ಆಕ್ಸಿಜನ್ ಸಪೋರ್ಟ್​ನಲ್ಲಿ ಭರತ್ ತಾಯಿ, ಮಗನ ಸಾವಿನ ಬಗ್ಗೆ ತಾಯಿಗೆ ಇನ್ನೂ ಗೊತ್ತಿಲ್ಲ!

Film 2025 04 23t113506.962

ಕಾಶ್ಮೀರದ ಪಹಲ್ಗಾಮ್‌ನ ಬೈಸರಾನ್ ವ್ಯಾಲಿಯಲ್ಲಿ ಏಪ್ರಿಲ್ 22, 2025ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಬೆಂಗಳೂರಿನ 41 ವರ್ಷದ ಭರತ್ ಭೂಷಣ್ ದುರಂತವಾಗಿ ಮೃತಪಟ್ಟಿದ್ದಾರೆ. ಕುಟುಂಬದೊಂದಿಗೆ ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದ ಭರತ್, ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಭರತ್‌ನ ಪತ್ನಿ ಸುಜಾತಾ (37) ಮತ್ತು ಮೂರು ವರ್ಷದ ಮಗು ಈ ದಾಳಿಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭರತ್ ಭೂಷಣ್ ಬೆಂಗಳೂರಿನ ಜಾಲಹಳ್ಳಿಯ ಸುಂದರ್‌ನಗರದ ನಿವಾಸಿಯಾಗಿದ್ದು, ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದ ಭರತ್, ಪ್ರಸ್ತುತ ಬೆಂಗಳೂರಿನಲ್ಲಿ ಡಯಾಗ್ನೋಸ್ಟಿಕ್ ಸೆಂಟರ್ ನಡೆಸುತ್ತಿದ್ದರು. ಏಪ್ರಿಲ್ 18ರಂದು ಕುಟುಂಬದೊಂದಿಗೆ ಟೂರ್ ಆಪರೇಟರ್ ಮೂಲಕ ಕಾಶ್ಮೀರಕ್ಕೆ ತೆರಳಿದ್ದರು. ಆದರೆ, ಈ ಪ್ರವಾಸವು ದುರಂತವಾಗಿ ಅಂತ್ಯಗೊಂಡಿದೆ.

ಭರತ್ ಭೂಷಣ್‌ನ ಕುಟುಂಬದ ಆಪ್ತರಾದ ನಿವೃತ್ತ ಪ್ರೊಫೆಸರ್ ನಾಗರಾಜ್, ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭೂಷಣ್ ನಮ್ಮ ಹುಡುಗ, ಎಲ್ಲರ ಜೊತೆ ಸ್ನೇಹದಿಂದ ಮಾತಾಡಿ, ಖುಷಿಯಾಗಿ ಬೆಳೆದಿದ್ದ. ಇನ್ನಷ್ಟು ಸಾಧನೆ ಮಾಡಬೇಕಿದ್ದವನಿಗೆ ದುರಂತ ಅಂತ್ಯವಾಗಿದೆ. ಉಗ್ರರು ‘ಹಿಂದೂ’ ಎಂದು ಕೇಳಿ ಗುಂಡು ಹಾರಿಸಿದ್ದಾರೆ. ಇದಕ್ಕೆ ಸರ್ಕಾರದ ಓಲೈಕೆ ನೀತಿಯೇ ಕಾರಣ. ಸರ್ಕಾರಕ್ಕೆ ಆಗದ ಕೆಲಸವನ್ನು ಯುವಕರೇ ಮಾಡಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದುರ್ಘಟನೆಯ ಬಗ್ಗೆ ಟಿವಿ ಮೂಲಕ ತಿಳಿದಾಗ ಕುಟುಂಬಕ್ಕೆ ನಂಬಲಾಗದ ಆಘಾತವಾಯಿತು. ಭರತ್‌ನ ಸಹೋದರ ಪ್ರೀತಂ ಕಾಶ್ಮೀರಕ್ಕೆ ತೆರಳಿ, ಸ್ಥಳೀಯ ಆಡಳಿತದಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಭರತ್‌ನ ತಂದೆಗೆ ಈ ದುಃಖದ ಸುದ್ದಿ ತಿಳಿದಿದ್ದು, ಆಕ್ಸಿಜನ್ ಸಪೋರ್ಟ್‌ನಲ್ಲಿರುವ ತಾಯಿಗೆ ಈ ವಿಷಯ ಇನ್ನೂ ಗೊತ್ತಿಲ್ಲ. “ಹಿಂದೂ ಆಗಿದ್ದೇ ತಪ್ಪಾ?” ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಹೇಳಿದ್ದಾರೆ.

Exit mobile version