ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪೀಣ್ಯಾ ಡಿಪೋ-9ರಲ್ಲಿ ಕಳೆದ ಶುಕ್ರವಾರ ರಾತ್ರಿ ಭಾರೀ ಬೆಂಕಿ ಘಟನೆ ನಡೆದಿದೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಎರಡು ಬಸ್ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಘಟನೆಯ ವಿವರ : ರಾತ್ರಿ 7.30ರಿಂದ 8.30ರ ನಡುವೆ ನಡೆದ ಈ ಘಟನೆಯಲ್ಲಿ, ಡಿಪೋದಲ್ಲಿ ಸಿಗರೇಟ್ ಸೇದಿದ ಸಿಬ್ಬಂದಿ ಕಸದ ರಾಶಿಗೆ ಸಿಗರೇಟ್ ಎಸೆದಿದ್ದರಿಂದ ಬೆಂಕಿ ಹೊತ್ತಿಕೊಂಡಿತು. ಕಸದ ರಾಶಿಯ ಪಕ್ಕದಲ್ಲೇ ನಿಲ್ಲಿಸಿದ್ದ ಎರಡು ಬಸ್ಗಳಿಗೆ ಬೆಂಕಿ ತಗುಲಿ, ಅವು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅಗ್ನಿಶಾಮಕ ದಳ ತ್ವರಿತವಾಗಿ ಬಂದು ಬೆಂಕಿಯನ್ನು ನಂದಿಸಿದ್ದರೂ, ಈ ವೇಳೆಗಾಗಲೇ ಬಸ್ಗಳು ಭಸ್ಮವಾಗಿದ್ದವು.
ಆರೋಪ-ಪ್ರತ್ಯಾರೋಪ ಘಟನೆಯ ನಂತರ ಡಿಪೋ ಮ್ಯಾನೇಜರ್ ಪುಟ್ಟರಾಜು ಚಾಲಕ ಶರಣಪ್ಪ ಅವರನ್ನು ಮನೆಯಿಂದ ಕರೆಯಿಸಿ, “ನಾನು ಬಸ್ ಚಾಲನೆಯಲ್ಲಿ ಇಟ್ಟಿದ್ದೆ, ನನ್ನದೇ ತಪ್ಪು” ಎಂದು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ.
ಆದರೆ ನಿಯಮಗಳ ಪ್ರಕಾರ:
- ಡ್ಯೂಟಿ ಮುಗಿಸಿದ ಚಾಲಕರು ಕೀಯನ್ನು ಭದ್ರತಾ ಸಿಬ್ಬಂದಿಗೆ ಹ್ಯಾಂಡ್ ಓವರ್ ಮಾಡಬೇಕು.
- ಲಾಗಿನ್ ಬುಕ್ನಲ್ಲಿ ಸಹಿ ಮಾಡಿ ಡಿಪೋದಿಂದ ಹೊರಡಬೇಕು.
- ಬಸ್ಗಳ ಸುವ್ಯವಸ್ಥೆ ನೋಡಿಕೊಳ್ಳುವುದು ಡಿಪೋ ಸಿಬ್ಬಂದಿಯ ಕೆಲಸ.
ಹೀಗಿರುವಾಗ ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತಿದ್ದ ಚಾಲಕನ ಮೇಲೆ ಆರೋಪ ಹೊರಿಸುವುದು ಯಾರದ್ದೋ ತಪ್ಪನ್ನು ಮುಚ್ಚಲು ಮಾಡಿದ ಪ್ರಯತ್ನವೇ ಎಂಬ ಅನುಮಾನಗಳು ಉಂಟಾಗಿವೆ.
ಡಿಪೋದಲ್ಲಿ ಸಿಗರೇಟ್ ನಿಷೇಧ ಡಿಪೋ ಒಳಗೆ ಸಿಗರೇಟ್ ಸೇದುವುದು ನಿಷೇಧವಿದ್ದರೂ, ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು ಈ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗುತ್ತಿದೆ. ಘಟನೆಯ ವಿಡಿಯೋ ಲಭ್ಯವಿದ್ದು, ಇದು BMTC ಆಡಳಿತದಲ್ಲಿ ನಿರ್ಲಕ್ಷ್ಯವಿದೆ ಎಂಬ ಚರ್ಚೆಯನ್ನು ತೀವ್ರಗೊಳಿಸಿದೆ.
ಈ ಘಟನೆಯ ಬಗ್ಗೆ BMTC ಉನ್ನತ ಅಧಿಕಾರಿಗಳು ತನಿಖೆಗೆ ಆದೇಶ ನೀಡಬೇಕು ಎಂದು ಡಿಪೋ ಸಿಬ್ಬಂದಿ ಮತ್ತು ಚಾಲಕರು ಒತ್ತಾಯಿಸುತ್ತಿದ್ದಾರೆ.
