ಪ್ರೇಯಸಿ ಸಾವಿನ ಸುದ್ದಿ ಕೇಳಿ ಪ್ರಿಯಕರ ಆ*ತ್ಮಹ*ತ್ಯೆ

Untitled design (12)

ಧಾರವಾಡ ಆಗಸ್ಟ್‌ 13: ಧಾರವಾಡದಲ್ಲಿ ಯುವಕನೊಬ್ಬನ ದುರಂತ ಅಂತ್ಯ ಎಲ್ಲರ ಮನಕಲಕಿದೆ. ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದ ಬೆನ್ನಲ್ಲೇ ಪ್ರಿಯಕರನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ಮೃತರನ್ನು ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದ ತರುಣ್ ಸಾಗರ ಕುರಕುರಿ (21) ಹಾಗೂ ಮೇಘಾ ಗುಬ್ಬಣ್ಣವರ್ (20) ಎಂದು ಗುರುತಿಸಲಾಗಿದೆ.

ತರುಣ್ ಸಾಗರ ಧಾರವಾಡ ನಗರದ ವಾಚ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಪಿಜಿಯಲ್ಲಿ ವಾಸವಾಗಿದ್ದನು. ಇತ್ತ ಮೇಘಾ ಕುಟುಂಬದವರೊಂದಿಗೆ ವಾಸವಾಗಿದ್ದಳು. ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯಲ್ಲಿ ಬೈದ ಕಾರಣ ಮನನೊಂದು ಮೇಘಾ ನಿನ್ನೆ, ಬುಧವಾರ ಸಂಜೆ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಮೇಘಾ ಸಾವಿನ ಸುದ್ದಿ ತಿಳಿದ ತರುಣ್ ತೀವ್ರ ಆಘಾತಕ್ಕೊಳಗಾಗಿದ್ದಾನೆ. ಬಳಿಕ ಸ್ನೇಹಿತನ ಕೊಠಡಿಗೆ ತೆರಳಿದ ಆತ, ಅಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ನೇಹಿತರು ಕೊಠಡಿಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಹಾಗೂ ಇಬ್ಬರ ನಡುವಿನ ಸಂಬಂಧದ ಕುರಿತು ತನಿಖೆ ಮುಂದುವರಿದಿದೆ.

ಈ ಪ್ರಕರಣದಲ್ಲಿ ಕುಟುಂಬದವರ ಹೇಳಿಕೆ, ಮೊಬೈಲ್ ಕರೆ ವಿವರಗಳು ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರೀತಿ ಸಂಬಂಧದ ಹಿನ್ನೆಲೆ ಯಾವುದೇ ಒತ್ತಡ ಅಥವಾ ಇತರೆ ಕಾರಣಗಳಿವೆಯೇ ಎಂಬುದನ್ನೂ ತನಿಖೆಯಲ್ಲಿ ಸ್ಪಷ್ಟಪಡಿಸಲಾಗುತ್ತದೆ.

Exit mobile version