ಹಾಸನ ಪೊಲೀಸರು ಪೊಲೀಸ್ ಇಲಾಖೆಗೆ ದೊಡ್ಡ ಸಾಧನೆಯೊಂದನ್ನು ನೀಡಿದ್ದಾರೆ. 2011ರಲ್ಲಿ ಸಕಲೇಶಪುರ ಜೈಲಿನಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಖೈದಿ ಚನ್ನಕೇಶವನನ್ನು 15 ವರ್ಷಗಳ ನಂತರ ಗೋವಾದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ.
ಹಾಸನ, ಏಪ್ರಿಲ್ 18: ಕೊಲೆ ಯತ್ನ ಪ್ರಕರಣದ ಆರೋಪಿಯಾಗಿದ್ದ ಚನ್ನಕೇಶವ @ ಕೇಶವ @ ಸುರೇಶ ಬಿನ್ ಲೇಟ್ ಸಣ್ಣೇಗೌಡ (ನಲ್ಲುಲ್ಲಿ ಗ್ರಾಮ, ಸಕಲೇಶಪುರ ತಾಲೂಕು) 2011ರಲ್ಲಿ ಸಕಲೇಶಪುರ ಜೈಲಿನಿಂದ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದನು. ಜೈಲಿನಿಂದ ತಪ್ಪಿಸಿಕೊಂಡ ನಂತರ ಈತ ಮುಂಬೈ, ಗೋವಾ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ತಲೆಮರೆಸಿಕೊಂಡಿದ್ದ. ವಿವಿಧ ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಾ ತನ್ನ ಗುರುತು ಬಯಲಾಗದಂತೆ ಜೀವನ ನಡೆಸುತ್ತಿದ್ದ ಚನ್ನಕೇಶವ ಇತ್ತೀಚೆಗೆ ಗೋವಾದ ಒಂದು ರೆಸ್ಟೋರೆಂಟ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು.
ಆರೋಪಿ ಗೋವಾದಲ್ಲಿರುವ ಬಗ್ಗೆ ಹಾಸನ ಪೊಲೀಸರಿಗೆ ಖಚಿತ ಮಾಹಿತಿ ಲಭಿಸುತ್ತಿದ್ದಂತೆಯೇ ಪೊಲೀಸ್ ತಂಡ ತ್ವರಿತವಾಗಿ ಕಾರ್ಯಪ್ರವೃತ್ತವಾಯಿತು. ಗೋವಾಕ್ಕೆ ಧಾವಿಸಿದ ಹಾಸನ ಪೊಲೀಸರು ರೆಸ್ಟೋರೆಂಟ್ನ ಮೇಲೆ ದಾಳಿ ನಡೆಸಿ ಚನ್ನಕೇಶವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹಾಸನಕ್ಕೆ ಕರೆತಂದು ಮತ್ತೆ ಜೈಲಿಗೆ ಅಟ್ಟಲಾಗಿದೆ. ಈ ದೀರ್ಘಕಾಲದ ಪರಾರಿ ಪ್ರಕರಣವನ್ನು ಬಗೆಹರಿಸುವಲ್ಲಿ ಹಾಸನ ಪೊಲೀಸರ ಕಾರ್ಯಕ್ಷಮತೆ ಮತ್ತು ನಿರಂತರ ತನಿಖೆಯು ಯಶಸ್ವಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
