ಹರಿಹರ ಪಂಚಮಸಾಲಿ ಪೀಠದಲ್ಲಿ ಭುಗಿಲೆದ್ದ ಸಂಘರ್ಷ

ವಚನಾನಂದ ಶ್ರೀಗಳ ಉಚ್ಚಾಟನೆಗೆ ಭಕ್ತರ ತೀವ್ರ ವಿರೋಧ

524

ದಾವಣಗೆರೆ: ಹರಿಹರದ ಪಂಚಮಸಾಲಿ ಪೀಠದಲ್ಲಿ ವಚನಾನಂದ ಶ್ರೀಗಳು ಮತ್ತು ಟ್ರಸ್ಟ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಟ್ರಸ್ಟ್ ಧರ್ಮದರ್ಶಿಗಳು ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ಉಚ್ಚಾಟನೆ ಮಾಡಿದ ನಂತರ ಮಠದ ಕಚೇರಿಗೆ ಬೀಗ ಹಾಕಿರುವುದು ಭಕ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪಂಚಮಸಾಲಿ ಸಮಾಜದ ಭಕ್ತರು 15 ದಿನಗಳ ಗಡುವು ನೀಡಿ, “ನಮ್ಮ ಡೆಡ್‌ಲೈನ್ ಒಳಗೆ ಬೀಗ ತೆಗೆಯದಿದ್ದರೆ ಬೀಗ ಹೊಡೆದು ಒಳಗೆ ಹೋಗುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.https://youtu.be/8RQmWqHDkW8

ಭಕ್ತರು “ವಚನಾನಂದ ಶ್ರೀಗಳು ನಮ್ಮ ಸಮಾಜದ ಆಸ್ತಿ. ಶ್ರೀಗಳ ಉಚ್ಚಾಟನೆಯನ್ನು ನಾವು ಎಂದಿಗೂ ಒಪ್ಪುವುದಿಲ್ಲ. ಏನೇ ಆದರೂ ಶ್ರೀಗಳ ಬೆಂಬಲಕ್ಕೆ ನಿಲ್ಲುತ್ತೇವೆ. ಶ್ರೀಗಳಿಗೆ ತೊಂದರೆ ಮಾಡಿದರೆ ಸುಮ್ಮನಿರುವುದಿಲ್ಲ” ಎಂದು ಗುಡುಗಿದ್ದಾರೆ. ಪೀಠಾಧಿಪತಿ ಸ್ಥಾನದಿಂದ ಉಚ್ಚಾಟನೆ ಮಾಡಿದ್ದು ಸಮಾಜದ ಏಕತೆಗೆ ಧಕ್ಕೆ ತರುವ ಕ್ರಮ ಎಂದು ಅವರು ಆರೋಪಿಸಿದ್ದಾರೆ.

ಇತ್ತ ಟ್ರಸ್ಟಿ ಚಂದ್ರಶೇಖರ ಪೂಜಾರ್ ಅವರು ವಚನಾನಂದ ಶ್ರೀಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ವಚನಾನಂದ ಶ್ರೀಗಳು ‘ಮಸಾಜ್ ಪ್ರಿಯ ಸ್ವಾಮೀಜಿʼ ಎಂದು ಲೇವಡಿ ಮಾಡಿದ ಅವರು, ಎರಡು ವರ್ಷಗಳ ಹಿಂದೆ ಬಾಲಕರ ಹಾಸ್ಟೆಲ್ ಆರಂಭಿಸಿದ್ದಾಗ 60 ಮಕ್ಕಳಿದ್ದರು ಎಂದು ಹೇಳಿದರು. ಈಗ ಕೇವಲ ಐವರು ಮಕ್ಕಳು ಉಳಿದಿದ್ದಾರೆ. ಪುಟ್ಟ ಪುಟ್ಟ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ.

“ಪ್ರತಿನಿತ್ಯ ನಾಲ್ಕು ಮಕ್ಕಳನ್ನು ಸರದಿ ಸಾಲಿನಲ್ಲಿ ನಿಂತು ಮಸಾಜ್ ಮಾಡಲು ಕರೆಯುತ್ತಿದ್ದರು. ಇದನ್ನು ಬಹಿರಂಗಪಡಿಸಬಾರದು ಎಂದು ನಾವು ಶ್ರೀಗಳನ್ನು ತಿದ್ದಲು ಪ್ರಯತ್ನಿಸಿದ್ದೆವು. ಆದರೆ ಅವರು ಕೇಳಲಿಲ್ಲ. ಈಗ ಆ ಮಕ್ಕಳ ತಂದೆ-ತಾಯಂದಿರು ಪೋಕ್ಸೋ ಕೇಸ್ ಹಾಕುವುದಾಗಿ ಹೇಳುತ್ತಿದ್ದಾರೆ” ಎಂದು ಚಂದ್ರಶೇಖರ ಪೂಜಾರ್ ತಿಳಿಸಿದ್ದಾರೆ.

ಟ್ರಸ್ಟ್ ಪಕ್ಷದಿಂದ ಶ್ರೀಗಳು ಎರಡು ಪೀಠಗಳನ್ನು ಒಂದೇ ಸಮಯದಲ್ಲಿ ನಿರ್ವಹಿಸುತ್ತಿರುವುದು ಮುಖ್ಯ ಕಾರಣವೆಂದು ಹೇಳಲಾಗುತ್ತಿದೆ. ಇದರ ಜೊತೆಗೆ ಲೆಕ್ಕಪತ್ರದ ಬಗ್ಗೆಯೂ ವಿವಾದ ಉಂಟಾಗಿದೆ.

ಈ ಸಂಘರ್ಷ ಪಂಚಮಸಾಲಿ ಸಮಾಜದಲ್ಲಿ ದೊಡ್ಡ ಬಿರುಕನ್ನು ಉಂಟುಮಾಡಿದೆ. ಭಕ್ತರು ಶ್ರೀಗಳ ಪರವಾಗಿ ಒಗ್ಗಟ್ಟಿನಿಂದ ನಿಂತಿದ್ದು, ಟ್ರಸ್ಟ್ ನಡೆಯನ್ನು ಪ್ರಶ್ನಿಸುತ್ತಿದ್ದಾರೆ. ಮಠದ ಆಡಳಿತ ಮತ್ತು ಸಮಾಜದ ನಡುವಿನ ಈ ಜಟಾಪಟಿ ಮುಂದೆ ಹೇಗೆ ಬೆಳೆಯುತ್ತದೆ ಎಂಬುದನ್ನು ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಪೊಲೀಸ್ ಮತ್ತು ಆಡಳಿತ ಇಲಾಖೆಗಳು ತ್ವರಿತ ಹಸ್ತಕ್ಷೇಪ ಮಾಡಬೇಕು ಎಂಬ ಆಗ್ರಹವೂ ಹೆಚ್ಚಾಗಿದೆ.

 

Exit mobile version