ಚಾಮರಾಜನಗರದಲ್ಲಿ ಚಿರತೆ ಅಟ್ಟಹಾಸ: ಅಜ್ಜಿ-ಮೊಮ್ಮಗಳ ಮೇಲೆ ದಾಳಿ

Untitled design (59)

ಚಾಮರಾಜನಗರ (ಜುಲೈ 5): ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಟ್ಟೆಗೆರೆ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿದ ಘಟನೆ ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಮನೆಯ ಬಾಗಿಲಲ್ಲೇ ಕುಳಿತಿದ್ದ ಅಜ್ಜಿ ಮೇಲೆ ಮೊದಲು ದಾಳಿ ಮಾಡಿದ ಚಿರತೆ, ನಂತರ ಅಲ್ಲಿಗೆ ಬಂದ ಐದು ವರ್ಷದ ಪುಟ್ಟ ಮಗುವಿನ ಮೇಲೂ ಎರಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಜನವಸತಿ ಪ್ರದೇಶಕ್ಕೆ ನುಗ್ಗಿ ಈ ರೀತಿಯ ದಾಳಿ ನಡೆದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಹೊಂಚು ಹಾಕಿ ಬಂದ ಚಿರತೆ

ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಗೆರೆ ಗ್ರಾಮದ ನಿವಾಸಿ ಶಿವಮ್ಮ ಹಾಗೂ ಅವರ ಐದು ವರ್ಷದ ಮೊಮ್ಮಗಳು ಹರ್ಷಿತಾ ಗಾಯಗೊಂಡವರು. ಶಿವಮ್ಮ ಅವರು ಎಂದಿನಂತೆ ತಮ್ಮ ಮನೆಯ ಬಾಗಿಲ ಬಳಿ ಕುಳಿತಿದ್ದ ವೇಳೆ, ಹೊಂಚು ಹಾಕಿ ಬಂದ ಚಿರತೆ ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ. ದಾಳಿಯಿಂದ ಗಾಬರಿಗೊಂಡ ಶಿವಮ್ಮ ಜೋರಾಗಿ ಕಿರುಚಿಕೊಂಡಿದ್ದಾರೆ. ಅಜ್ಜಿಯ ಕಿರುಚಾಟ ಕೇಳಿ ಏನಾಯಿತೆಂದು ನೋಡಲು ಪುಟ್ಟ ಹರ್ಷಿತಾ ಅಲ್ಲಿಗೆ ಓಡಿ ಬಂದಿದ್ದಾಳೆ.

ಆದರೆ ಚಿರತೆ ಅಜ್ಜಿಯ ಮೇಲೆ ದಾಳಿ ಮಾಡಿದ ಬಳಿಕ ಅಲ್ಲಿಂದ ಓಡಿಹೋಗದೆ ಮನೆಯ ಪಕ್ಕದಲ್ಲೇ ಅಡಗಿ ಕುಳಿತಿತ್ತು. ಅಜ್ಜಿಯನ್ನು ನೋಡಲು ಬಂದ ಹರ್ಷಿತಾಳನ್ನು ಕಂಡೊಡನೆ ಮತ್ತೆ ಮಗುವಿನ ಮೇಲೂ ದಾಳಿ ನಡೆಸಿದೆ. ಈ ವೇಳೆ ಅಜ್ಜಿ ಮತ್ತು ಮಗುವಿನ ಚೀರಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಲಾಠಿ, ಕಲ್ಲುಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಜನರು ಒಟ್ಟಾಗಿ ಎದುರಾಗಿ ಬಂದದ್ದನ್ನು ಕಂಡ ಚಿರತೆ ಅಲ್ಲಿಂದ ಕಾಡಿನತ್ತ ಪರಾರಿಯಾಗಿದೆ.

ಜನರಲ್ಲಿ ಭೀತಿ ಹೆಚ್ಚಿಸಿದ ಚಿರತೆ ದಾಳಿ

ಗಾಯಗೊಂಡ ಶಿವಮ್ಮ ಮತ್ತು ಹರ್ಷಿತಾಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಆದರೂ, ಮನೆಯ ಬಾಗಿಲಲ್ಲೇ ಕುಳಿತಿದ್ದವರ ಮೇಲೆ ಚಿರತೆ ದಾಳಿ ನಡೆಸಿರುವುದು ತಟ್ಟೆಗೆರೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಭೀತಿಯನ್ನು ಹೆಚ್ಚಿಸಿದೆ. “ಈಗ ಮನೆಯೊಳಗೇ ಇದ್ದರೂ ಸುರಕ್ಷತೆ ಇಲ್ಲದಂತಾಗಿದೆ” ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಗಳ ಸಂಚಾರ ಹೆಚ್ಚಾಗಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ದಾಳಿ ಮಾಡಿದ ಚಿರತೆಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ಬೋನು ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ. ಗ್ರಾಮಸ್ಥರ ಸುರಕ್ಷತೆಗಾಗಿ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಚಿರತೆ ಸಂಚಾರವನ್ನು ನಿಯಂತ್ರಿಸಬೇಕು ಎಂಬ ಬೇಡಿಕೆ ಜೋರಾಗಿದೆ.

Exit mobile version