ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ನೇತ್ರಾವತಿ ಸ್ನಾನಘಟ್ಟದ ಬಳಿ SIT ಉತ್ಖನನ ಆರಂಭ, 13 ಸ್ಥಳಗಳ ಗುರುತು!

ನೇತ್ರಾವತಿಯ ತೀರದಲ್ಲಿ SIT ತನಿಖೆ ಆರಂಭ!

0 (38)

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ನೂರಾರು ಶವಗಳ ಗುಪ್ತ ಸಮಾಧಿಯ ಆರೋಪದ ತನಿಖೆಯು ಇಂದು ನಿರ್ಣಾಯಕ ಹಂತ ತಲುಪಿದೆ. 1995ರಿಂದ 2014ರವರೆಗೆ ಶವಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪಿಸಿರುವ ದೂರುದಾರನ ಮಾಹಿತಿಯ ಆಧಾರದಲ್ಲಿ, ವಿಶೇಷ ತನಿಖಾ ತಂಡ (SIT) ಇಂದಿನಿಂದ ನೇತ್ರಾವತಿ ಸ್ನಾನಘಟ್ಟದ ಬಳಿಯ ಗುರುತಿಸಲಾದ ಸ್ಥಳಗಳಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಿದೆ. ಸೋಮವಾರ ದೂರುದಾರನೊಂದಿಗೆ 13 ಸ್ಥಳಗಳನ್ನು ಗುರುತಿಸಿದ್ದ SIT, ಇಂದು ಈ ಸ್ಥಳಗಳಲ್ಲಿ ಸಮಾಧಿ ಅಗೆಯುವ ಕೆಲಸಕ್ಕೆ ಮುಂದಾಗಿದೆ.

ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ 12 ಕಾರ್ಮಿಕರನ್ನು ನಿಯೋಜಿಸಲಾಗಿದ್ದು, ಆರೆ, ಗುದ್ದಲಿ, ಪಿಕಾಸಿಗಳಂತಹ ಉತ್ಖನನಕ್ಕೆ ಬೇಕಾದ ಸಾಮಗ್ರಿಗಳನ್ನು ಸಜ್ಜುಗೊಳಿಸಲಾಗಿದೆ. ಕಂದಾಯ ಇಲಾಖೆಯ ಸ್ಟೆಲ್ಲಾ ವರ್ಗೀಸ್ ಸೇರಿದಂತೆ ಇತರ ಸಿಬ್ಬಂದಿ, ನಾಲ್ವರು ವೈದ್ಯರು, ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಅಧಿಕಾರಿಗಳು, ಮತ್ತು ಸ್ಥಳೀಯ ಪೊಲೀಸರು ಸ್ಥಳದಲ್ಲಿ ಉತ್ಖನನ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು ಹಾಜರಿದ್ದಾರೆ. ಗುರುತಿಸಲಾದ 13 ಸ್ಥಳಗಳಲ್ಲಿ ಒಂದೊಂದಾಗಿ ಶವಗಳ ಉತ್ಖನನವನ್ನು ಆರಂಭಿಸಲಾಗಿದೆ, ಮತ್ತು ಈ ಕಾರ್ಯವು ಕೆಲವೇ ಗಂಟೆಗಳಲ್ಲಿ ತೀವ್ರಗೊಳ್ಳಲಿದೆ.

ಸೋಮವಾರದ ತನಿಖೆ ವಿವರ:

ಸೋಮವಾರ (ಜುಲೈ 28), SIT ಅಧಿಕಾರಿಗಳು ದೂರುದಾರನೊಂದಿಗೆ ಬಿಗಿ ಭದ್ರತೆಯಲ್ಲಿ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು. ದೂರುದಾರನ ಮಾರ್ಗದರ್ಶನದಲ್ಲಿ, ಒಟ್ಟು 13 ಸ್ಥಳಗಳನ್ನು ಗುರುತಿಸಲಾಗಿದೆ:

ಕತ್ತಲಾದ ಕಾರಣ, ಒಟ್ಟು 15 ಸ್ಥಳಗಳನ್ನು ಗುರುತಿಸುವ ಯೋಜನೆಯಿದ್ದರೂ, 13 ಸ್ಥಳಗಳನ್ನು ಮಾತ್ರ ದಾಖಲಿಸಲಾಯಿತು. ಈ ಎಲ್ಲಾ ಸ್ಥಳಗಳಿಗೆ ಶಸ್ತ್ರಸಜ್ಜಿತ ಆಂಟಿ-ನಕ್ಸಲ್ ಫೋರ್ಸ್‌ನ 30 ಸಿಬ್ಬಂದಿಯನ್ನು ಒಟ್ಟು 15 ಜಾಗಗಳಿಗೆ ತಲಾ ಇಬ್ಬರು ಭದ್ರತಾ ಸಿಬ್ಬಂದಿಯಾಗಿ ನಿಯೋಜಿಸಲಾಗಿದೆ. ಗುರುತಿಸಲಾದ ಸ್ಥಳಗಳಿಗೆ ಟೇಪ್ ಹಾಕಿ, ಪ್ರತಿಯೊಂದಕ್ಕೂ ಸಂಖ್ಯೆಯನ್ನು ನೀಡಲಾಗಿದೆ, ಮತ್ತು ರಾತ್ರಿ-ಹಗಲು ಸರ್ಪಗಾವಲು ಏರ್ಪಾಡು ಮಾಡಲಾಗಿದೆ.

ದೂರುದಾರನ ಆರೋಪವೇನು?

48 ವರ್ಷದ ದಲಿತ ಸಮುದಾಯದ ಮಾಜಿ ಸ್ವಚ್ಛತಾ ಕಾರ್ಮಿಕನಾದ ದೂರುದಾರ, 1995ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದಾಗ, ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪಿಸಿದ್ದಾನೆ. ಈ ಶವಗಳಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳಿದ್ದು, ಕೆಲವು ಶವಗಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಿಂಸೆಯ ಗುರುತುಗಳಿದ್ದವು ಎಂದು ಅವನು ಹೇಳಿದ್ದಾನೆ. ಜುಲೈ 4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜುಲೈ 11ರಂದು ದೂರುದಾರನು ಬೆಳ್ತಂಗಡಿ ಕೋರ್ಟ್‌ನಲ್ಲಿ ತಾನು ಉತ್ಖನನ ಮಾಡಿದ ಮಾನವ ಶವದ ಅವಶೇಷಗಳನ್ನು ಸಲ್ಲಿಸಿದ್ದಾನೆ. ಈ ಆರೋಪಗಳು ದೇಶಾದ್ಯಂತ ಆಘಾತವನ್ನುಂಟು ಮಾಡಿದ್ದು, ಸ್ಥಳೀಯರು ಮತ್ತು ಕಾರ್ಯಕರ್ತರಿಂದ ತನಿಖೆಗೆ ಒತ್ತಾಯವೂ ಜೋರಾಗಿದೆ.

SIT ರಚನೆ ಮತ್ತು ತನಿಖೆ:

ಕರ್ನಾಟಕ ಸರ್ಕಾರವು ಜುಲೈ 19ರಂದು ಡಿಜಿಪಿ ಪ್ರೊನಾಬ್ ಮೊಹಂತಿ ನೇತೃತ್ವದಲ್ಲಿ SIT ರಚಿಸಿತು. ಈ ತಂಡದಲ್ಲಿ ಎಡಿಜಿಪಿ ಎಂ.ಎನ್. ಅನುಚೇತ್, ಡಿಸಿಪಿ ಎಸ್.ಕೆ. ಸೌಮ್ಯಲತಾ, ಮತ್ತು ಎಸ್‌ಪಿ ಜಿತೇಂದ್ರ ಕುಮಾರ್ ದಯಾಮಾ ಸೇರಿದಂತೆ 20 ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿದೆ. ತನಿಖೆಯು ಧರ್ಮಸ್ಥಳದಲ್ಲಿ ಸಂಭವಿಸಿದ ಅಸ್ವಾಭಾವಿಕ ಸಾವುಗಳು, ಕಾಣೆಯಾದ ವ್ಯಕ್ತಿಗಳು, ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಒಳಗೊಂಡಿದೆ. SIT ತಂಡವು ದೂರುದಾರನಿಂದ ಗುರುತಿಸಲಾದ ಎಲ್ಲಾ ಸ್ಥಳಗಳನ್ನು ಪರಿಶೀಲಿಸುತ್ತಿದ್ದು, ಉತ್ಖನನದ ನಂತರ ಫಾರೆನ್ಸಿಕ್ ಪರೀಕ್ಷೆಯ ಮೂಲಕ ಸಾಕ್ಷ್ಯಗಳನ್ನು ದೃಢೀಕರಿಸಲಿದೆ.

ಈ ಆರೋಪಗಳು ಧರ್ಮಸ್ಥಳದ ಆಧ್ಯಾತ್ಮಿಕ ಪರಂಪರೆಯ ಮೇಲೆ ಗಂಭೀರ ಪರಿಣಾಮ ಬೀರಿವೆ. ಸ್ಥಳೀಯರು ಮತ್ತು ಭಕ್ತರಲ್ಲಿ ಆತಂಕ ಮೂಡಿದ್ದು, ತನಿಖೆಯ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

Exit mobile version