ನಿಲ್ಲಿಸಿದ್ದ ಕಾರಿನ ಡೋರ್‌ ತೆಗೆದು 6.30 ಲಕ್ಷ ಹಣ ಎಗರಿಸಿದ ಖದೀಮ

ಹಾಸನದ ಅರಸೀಕೆರೆಯ ಸುಭಾಷ್‌ನಗರದಲ್ಲಿ ಘಟನೆ

Befunky collage 2025 06 09t075225.751

ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಸುಭಾಷ್‌ನಗರದಲ್ಲಿ ಕಾರಿನ ಡೋರ್ ತೆಗೆದು 6.30 ಲಕ್ಷ ರೂಪಾಯಿ ನಗದು ಕದ್ದು ಕಳ್ಳರು ಪರಾರಿಯಾದ ಘಟನೆ ನಡೆದಿದೆ. ತಮಿಳುನಾಡು ಮೂಲದ ಸುರೇಶ್ ಎಂಬುವರು ಈ ಕಳವಿಗೆ ಒಳಗಾಗಿದ್ದಾರೆ. ಇವರು ಕಳೆದ ಒಂಬತ್ತು ವರ್ಷಗಳಿಂದ ಅರಸೀಕೆರೆಯ ಎಪಿಎಂಸಿಯಲ್ಲಿ ಕೊಬ್ಬರಿ ವ್ಯಾಪಾರ ನಡೆಸುತ್ತಿದ್ದಾರೆ.

ಸುರೇಶ್, ಅರಸೀಕೆರೆಯ ಫೆಡರಲ್ ಬ್ಯಾಂಕ್‌ನಿಂದ 6 ಲಕ್ಷ ರೂಪಾಯಿ ನಗದನ್ನು ಡ್ರಾ ಮಾಡಿಕೊಂಡು ಬಂದಿದ್ದರು. ಇದಕ್ಕೆ ತಮ್ಮ ಬಳಿಯ 30,000 ರೂಪಾಯಿಗಳನ್ನು ಸೇರಿಸಿ, ಒಟ್ಟು 6.30 ಲಕ್ಷ ರೂಪಾಯಿಯನ್ನು ತಮ್ಮ ಕಾರಿನೊಳಗೆ (KA-18-M-8952) ಇರಿಸಿದ್ದರು. ಎಪಿಎಂಸಿಯಲ್ಲಿರುವ ತಮ್ಮ ಕೊಬ್ಬರಿ ಅಂಗಡಿಯ ಮುಂದೆ ಕಾರನ್ನು ನಿಲ್ಲಿಸಿ, ಲಾಕ್ ಮಾಡದೆ ಅಂಗಡಿಯೊಳಗೆ ತೆರಳಿದ್ದರು. ವಾಪಸ್ ಬಂದು ನೋಡಿದಾಗ, ಕಾರಿನಲ್ಲಿಟ್ಟಿದ್ದ ಹಣ ಕಾಣೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಹಣ ಕಳವಾಗಿರುವುದು ದೃಢಪಟ್ಟಿದೆ.

ADVERTISEMENT
ADVERTISEMENT

ಘಟನೆಯ ಕುರಿತು ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಕಳ್ಳರನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇಂತಹ ಕಳವಿನ ಘಟನೆಗಳು ಈ ಹಿಂದೆಯೂ ಹಾಸನ ಜಿಲ್ಲೆಯಲ್ಲಿ ವರದಿಯಾಗಿವೆ. ಸಕಲೇಶಪುರದಲ್ಲಿ ಸ್ಕೂಟರ್‌ನ ಡಿಕ್ಕಿಯಿಂದ 13 ಲಕ್ಷ ರೂಪಾಯಿ ಕಳವಾಗಿದ್ದ ಘಟನೆ ಇತ್ತೀಚೆಗೆ ಸದ್ದು ಮಾಡಿತ್ತು.

ಪೊಲೀಸರು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version