ಘಟನೆಯ ವಿಡಿಯೋ ಚಿತ್ರೀಕರಿಸಿದ್ದು, ಈ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಯ ಮನೆಗೆ ಬೆಂಕಿ

ಹತ್ಯೆಯ ಆಕ್ರೋಶದಿಂದ ರೊಚ್ಚಿಗೆದ್ದ ಶಿವಾನಂದರ ಕುಟುಂಬಸ್ಥರು, ಶಿಗ್ಗಾಂವಿಯ ಅಂಬೇಡ್ಕರ್ ವೃತ್ತದ ಬಳಿಯಿರುವ ಆರೋಪಿ ನಾಗರಾಜ ಸವದತ್ತಿಯ ಮನೆಗೆ ನಿನ್ನೆ ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ ಮನೆ ಸಂಪೂರ್ಣ ಭಸ್ಮವಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದ ಕಾರಣ ಜೀವಹಾನಿಯಾಗಿಲ್ಲ.

ಹತ್ಯೆಯಾದ ಶಿವಾನಂದರ ಪತ್ನಿ ನಾಗರತ್ನಾ ದೂರು ದಾಖಲಿಸಿದ್ದು, ಶಿಗ್ಗಾಂವಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಾವೇರಿ ಎಸ್ಪಿ ಅಂಶುಕುಮಾರ್, ಶ್ವಾನದಳ, ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ.

Exit mobile version