ಕಂದಾಯ ಇಲಾಖೆ ಎಲ್ಲಾ ನೌಕರರ ಸಹಕಾರದಿಂದ ಜನಪರವಾಗುತ್ತಿದೆ, ಪರಿವರ್ತನೆಯ ಹಾದಿಯಲ್ಲಿದೆ ಹಾಗೂ ಹೊಸ ಆಧುನಿಕ ತಂತ್ರಜ್ಞಾನಕ್ಕೂ ಒಗ್ಗಿಕೊಳ್ಳುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, “ಸರ್ವೇ ಇಲಾಖೆ ಇಡೀ ಸರ್ಕಾರಕ್ಕೆ ಮೂಲ ಇಲಾಖೆ. ಯಾವುದೇ ಭೂಮಿಗೆ ದಾಖಲೆಗಳ ಮೂಲಕ ಅಸ್ಥಿತ್ವ ಕಲ್ಪಿಸುವ ಮಹತ್ವದ ಕಾರ್ಯ ಸರ್ವೇ ಇಲಾಖೆಯದ್ದು. ಹೀಗಾಗಿ ಈ ಇಲಾಖೆಯನ್ನು ನೌಕರರ ಸಹಕಾರದಿಂದ ಹೊಸ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವಂತೆ ಮಾಡಲಾಗಿದೆ. ಆ ಮೂಲಕ ಇಲಾಖೆಯನ್ನು ಮತ್ತಷ್ಟು ಜನಪರಗೊಳಿಸುವ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಲಾಗುತ್ತಿದೆ” ಎಂದರು.
• ಸರ್ವೇ ಕೆಲಸಗಳಿಗೆ ರೋವರ್ ತಂತ್ರಜ್ಞಾನ
• ಎಂಟೇ ದಿನಕ್ಕೆ ಹದ್ದುಬಸ್ತು
• ದುರಸ್ಥಿ ಕೆಲಸಕ್ಕೆ ಹೆಚ್ಚಿನ ಒತ್ತು
• ಪೋಡಿ ಮುಕ್ತ ಗ್ರಾಮಗಳ ಸವಾಲು
• ಹೊಸ ನೇಮಕಾತಿಗೆ ಸಿಎಂ ಅಸ್ತು
ಮುಂದುವರೆದು, “ಹತ್ತಾರು ವರ್ಷಗಳಿಂದ ಬಾಕಿ ಇದ್ದ ರೈತರ ಕೆಲಸಗಳನ್ನು ಕಳೆದ ಎರಡು ವರ್ಷಗಳಲ್ಲಿ ಅಭಿಯಾನದ ಮಾದರಿಯಲ್ಲಿ ನಡೆಸಲಾಗುತ್ತಿದೆ. ಗ್ರಾಮಠಾಣಾ ಹಾಗೂ ನಗರ ಪ್ರದೇಶಗಳಲ್ಲಿ ಜನ ನೆಮ್ಮದಿಯಿಂದ ಜೀವಿಸಲು ಆಸ್ತಿಯ ನಕ್ಷೆ ಅವಶ್ಯ ಎಂದು ಅರ್ಥ ಮಾಡಿಕೊಂಡು ಸ್ವಾಮಿತ್ವ ಯೋಜನೆಯ ಅಡಿ ಗ್ರಾಮಠಾಣಾಗಳನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಸರ್ವೇ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಜೊತೆಗೆ ನಗರ ಆಸ್ತಿ ಮಾಲಿಕತ್ವವನ್ನೂ ನೀಡಲಾಗುತ್ತಿದೆ. ಇದೇ ಮಾದರಿಯನ್ನು ಅನುಕರಿಸಿ ಕೇಂದ್ರ ಸರ್ಕಾರ ದೇಶಾದ್ಯಂತ “ನಕ್ಷಾ” ಕಾರ್ಯಕ್ರಮ ನಡೆಸುತ್ತಿದೆ.
ನಮ್ಮ ರಾಜ್ಯದಲ್ಲೂ 10 ಗ್ರಾಮ ಪಂಚಾಯತ್ ಹಾಗೂ ನಗರ ಸಭೆ ಆಯ್ಕೆ ಮಾಡಿಕೊಂಡು ಕಳೆದ ಮೂರು ತಿಂಗಳಿಂದ ಗ್ರಾಮೀಣ-ನಗರ ಪ್ರದೆಶಗಳಲ್ಲಿ ವಸತಿ ನಿವೇಶನಗಳಿಗೆ ಆಸ್ತಿ ಪ್ರಮಾಣ ಪತ್ರ ನೀಡುತ್ತಿದೆ. ಆದರೆ, ಈ ಮಹತ್ವಾಕಾಂಕ್ಷೆಯ ಕೆಲಸಕ್ಕೆ ಬುನಾದಿ ಹಾಕಿದ್ದು ಕರ್ನಾಟಕ ಎಂದು” ಹರ್ಷ ವ್ಯಕ್ತಪಡಿಸಿದರು.
ಸರ್ವೇ ಕೆಲಸಗಳಿಗೆ ರೋವರ್ ತಂತ್ರಜ್ಞಾನ:
ಆಧುನಿಕ ಕಂಪ್ಯೂಟರ್ ಜಗತ್ತಿನಲ್ಲೂ ಸಹ ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಜನರ ಮೇಲೆ ಹೊರೆ ಹಾಕುವುದು ಅಮಾನವೀಯ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡವಳಿಕೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯ ಪಟ್ಟರು.
“ಸರ್ವೇ ಕೆಲಸವನ್ನು 1802 ರಿಂದಲೂ ಚೈನ್ ಹಿಡಿದೇ ಭೂಮಿಯನ್ನು ಅಳೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಬಿಸಿಲಿನಲ್ಲಿ ಸರ್ವೇಯರ್ ಜೊತೆಗೆ ಇಬ್ಬರು ಸಹಾಯಕರೂ ಕೆಲಸ ಮಾಡಬೇಕಿತ್ತು. ಸರ್ವೇ ಮಾಡಲು ಕನಿಷ್ಟ 70 ನಿಮಿಷ ಅದನ್ನು ನಕ್ಷೆ ಮಾಡಲು 3 ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಈ ಕೆಲಸವನ್ನು ಕೇವಲ 10 ನಿಮಿಷದಲ್ಲಿ ಮುಗಿಸಲಿದೆ” ಎಂದು ಮಾಹಿತಿ ನೀಡಿದರು.
ಕಳೆದ 200 ವರ್ಷದಲ್ಲಿ ಪ್ರಪಂಚ ಇಷ್ಟು ಬದಲಾದರೂ ನಮ್ಮ ವಿಧಿ-ವಿಧಾನ ಹಾಗೆ ಇದೆ. ಪ್ರಪಂಚದ ಮುಖ ಅಂತರಾಳ ಬದಲಾದರೂ, ಇಲಾಖೆ ಕೆಲಸ ಮಾಡುವ ರೀತಿ ನೀತಿ ಮಾತ್ರ ಬದಲಾಗಿಲ್ಲ. ಆದರೆ, ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಕೆಲಸ ಮಾಡೋಕೆ ಜನ ಇದ್ದಾರೆ ಎಂದು ಉಡಾಫೆಯಿಂದ ನೌಕರರ ಮೇಲೆ ಹೊರೆ ಹಾಕುವುದು ಅಮಾನವೀಯ . ಅಲ್ಲದೆ, ಚೈನ್ ಸರ್ವೇ ಕೆಲಸದಲ್ಲಿ ಕೆಲವರು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಸರ್ವೇಯಲ್ಲಿ ಬದಲಾವಣೆ ಮಾಡಬಹುದು.
ಇದರಿಂದ ಹಲವರು ಇಂದಿಗೂ ಕೋರ್ಟ್ ಕಚೇರಿಗೆ ಅಲೆಯುವಂತಾಗಿದೆ. ಆದರೆ, ರೋವರ್ ಸರ್ವೇಯಲ್ಲಿ ಇಂತಹ ಅಕ್ರಮಗಳಿಗೆ ಆಸ್ಪದ ಇರುವುದಿಲ್ಲ. ಹೀಗಾಗಿ ಇಲಾಖೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ತ್ವರಿತ ಸರ್ವೇ ಮಾಡಿಕೊಡುವುದು ಹಾಗೂ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಮಾಡುವುದು” ಎಂದರು.
“ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆಯೇ 775 ರೋವರ್ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರು. ಪ್ರಸ್ತುತ 5 ಸಾವಿರ ರೋವರ್ ಖರೀದಿಗೆ ಅನುಮತಿ ನೀಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಭೂ ಮಾಪಕರಿಗೂ ಒಂದು ರೋವರ್ ನೀಡುವುದು ಹಾಗೂ ಸರ್ವೇ ನಕ್ಷೆ ನೂರಕ್ಕೆ ನೂರು ಗಣಕೀರಣಗೊಳಿಸುವುದು ನಮ್ಮ ಗುರಿ” ಎಂದು ತಿಳಿಸಿದರು.
ಎಂಟೇ ದಿನಕ್ಕೆ ಹದ್ದುಬಸ್ತು:
11 ಇ ಸ್ಕೆಚ್ ಜೀಮೀನಿನ ಹದ್ದುಬಸ್ತು, ತತ್ಕಾಲ್ ಪೋಡಿ, ಇ ಸ್ವತ್ತು, ಸ್ವಾವಲಂಭಿ, ಭೂ ಮಂಜೂರಿ ಪ್ರಕರಣಗಳ ಸರ್ವೇ, ಕೆರೆ ಬಂಡಿದಾರಿ ಸರ್ವೇ, ಭೂ ಪರಿವರ್ತನೆ ಸರ್ವೇ, ಕಂದಾಯ ಅರಣ್ಯ ಗಡಿ ನಿಗದಿಗೊಳಿಸುವ ಜಂಟಿ ಸರ್ವೇ, ಇವು ನಮ್ಮ ಇಲಾಖೆಯ ಪ್ರಮುಖ ಕೆಲಸ. ಕಳೆದ 23 ತಿಂಗಳಲ್ಲಿ ಈವರೆಗೆ 26 ಲಕ್ಷ ಸರ್ವೇ ಪ್ರಕರಣಗಳನ್ನು ಜನತೆಗೆ ಮಾಡಿಕೊಟ್ಟಿದ್ದೇವೆ. ಒಂದು ದಿನಕ್ಕೆ ಸರಾಸರಿ 5 ರಿಂದ 6 ಸಾವಿರ ಪ್ರಕರಣಗಳ್ನು ಸರ್ವೇ ಮಾಡಿಕೊಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ನಮ್ಮ ಸರ್ಕಾರ ಬರುವ ಮೊದಲು ಹದ್ದುಬಸ್ತಿಗೆ ಸರಾಸರಿ ಒಂದು ಅರ್ಜಿ ಕೊಟ್ರೆ ಸುಮಾರು 3 ರಿಂದ 6 ತಿಂಗಳಾಗುತ್ತಿತ್ತು. ಆದರೆ ಈಗ ಗರಿಷ್ಟ 8 ದಿನದಲ್ಲಿ ನಮ್ಮ ಸರ್ಕಾರದಲ್ಲಿ ಹದ್ದುಬಸ್ತು ಮಾಡಿಕೊಡುತ್ತಿದ್ದೇವೆ. ಹಾವೇರಿಯಲ್ಲಿ ಒಂದು ಹದ್ದುಬಸ್ತು ಸರ್ವೇಗೆ 2 ವರ್ಷ ಆದರೂ ಆಗಿಲ್ಲ ಎಂದು ಶಾಸಕರೇ ನನ್ನನ್ನು ಪ್ರಶ್ನೆ ಮಾಡಿದ್ರು. ಈ ಬಗ್ಗೆ ನಾನು ವಿಚಾರಿಸಿದಾಗ ಆ ದೂರು ನಿಜವಾಗಿತ್ತು. ನಮ್ಮ ಹಿಂದಿನ ಸಿಎಂ ಹಾವೇರಿ ಜಿಲ್ಲೆಯವರೇ ಆಗಿದ್ದರು. ನಾನು ಇಂದಿನ ಡೇಟಾ ಪ್ರಕಾರ ಹೇಳುವುದಾದರೆ, 8 ದಿನಕ್ಕೆ ಹದ್ದುಬಸ್ತು ಮತ್ತು ಕೇವಲ ಮೂರು ದಿನಕ್ಕೆ 11ಇ ಸ್ಕೆಚ್ ಮಾಡಿಕೊಡುತ್ತಿದ್ದೇವೆ. ಈ ಮೊದಲು ತಿಂಗಳಾನುಗಟ್ಟಲೆ ಕಾಯಬೇಕಾದ್ದ ಪರಿಸ್ಥಿತಿಯನ್ನು ಬದಲಿಸಿದ್ದೇವೆ ಎಂದರು.
ದುರಸ್ಥಿ ಕೆಲಸಕ್ಕೆ ಹೆಚ್ಚಿನ ಒತ್ತು:
ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದೆ. ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ, ಅಂತಹ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲ್ಲೂಕು ಕಛೇರಿ, ಸರ್ವೆ ಕಛೇರಿಗಳಿಗೆ ಅಲೆದು ಅಲೆದು ಪ್ರಯೋಜನವಾಗದೆ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಸಮಸ್ಯೆಯನ್ನು ಪರಿಹರಿಸಲು, ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಸೂಚಿಸಿದ ಹಿನ್ನೆಲೆಯಲ್ಲಿ, ಇಲಾಖೆ ಈ ಕೆಲಸವನ್ನು ಗಂಭೀರವಾಗಿ ಪರಿಗಣಿಸಿತ್ತು. ಪರಿಣಾಮ ಸರಳೀಕೃತ ದುರಸ್ಥಿ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈಗ ಇಲಾಖೆಯ ನೌಕರರ ಸಹಾಯದಿಂದ ಎಲ್ಲವನ್ನೂ ಆನ್ಲೈನ್ ಮೂಲಕವೇ ಮಾಡಲಾಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ 20 ಸಾವಿರ ರೈತರಿಗೆ ದುರಸ್ಥಿ ಮಾಡಿಕೊಟ್ಟಿದ್ದೇವೆ. ಅಲ್ಲದೆ, ಒಂದು ರೂಪಾಯಿಯೂ ಲಂಚವಿಲ್ಲದೆ ಪಾರದರ್ಶಕವಾಗಿ ಈ ಕೆಲಸವನ್ನು ಮಾಡಲಾಗುತ್ತಿದೆ ಎಂಬುದು ಗಮನಾರ್ಹ ಎಂದರು.
ಪೋಡಿ ಮುಕ್ತ ಗ್ರಾಮಗಳ ಸವಾಲು:
ಹತ್ತಾರು ವರ್ಷದಿಂದ ಪೋಡಿ ಆಗದ ಖಾಸಗಿ ಜಮೀನಿಗೆ ಪೋಡಿ ಮುಕ್ತ ಅಭಿಯಾನ ನಡೆಸಬೇಕು ಎಂದು ಸಿದ್ದರಾಮಯ್ಯನವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಕೆಲಸ ಆರಂಭಿಸಿದ್ದರು. ಆಗಲೇ ರಾಜ್ಯದ 30 ಸಾವಿರ ಗ್ರಾಮಗಳ ಪೈಕಿ 16630 ಗ್ರಾಮಗಳನ್ನು ಪೋಡಿ ಮಾಡಲಾಗಿತ್ತು. ಆದರೆ, ಕಳೆದ ನಾಲ್ಕು ವರ್ಷ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 2 ಸಾವಿರ ಗ್ರಾಮಗಳಲ್ಲಿ ಮಾತ್ರ ಪೋಡಿ ಮಾಡಲಾಗಿದೆ. ಆದರೆ, ಪ್ರಸ್ತುತ 23 ತಿಂಗಳಲ್ಲಿ 2079 ಗ್ರಾಮಗಳನ್ನು ಈಗಾಗಲೇ ಪೋಡಿ ಮುಕ್ತ ಮಾಡಲಾಗಿದೆ. ಅಲ್ಲದೆ, ಉಳಿದ ಗ್ರಾಮಗಳನ್ನು ಮುಂದಿನ ಒಂದು ವರ್ಷದಲ್ಲಿ ಪೋಡಿ ಮುಕ್ತ ಮಾಡುವ ಸವಾಲನ್ನು ತೆಗೆದುಕೊಳ್ಳಲಾಗಿದೆ ಎಂದರು.
ಹೊಸ ನೇಮಕಾತಿಗೆ ಸಿಎಂ ಅಸ್ತು:
ಮಾನವ ಸಂಪನ್ಮೂಲ ಇಲ್ಲದೆ ಜನಪರ ಕೆಲಸ ಸಾಧ್ಯವಿಲ್ಲ. ಹೀಗಾಗಿ ಇಲಾಖೆಗೆ ಮತ್ತಷ್ಟ ಬಲ ತುಂಬಲು ಖಾಲಿ ಇರುವ ಎಲ್ಲಾ ಸ್ಥಾನಗಳನ್ನು ಭರ್ತಿಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದು, ಈ ನಿರ್ಧಾರ ಇಲಾಖೆಯನ್ನು ಮತ್ತಷ್ಟು ಜನಪರವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯ ಪಟ್ಟರು.
ಸಿದ್ದರಾಮಯ್ಯನವರು ಕಳೆದ ವರ್ಷವೇ 750 ಜನ ಸರ್ಕಾರಿ ಸರ್ವೇಯರ್ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದರು. ಹುದ್ದೆ ಭರ್ತಿಗೆ ಈಗಾಗಲೇ ಕೆಪಿಎಸ್ಸಿ ಪರೀಕ್ಷೆ ಮುಗಿಸಿ ಅಂತಿಮ ಪರೀಕ್ಷೆ ಮುಂದಿನ ಮೇ 10-11ಕ್ಕೆ ನಿಗದಿಯಾಗಿದೆ. ಸಂದರ್ಶನ ಇಲ್ಲದೆ ಮೆರಿಟ್ ಆಧಾರದಲ್ಲಿ ನೇಮಕಾತಿ ನಡೆಯಲಿದ್ದು, ಒಂದು ರೂಪಾಯಿಯೂ ಲಂಚಕ್ಕೆ ಆಸ್ಪದವಿಲ್ಲ. ಅಲ್ಲದೆ, ಖಾಲಿ ಇರುವ 39 ಎಡಿಎಲ್ಆರ್ ಸ್ಥಾನಗಳನ್ನೂ ತುಂಬಲು ಒಪ್ಪಿಗೆ ದೊರೆತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, “ ಕಂದಾಯ ಇಲಾಖೆ ಸರ್ಕಾರದ ಮಾತೃ ಇಲಾಖೆ. ಈ ಇಲಾಖೆ ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ರೈತ ಸಮುದಾಯ ನೆಮ್ಮದಿಯಾಗಿರುತ್ತದೆ. ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಕೆಲಸಗಳಾಗುತ್ತಿವೆ” ಎಂದು ಮೆಚ್ಚುಗೆ ಸೂಚಿಸಿದರು.
ಮುಂದುವರೆದು, “ಕೃಷ್ಣಬೈರೇಗೌಡರು ಇಲಾಖೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡು, ನಾಲಗೆ ತುದಿಯಲ್ಲಿ ಅಂಕಿ ಅಂಶ ಇಟ್ಟುಕೊಂಡಿರುವ ಸಮರ್ಥ ಮಂತ್ರಿ. ಕೇವಲ ಮಂತ್ರಿ ಆದರೆ ಸಾಲದು. ಪರಿಣತಿ, ಕಾಳಜಿ ಇರಬೇಕು. ಇವೆರಡೂ ಕೃಷ್ಣಬೈರೇಗೌಡ ಅವರಲ್ಲಿದೆ” ಎಂದು ಪ್ರಶಂಶೆ ವ್ಯಕ್ತಪಡಿಸಿದರು.
“ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿ ಕಂದಾಯ ಇಲಾಖೆಯ, ನೌಕರರ ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಪೂರ್ತಿ ಸಮಸ್ಯೆ ಬಗೆಹರಿದಿಲ್ಲ ಎನ್ನುವ ಬೇಸರ ನನಗೂ ಇದೆ. ತಹಶೀಲ್ದಾರ್, ಎಸಿ ಕಚೇರಿಗಳಲ್ಲಿ ಸುಗಮವಾಗಿ, ಪ್ರಾಮಾಣಿಕವಾಗಿ ಕೆಲಸಗಳು ಆದರೆ ನಾಡಿನ ಜನತೆ, ರೈತ ಸಮುದಾಯ ಅತ್ಯಂತ ನೆಮ್ಮದಿಯಾಗಿರುತ್ತದೆ” ಎಂದು ಅಭಿಪ್ರಾಯಪಟ್ಟರು.
ಶಾಸಕ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54
