ನೆಲಮಂಗಲದಲ್ಲಿ ಗ್ಯಾಸ್ ಲೀಕ್ ದುರಂತ: ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ

Film 2025 05 01t130740.650

ವರದಿ: ಮೂರ್ತಿ ಬೀರಯ್ಯನಪಾಳ್ಯ, ನೆಲಮಂಗಲ

ಏಪ್ರಿಲ್ 28ರಂದು ಬೆಳಿಗ್ಗೆ ಬೆಂಗಳೂರಿನ ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಗ್ಯಾಸ್‌ ಸೋರಿಕೆಯಿಂದ ಭೀಕರ ಅಗ್ನಿ ಅವಘಡ ಸಂಭವಿಸಿದ್ದು,ಇಂದು ಚಿಕಿತ್ಸಾ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿ ಇನ್ನೂ ಚಿಕಿತ್ಸೆ ಮುಂದುವರಿದೆ.

ಅಡಕಮಾರನಹಳ್ಳಿಯ ಗಂಗಯ್ಯ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಈ ಮನೆಯಲ್ಲಿ ಬಳ್ಳಾರಿ ಮೂಲದ ನಾಗರಾಜ್ (50) ಕುಟುಂಬದೊಂದಿಗೆ ಎರಡು ವರ್ಷಗಳಿಂದ ಬಾಡಿಗೆಗೆ ವಾಸವಾಗಿದ್ದರು. 28ರಂದು ಬೆಳ್ಳಂ ಬೆಳಗ್ಗೆ ಕೆಲಸಕ್ಕೆ ತೆರಳುವ ವೇಳೆ ನಾಗರಾಜ್‌ ದೇವರಿಗೆ ದೀಪ ಹಚ್ಚುತ್ತಿದ್ದರು. ಅವರ ಎರಡನೇ ಪುತ್ರ ಅಭಿಷೇಕ್ (18) ಖಾಲಿಯಾದ ಸಿಲಿಂಡರ್ ಬದಲಾಯಿಸುತ್ತಿದ್ದ. ಈ ಸಂದರ್ಭದಲ್ಲಿ ವಾಷರ್ ಇಲ್ಲದೇ ಇದ್ದರಿಂದ ಫಿಟ್ ಮಾಡುತ್ತಿರುವಾಗ ಗ್ಯಾಸ್‌ ಪದೇ ಲೀಕ್ ಆಗಿದ್ದು, ದೀಪದ ಬೆಂಕಿಗೆ ತಗುಲಿದ ಪರಿಣಾಮ ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಯಿತು.

ಈ ಅಗ್ನಿಯಲ್ಲಿ ನಾಗರಾಜ್, ಅವರ ಪತ್ನಿ ಲಕ್ಷ್ಮೀದೇವಿ ಪುತ್ರರು ಬಸವನಗೌಡ ಮತ್ತು ಅಭಿಷೇಕ್ ಗಾಯಗೊಂಡು. ನೆರವಿಗೆ ಬಂದಿದ್ದ ಪಕ್ಕದ ಮನೆಯ ಶ್ರೀನಿವಾಸ್ (50) ಮತ್ತು ಮನೆ ಮಾಲೀಕನ ಮಗ ಶಿವಶಂಕರ್ ಬೆಂಕಿಗೆ ತುತ್ತಾದರು. ಸ್ಥಳೀಯರ ಸಹಾಯದಿಂದ ಎಲ್ಲರನ್ನೂ ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರವಾಗಿ ಸುಟ್ಟಿದ್ದ ನಾಗರಾಜ್ ಹಾಗೂ ಶ್ರೀನಿವಾಸ್ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು.

ಇದೀಗ ಲಕ್ಷ್ಮೀದೇವಿ, ಬಸವನಗೌಡ, ಅಭಿಷೇಕ್ ಮತ್ತು ಶಿವಶಂಕರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗ ಅಭಿಷೇಕ್‌ನ ಸ್ಥಿತಿ ಗಂಭೀರವಾಗಿದೆ.

ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

| Reported by: ಮೂರ್ತಿ. ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ
Exit mobile version