ರಾಯಚೂರಿನಲ್ಲಿ ಭೀಕರ ಘಟನೆ: ಗರ್ಭಿಣಿ ಸೊಸೆ ಕತ್ತು ಸೀಳಿ ಕೊಂದ ಮಾವ

BeFunky collage (97)

ರಾಯಚೂರು ಜಿಲ್ಲೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಭಯಾನಕ ಕೊಲೆಗಳು ಜನರನ್ನು ನಡುಗಿಸಿವೆ. ಒಂದೆಡೆ ನಾಲ್ಕು ತಿಂಗಳ ಗರ್ಭಿಣಿ ಸೊಸೆಯನ್ನು ಮಾವನೇ ಕತ್ತು ಸೀಳಿ ಕೊಂದ ಘಟನೆ ನಡೆದಿದೆ. ಮತ್ತೊಂದೆಡೆ ಹೆತ್ತ ತಾಯಿಯನ್ನೇ ಮಗ ಕಲ್ಲು ಹಾಕಿ ಹತ್ಯೆ ಮಾಡಿದ್ದಾನೆ. ಎರಡೂ ಘಟನೆಗಳಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗರ್ಭಿಣಿ ಸೊಸೆ ಕೊಲೆ: ಮಾವನ ಕ್ರೌರ್ಯ
ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾವ ಸಿದ್ದಪ್ಪ ಅವರು ನಾಲ್ಕು ತಿಂಗಳ ಗರ್ಭಿಣಿ ಸೊಸೆ ರೇಖಾ (25) ಅವರ ಕುತ್ತಿಗೆಗೆ ಚಾಕುವಿಂದ ಇರಿದಿದ್ದಾರೆ. ಗಾಯಗೊಂಡ ರೇಖಾ ಮನೆಯಿಂದ ಹೊರಬಂದು ನರಳಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಕೃತ್ಯ ನಡೆಸಿದ ಮಾವ ಸಿದ್ದಪ್ಪ ಪರಾರಿಯಾಗಿದ್ದರೂ, ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ತಾಯಿಯನ್ನೇ ಕಲ್ಲು ಹಾಕಿ ಕೊಂದ ಮಗ
ಲಿಂಗಸುಗೂರು ತಾಲೂಕಿನ ಜಕ್ಕೇರು ತಾಂಡಾದಲ್ಲಿ ಮಗ ಕುಮಾರ್ ಅವರು ತನ್ನ ತಾಯಿ ಚಂದವ್ವ (45) ಅವರನ್ನು ಕೊಲೆ ಮಾಡಿದ್ದಾನೆ. ಚಂದವ್ವಗೆ ಆರು ಮಕ್ಕಳಿದ್ದು, ನಾಲ್ಕು ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಕುಮಾರ್ ಬೆಂಗಳೂರಿನಲ್ಲಿ ಹೆಂಡತಿ-ಮಕ್ಕಳ ಜೊತೆ ವಾಸವಿದ್ದ. ಇತ್ತೀಚೆಗೆ ಊರಿಗೆ ಬಂದ ಅವನು ತಾಯಿಯ ಜೊತೆ ಗಲಾಟೆ ಮಾಡಿ, ಕೂದಲು ಹಿಡಿದು ಎಳೆದು ಮನೆ ಪಕ್ಕದ ಸೇವಾಲಾಲ್ ಭವನದ ಕಟ್ಟಡ ಮೇಲೆ ಬಿಸಾಡಿದ್ದಾನೆ. ನಂತರ ತಲೆಗೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಮುದಗಲ್ ಪೊಲೀಸರು ಆರೋಪಿ ಕುಮಾರ್ ಅನ್ನು ಬಂಧಿಸಿದ್ದಾರೆ.

ಈ ಎರಡೂ ಘಟನೆಗಳು ಕೌಟುಂಬಿಕ ಕಲಹಗಳು ಹೇಗೆ ಭಯಾನಕ ಕೊಲೆಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ದುರಂತ ಸಾಕ್ಷಿಯಾಗಿವೆ. ಪೊಲೀಸರು ಎರಡೂ ಪ್ರಕರಣಗಳ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Exit mobile version