ಕಾಫಿನಾಡಲ್ಲಿ ಗಾಳಿ-ಮಳೆಯ ಅಬ್ಬರ: ಮೂಡಿಗೆರೆಯಲ್ಲಿ ಮರ ಬಿದ್ದು ಕಾರು ಜಖಂ

Untitled design (66)

ಚಿಕ್ಕಮಗಳೂರು (ಜುಲೈ 5): ಕಾಫಿನಾಡು ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭಾರಿ ಮಳೆಯ ಜೊತೆಗೆ ವೇಗವಾಗಿ ಬೀಸಿದ ಗಾಳಿಯಿಂದ ಹಲವು ಕಡೆ ಅವಾಂತರಗಳು ಸಂಭವಿಸುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ತ್ರೀಪುರದಲ್ಲಿ ಧಾರಾಕಾರ ಮಳೆ ಮತ್ತು ಬಿರುಗಾಳಿಯ ಪರಿಣಾಮ ಮರ ನೆಲಕ್ಕುರುಳಿ ಕಾರು ಜಖಂಗೊಂಡ ಘಟನೆ ನಡೆದಿದೆ.  

ತ್ರಿಪುರ ನಿವಾಸಿ ಸುಶೀಲ ಎಂಬುವರ ಮನೆಯ ಸಮೀಪದಲ್ಲಿದ್ದ ದೊಡ್ಡ ಮರ ಭಾರಿ ಗಾಳಿ-ಮಳೆಯ ಅಬ್ಬರಕ್ಕೆ ಏಕಾಏಕಿ ನೆಲಕ್ಕುರುಳಿದೆ. ಈ ವೇಳೆ ಅಲ್ಲೇ ನಿಲ್ಲಿಸಲಾಗಿದ್ದ ಮೊನಪ್ಪ ಅವರಿಗೆ ಸೇರಿದ ಕಾರಿನ ಮೇಲೆ ಮರ ಬಿದ್ದ ಪರಿಣಾಮ ವಾಹನಕ್ಕೆ ತೀವ್ರ ಹಾನಿಯಾಗಿದೆ. ಕಾರಿನ ಮುಂಭಾಗ ಹಾಗೂ ಮೇಲ್ಭಾಗ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.

ಘಟನೆ ನಡೆದ ವೇಳೆ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಗಾಳಿ-ಮಳೆಯ ತೀವ್ರತೆ ಹೆಚ್ಚುತ್ತಿರುವುದರಿಂದ ಮಲೆನಾಡು ಭಾಗದ ಜನರು ಎಚ್ಚರಿಕೆಯಿಂದಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರು ಸೇರಿದಂತೆ ಕಾಫಿನಾಡಿನ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಧಾರಾಕಾರ ಮಳೆಯ ಜೊತೆಗೆ ಬಿರುಸಿನ ಗಾಳಿ ಬೀಸುತ್ತಿರುವುದರಿಂದ ಮರಗಳು ನೆಲಕ್ಕುರುಳುವುದು, ವಿದ್ಯುತ್ ವ್ಯತ್ಯಯ ಉಂಟಾಗುವುದು ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವಂತಹ ಸಮಸ್ಯೆಗಳು ಕಾಣಿಸುತ್ತಿವೆ. ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಗಾಲದ ಅವಾಂತರಗಳ ಬಗ್ಗೆ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

ಮಳೆ ಇನ್ನೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಸಂಚರಿಸುವುದನ್ನು ತಪ್ಪಿಸಬೇಕು. ದೊಡ್ಡ ಮರಗಳ ಕೆಳಗೆ ವಾಹನ ನಿಲ್ಲಿಸುವುದನ್ನು ತಡೆಯಬೇಕು ಹಾಗೂ ಗಾಳಿ-ಮಳೆ ಹೆಚ್ಚಾದ ಸಂದರ್ಭ ಸುರಕ್ಷಿತ ಸ್ಥಳದಲ್ಲೇ ಇರಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇದರ ಜೊತೆಗೆ ದಟ್ಟ ಮಂಜು ಆವರಿಸಿದೆ. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಈ ಘಾಟಿಯಲ್ಲಿ ಒಮ್ಮೆ ದಟ್ಟ ಮಂಜು, ಮತ್ತೊಂದು ಮಳೆರಾಯ ಅಬ್ಬರಿಸುತ್ತಿದ್ದಾನೆ. ಇದರಿಂದಾಗಿ ವಾಹನ ಸವಾರರಿಗೆ ಅಡೆ-ತಡೆ ಉಂಟಾಗಿವೆ.

Exit mobile version