ಬೆಂಗಳೂರು: ಧರ್ಮಸ್ಥಳಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ವಿಶೇಷ ತನಿಖಾ ದಳ (ಎಸ್ಐಟಿ) ಸಮರ್ಥವಾಗಿ ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, “ಕೋಟ್ಯಂತರ ಭಕ್ತರು ಸತ್ಯ ಹೊರಬರಬೇಕೆಂದು ಕಾಯುತ್ತಿದ್ದಾರೆ. ಆರೋಪಿ ಚಿನ್ನಯ್ಯನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಎಸ್ಐಟಿಯಿಂದ ವರದಿ ಬಂದ ನಂತರ ಮುಂದಿನ ಚರ್ಚೆ ನಡೆಸಲಾಗುವುದು,” ಎಂದು ಹೇಳಿದರು.
ಬಿಜೆಪಿಯವರು ಸರ್ಕಾರದ ಮೇಲೆ ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಎಸ್ಐಟಿ ರಚನೆಯೇ ತಪ್ಪು ಮತ್ತು ಷಡ್ಯಂತ್ರ ಎಂದು ಬಿಜೆಪಿ ಹೇಳುತ್ತಿರುವುದು ವಿಪರ್ಯಾಸ. ಮಹೇಶ್ ತಿಮರೋಡಿಯ ಮನೆಯಲ್ಲಿ ಎಸ್ಐಟಿ ಶೋಧ ನಡೆಸಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಎಸ್ಐಟಿಯು ಮಾಹಿತಿ ಮತ್ತು ಆಧಾರಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದೆ, ಸರ್ಕಾರದ ನಿರ್ದೇಶನದಂತೆ ಅಲ್ಲ,” ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.
ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಆರ್ಎಸ್ಎಸ್ ಪ್ರಾರ್ಥನೆ ಹಾಡಿದ್ದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, “ಈ ವಿಷಯದ ಬಗ್ಗೆ ನಾನು ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ಪಕ್ಷದ ಹೈಕಮಾಂಡ್ ಇದೆ, ಅದು ಎಲ್ಲವನ್ನೂ ನೋಡಿಕೊಳ್ಳುತ್ತದೆ. ಶಿವಕುಮಾರ್ ಅವರ ಹೇಳಿಕೆ ತಪ್ಪು ಎಂದು ಅನಿಸಿದರೆ, ಸಂಬಂಧಪಟ್ಟವರು ಅದನ್ನು ಚರ್ಚಿಸುತ್ತಾರೆ. ಯಾವ ಸಂದರ್ಭದಲ್ಲಿ ಅವರು ಆ ಹೇಳಿಕೆ ನೀಡಿದರು ಎಂಬುದನ್ನೂ ಪರಿಗಣಿಸಬೇಕು,” ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
