ಇಂದು ಬಹು ನಿರೀಕ್ಷಿತ ಜಾತಿ ಗಣತಿ ನಿರ್ಧಾರ: 2015ರ ಕಾಂತರಾಜು ವರದಿಯಲ್ಲಿ ಏನಿದೆ?

Siddu stalin kcr (83)

ಕೊನೆಗೂ ರಾಜ್ಯ ಸರ್ಕಾರ ಜಾತಿ ಗಣತಿಗೆ ಮುಹೂರ್ತವಿಟ್ಟಿದ್ದು, ಇಂದು(ಏಪ್ರಿಲ್ 11) ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲು ನಿರ್ಧರಿಸಲಾಗಿದೆ.

ಕ್ಯಾಬಿನೆಟ್ ಅಜೆಂಡಾದ ಕ್ರಮ ಸಂಖ್ಯೆ 16 ರಲ್ಲಿ ವಿಷಯವನ್ನು ಸೇರ್ಪಡೆ ಮಾಡಲಾಗಿದ್ದು, ಕಾಂತರಾಜ್ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ನಡೆಸಲಾದ 2015 ರ ಸಾಮಾಜಿಕ- ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ವರದಿ ಇದಾಗಿದ್ದು, ಸಂಪುಟದ ತೀರ್ಮಾನ ಕುರಿತು ತೀವ್ರ ಕುತೂಹಲ ಮೂಡಿಸಿದೆ.

ADVERTISEMENT
ADVERTISEMENT

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2015ರ (ಜಾತಿ ಜನಗಣತಿ) ದತ್ತಾಂಶಗಳ ಅಧ್ಯಯನ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗವು  2024ರ ಫೆ. 29ರಂದು ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಬರೋಬ್ಬರಿ 169 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿದ್ದಾರೆ.

ಪ್ರಸ್ತಾವದಲ್ಲಿ ಏನಿದೆ?

ಜಸ್ಟೀಸ್ ಎಚ್. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು 2015ರ ಏಪ್ರಿಲ್‌ 11ರಿಂದ ಮೇ 30ರವರೆಗೆ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಜಾತಿ ವಿವರವೂ ಒಳಗೊಂಡಂತೆ ಒಟ್ಟು 54 ಮಾನದಂಡಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿ ಗಣಕೀಕರಣಗೊಳಿಸಲಾಗಿದೆ.

ಈ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡು ಅಧ್ಯಯನ ವರದಿ ಸಲ್ಲಿಸುವಂತೆ ಕೆ. ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗಕ್ಕೆ 2023ರ ಜುಲೈ 17ರಂದು ಸರ್ಕಾರ ಪತ್ರ ಬರೆದಿತ್ತು. ಅದರ ಅನ್ವಯ, ಕಾಂತರಾಜ ಆಯೋಗ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಧ್ಯಯನ ವರದಿ–2024’ ಮತ್ತು ಸಮೀಕ್ಷೆಯ ಅಂಕಿಅಂಶಗಳನ್ನು ಒಳಗೊಂಡ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು.

‘ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ 1995ರ ಪ್ರಕಾರ, ಆಯೋಗವು ನೀಡುವ ಸಲಹೆಗಳಿಗೆ ಸರ್ಕಾರವು ಸಾಮಾನ್ಯವಾಗಿ ಬದ್ಧವಾಗಿರಬೇಕು. ಆದ್ದರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯಲು ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಿ ಅದರಂತೆ ಅನುಷ್ಠಾನಗೊಳಿಸಲು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸಮಗ್ರ ಅಧ್ಯಯನ ವರದಿ ಅವಶ್ಯವಿದೆ’ ಎಂದು ಪ್ರಸ್ತಾವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಮರ್ಥನೆ ನೀಡಿದೆ.

‘2025ರ ಜ. 2ರಂದು ನಡೆದಿದ್ದ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಈ ವರದಿ ಮಂಡಿಸುವ ಪ್ರಸ್ತಾವ ಇತ್ತು. ಅಂದು ಈ ವರದಿಯ ಬಗ್ಗೆ ಅನೌಪಚಾರಿಕ ಚರ್ಚೆ ನಡೆದಿತ್ತು. ಮುಚ್ಚಿದ ಲಕೋಟೆಯಲ್ಲಿರುವ ಸಮೀಕ್ಷೆಯ ದತ್ತಾಂಶಗಳ ಅಧ್ಯಯನ ವರದಿ ಮತ್ತು ಸಮೀಕ್ಷೆಯ ಅಂಕಿಅಂಶಗಳ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೆರೆಯಲು ಅಂದಿನ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೂಚಿಸಲಾಗಿತ್ತು’ ಎಂದೂ ಪ್ರಸ್ತಾವದಲ್ಲಿ ವಿವರಿಸಲಾಗಿದೆ.

ಮುಚ್ಚಿದ ಲಕೋಟೆಯಲ್ಲಿ ಏನಿದೆ?

ಪೆಟ್ಟಿಗೆ–1

ಪೆಟ್ಟಿಗೆ–2

 

Exit mobile version