ಮದುವೆಗೆ ಸಂಬಂಧಿಸಿದ ಜಾತಕ ತೋರಿಸುವ ನೆಪದಲ್ಲಿ ಯುವತಿಯೊಬ್ಬಳ ಮೇಲೆ ದೇವಸ್ಥಾನದ ಅರ್ಚಕನೇ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಅರ್ಚಕ ಕೃಷ್ಣರಾವ್ ವಿರುದ್ಧ ಯುವತಿ ದೂರು ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
23 ವರ್ಷದ ಯುವತಿ (ಎಸ್ಸಿ ಸಮುದಾಯದವಳು) ಮದುವೆಯ ಸಂದರ್ಭದಲ್ಲಿ ಜಾತಕ ಪರೀಕ್ಷೆ ಮಾಡಿಸಲು ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಳು. ಆರೋಪಿ ಅರ್ಚಕ ಕೃಷ್ಣರಾವ್ ಜಾತಕದಲ್ಲಿ “ದೋಷ ಇದೆ, ಮದುವೆಯಲ್ಲಿ ತೊಂದರೆ ಆಗುತ್ತದೆ” ಎಂದು ಹೆದರಿಸಿ, ದೋಷ ನಿವಾರಣೆ ಮಾಡಬೇಕು ಎಂದು ನಂಬಿಸಿ ಆಕೆಯನ್ನು ಬಲವಂತವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದಾನೆ ಎಂಬುದು ದೂರಿನ ವಿವರ.
ಈ ಘಟನೆಗಳು 2025 ನವೆಂಬರ್ 23ರಿಂದ 2026 ಫೆಬ್ರವರಿ 2ರವರೆಗೆ ಹಲವು ಬಾರಿ ನಡೆದಿವೆ ಎಂದು ಯುವತಿ ಆರೋಪಿಸಿದ್ದಾಳೆ. ಫೆಬ್ರವರಿ 2, 2026ರಂದು ಮಧ್ಯಾಹ್ನ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪೊಲೀಸರು ಆರೋಪಿ ಅರ್ಚಕ ಕೃಷ್ಣರಾವ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದು, ದೇವಸ್ಥಾನಗಳಲ್ಲಿ ನಂಬಿಕೆಯನ್ನು ದುರುಪಯೋಗಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.
