ರೂಪೇಶ್ ರಾಜಣ್ಣ ಬಂಧನ: ಜಮೀರ್ ಆಪ್ತ ಸರ್ಫರಾಜ್‌ನ ಗಂಭೀರ ಆರೋಪ ಏನು..?

Web (66)

ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಮಾಡಿದ ಗಂಭೀರ ಬ್ಲ್ಯಾಕ್‌ಮೇಲ್ ಆರೋಪದಿಂದ ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ತಿರುಗಿದೆ. ಈ ಆರೋಪಕ್ಕೆ ದಾಖಲೆ ಸಮೇತ ಸ್ಪಷ್ಟನೆ ಕೇಳಲು ಸಚಿವ ಜಮೀರ್ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ ರೂಪೇಶ್ ರಾಜಣ್ಣ ಮತ್ತು ಅವರ ಬೆಂಬಲಿಗರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಚಿವರ ನಿವಾಸದ ಮುಂದೆ ನಡೆದ ಹೈಡ್ರಾಮಾ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಅಕ್ರಮ ರೆಸಾರ್ಟ್ ನಿರ್ಮಾಣದ ಆರೋಪ ಕೇಳಿಬಂದಿತ್ತು. ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸರ್ಫರಾಜ್, “2006ರಲ್ಲಿ ಈ ಜಮೀನನ್ನು ಖರೀದಿಸಿದ್ದೇನೆ. ಫಾರ್ಮ್‌ಹೌಸ್ ನಿರ್ಮಾಣಕ್ಕೆ ಅಗತ್ಯ ಅನುಮತಿಗಳನ್ನು ಪಡೆದಿದ್ದೇನೆ. ಕಂದಾಯ, ಪಂಚಾಯತ್ ಅನುಮತಿ, ಮತ್ತು ಪೊಲೀಸ್ ಇಲಾಖೆಯಿಂದ ಎನ್‌ಓಸಿ ಪಡೆದಿದ್ದೇನೆ. ಎಲ್ಲವೂ ಕಾನೂನುಬದ್ಧವಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಕೆಲವರು ತನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT
ADVERTISEMENT

ಈ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ರೂಪೇಶ್ ರಾಜಣ್ಣ ಜಮೀರ್ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿ, “ಸರ್ಫರಾಜ್ ಖಾನ್ ಸುಳ್ಳು ಆರೋಪ ಮಾಡಿದ್ದಾರೆ. ಸತ್ಯವನ್ನು ದಾಖಲೆ ಸಮೇತ ನಿರೂಪಿಸಲಿ. ನಾನು ಹಿಂದೆ ಸರಿಯುವುದಿಲ್ಲ,” ಎಂದು ಘೋಷಿಸಿದರು. ಅವರು ಸಾಮಾಜಿಕ ಜಾಲತಾಣದಲ್ಲಿ ಸರ್ಫರಾಜ್‌ಗೆ ಸವಾಲು ಹಾಕಿದ್ದು, “ನನ್ನ ಸಂಖ್ಯೆಯನ್ನು ಬ್ಲಾಕ್‌ನಿಂದ ತೆಗೆದು, ದಾಖಲೆ ಸಮೇತ ಸತ್ಯ ನಿರೂಪಿಸಿ. ನಾನು ಸಿದ್ಧವಾಗಿದ್ದೇನೆ,” ಎಂದು ತಿಳಿಸಿದ್ದಾರೆ.

ರೂಪೇಶ್ ರಾಜಣ್ಣ ಮತ್ತು ಅವರ ಬೆಂಬಲಿಗರು ಸಚಿವ ಜಮೀರ್ ಅವರ ಸವೆನ್ ಮಿನಿಸ್ಟರ್ ಕ್ವಾಟ್ರಸ್‌ನಲ್ಲಿರುವ ಸರ್ಕಾರಿ ನಿವಾಸಕ್ಕೆ ಆಗಮಿಸಿದಾಗ, ಪೊಲೀಸರು ಭದ್ರತೆಗಾಗಿ ತೆರಳಿದ್ದರು. ಈ ವೇಳೆ ರೂಪೇಶ್ ರಾಜಣ್ಣ, “ಹೇಡಿಗಳಂತೆ ಪೊಲೀಸರನ್ನು ಮುಂದಿಟ್ಟು ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ,” ಎಂದು ಕಿಡಿಕಾರಿದರು. ಆದರೆ, ಪೊಲೀಸರು ರೂಪೇಶ್ ರಾಜಣ್ಣ ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದುಕೊಂಡರು. ಈ ಘಟನೆಯಿಂದ ಸಚಿವರ ನಿವಾಸದ ಮುಂದೆ ತೀವ್ರ ಗೊಂದಲದ ವಾತಾವರಣ ಸೃಷ್ಟಿಯಾಯಿತು.

Exit mobile version