ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ಟರ್ಕಿ ಡ್ರೋನ್ಗಳನ್ನು ಪೂರೈಸಿದ್ದಕ್ಕೆ ಭಾರತದಲ್ಲಿ ಟರ್ಕಿ ವಿರೋಧಿ ಭಾವನೆಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ, ಟರ್ಕಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಮಾರ್ಬಲ್ಗಳ ಮೇಲೆ ಬಹಿಷ್ಕಾರ ಹೇರಲಾಗಿದೆ. ಬೆಂಗಳೂರಿನಲ್ಲಿ ಕಳೆದ 4-5 ದಿನಗಳಿಂದ ಟರ್ಕಿ ಮಾರ್ಬಲ್ಗಳ ಆಮದು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಹೌದು ಭಾರತ ಮತ್ತು ಪಾಕಿಸ್ತಾನದ ನಡುವಿನ ಆಪರೇಷನ್ ಸಿಂಧೂರದಲ್ಲಿ ಟರ್ಕಿಯು ಶತ್ರು ರಾಷ್ಟ್ರಕ್ಕೆ ಸಹಾಯ ಮಾಡಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದಿಂದ ಹಲವು ಬಾರಿ ಸಹಾಯ ಪಡೆದಿದ್ದ ಟರ್ಕಿಯು ಈ ಒಡಂಬಡಿಕೆಯನ್ನು ಮರೆತು ಪಾಕಿಸ್ತಾನವನ್ನು ಬೆಂಬಲಿಸಿದೆ. ಇದರಿಂದ ಟರ್ಕಿಯ ವಸ್ತುಗಳ ಮೇಲೆ ಬ್ಯಾನ್ ಹೇರಬೇಕೆಂಬ ಒತ್ತಡ ಹೆಚ್ಚಿದೆ. ಈ ಸಂದರ್ಭದಲ್ಲಿ, ಟರ್ಕಿಯಿಂದ ಆಮದಾಗುತ್ತಿದ್ದ ಪ್ರಮುಖ ವಸ್ತುವಾದ ಮಾರ್ಬಲ್ಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.
ಭಾರತವು ವಾರ್ಷಿಕವಾಗಿ 14-18 ಲಕ್ಷ ಟನ್ ಟರ್ಕಿ ಮಾರ್ಬಲ್ಗಳನ್ನು ಆಮದು ಮಾಡಿಕೊಳ್ಳುತ್ತದೆ, ಇದರಲ್ಲಿ ಶೇ.70ರಷ್ಟು ಟರ್ಕಿಯಿಂದಲೇ ಬರುತ್ತದೆ. ಈ ವ್ಯಾಪಾರದ ಮೌಲ್ಯ ಸುಮಾರು 2,500-3,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಮಾರ್ಬಲ್ಗಳನ್ನು ಮುಖ್ಯವಾಗಿ ಫ್ಲೋರಿಂಗ್ಗೆ ಬಳಸಲಾಗುತ್ತಿತ್ತು. ಆದರೆ, ಉದಯಪುರ ಮಾರ್ಬಲ್ ಪ್ರೊಸೆಸರ್ಸ್ ಅಸೋಸಿಯೇಷನ್ ಈಗಾಗಲೇ ಟರ್ಕಿ ಮಾರ್ಬಲ್ ಆಮದನ್ನು ನಿಷೇಧಿಸಿದೆ, ಮತ್ತು ಬೆಂಗಳೂರು ಕೂಡ ಈ ಕ್ರಮವನ್ನು ಅನುಸರಿಸಿದೆ.
ಟರ್ಕಿ ಮಾರ್ಬಲ್ಗಳ ಬದಲಿಗೆ, ಇಟಲಿ, ವಿಯೆಟ್ನಾಂ, ಇರಾನ್ನಿಂದ ಆಮದು ಮಾಡಿಕೊಳ್ಳುವ ಮಾರ್ಬಲ್ಗಳು ಮತ್ತು ಭಾರತದಲ್ಲಿ ಉತ್ಪಾದನೆಯಾಗುವ ಮಾರ್ಬಲ್ ಹಾಗೂ ಗ್ರಾನೈಟ್ಗಳಿಗೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಟರ್ಕಿಯ ವಿರುದ್ಧ ಭಾರತದಲ್ಲಿ ಆಕ್ರೋಶ ಹೆಚ್ಚಾಗಿದೆ.
