ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರಗೆ ಕೊಕ್? ಹೊಸ ಮುಖಕ್ಕೆ ಮಣೆ ಹಾಕುತ್ತಾ ಹೈಕಮಾಂಡ್!

Untitled design (8)

ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಹಿನ್ನೆಲೆಯಲ್ಲಿ ತೀವ್ರ ರಾಜಕೀಯ ಕಸರತ್ತುಗಳು ನಡೆಯುತ್ತಿವೆ. ಬಿಜೆಪಿ ಹೈಕಮಾಂಡ್ ಜುಲೈ ಎರಡನೇ ವಾರದೊಳಗೆ ರಾಜ್ಯಾಧ್ಯಕ್ಷರ ಹೆಸರನ್ನು ಘೋಷಿಸಲಿದೆ ಎಂದು ಖಚಿತವಾಗಿದೆ. ಈ ನಡುವೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ಅವರ ಬದಲಿಗೆ ಹೊಸ ಮುಖವನ್ನು ಆಯ್ಕೆ ಮಾಡುವ ಚಿಂತನೆಯ ಬಗ್ಗೆ ಕುತೂಹಲಕರ ಮಾಹಿತಿಗಳು ಹೊರಬಿದ್ದಿವೆ.

ಕೇಂದ್ರ ಸಚಿವರಿಗೆ ಮಣೆ ಹಾಕುತ್ತಾ ಹೈಕಮಾಂಡ್?

ಕಳೆದ ಆರು ತಿಂಗಳಿಂದ ಬಿಜೆಪಿಯ ಒಳಗಿನ ಕೆಲವು ಬಣಗಳು ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ತೀವ್ರ ಒತ್ತಡ ಹೇರಿವೆ. ಸೋಮಣ್ಣ ಅವರು ಕೇಂದ್ರ ಸಚಿವ ಸ್ಥಾನದ ಜೊತೆಗೆ ರಾಜ್ಯಾಧ್ಯಕ್ಷರ ಜವಾಬ್ದಾರಿಯನ್ನೂ ಒಪ್ಪಿಕೊಳ್ಳಲು ಸಿದ್ಧರಿದ್ದರು. ಆದರೆ, ಹೈಕಮಾಂಡ್ ಅವರಿಗೆ ಕೇಂದ್ರ ಸಚಿವರಾಗಿ ಗಮನ ಕೊಡುವಂತೆ ಸೂಚಿಸಿದ್ದರಿಂದ ಈ ಚರ್ಚೆ ತಾತ್ಕಾಲಿಕವಾಗಿ ಕೊನೆಗೊಂಡಿದೆ.

ADVERTISEMENT
ADVERTISEMENT
ಸುನೀಲ್ ಕುಮಾರ್‌ಗೆ ಒಲಿಯುತ್ತಾ ರಾಜ್ಯಾಧ್ಯಕ್ಷಪಟ್ಟ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿಯೊಬ್ಬರು, ವಿಜಯೇಂದ್ರ ಅವರ ಬದಲಿಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಹಿಂದುಳಿದ ವರ್ಗದ ವಿ. ಸುನೀಲ್ ಕುಮಾರ್, ಲಿಂಗಾಯತ-ಪಂಚಮಸಾಲಿ ಕೋಟಾದ ಅರವಿಂದ ಬೆಲ್ಲದ್, ಮತ್ತು ದಲಿತ ಕೋಟಾದ ಅರವಿಂದ ಲಿಂಬಾವಳಿ ಅವರ ಹೆಸರುಗಳನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಸುನೀಲ್ ಕುಮಾರ್ ಅವರೊಂದಿಗೆ ಹೈಕಮಾಂಡ್ ಈಗಾಗಲೇ ಚರ್ಚೆ ನಡೆಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ, ಸುನೀಲ್ ಕುಮಾರ್ ಅವರು ಈ ಸ್ಥಾನಕ್ಕೆ ಸ್ಪಷ್ಟ ಒಪ್ಪಿಗೆಯನ್ನು ವ್ಯಕ್ತಪಡಿಸಿಲ್ಲ.

ಆರ್. ಅಶೋಕ್‌ರ ದೆಹಲಿ ಭೇಟಿಯ ಗುಟ್ಟೇನು?

ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಳೆದ ಮಂಗಳವಾರದಿಂದ ದೆಹಲಿಯಲ್ಲಿದ್ದಾರೆ. ಈ ಭೇಟಿಯಿಂದ ವಿಪಕ್ಷ ನಾಯಕ ಸ್ಥಾನದ ಬದಲಾವಣೆಯ ಕುತೂಹಲವೂ ಶುರುವಾಗಿದೆ. ಒಂದು ವೇಳೆ ಬದಲಾವಣೆಯಾದರೆ, ಸುನೀಲ್ ಕುಮಾರ್ ಅವರಿಗೆ ಈ ಜವಾಬ್ದಾರಿ ದೊರೆಯಬಹುದು ಎಂಬ ಊಹಾಪೋಹಗಳಿವೆ. ಆದರೆ, ಈ ಭೇಟಿಯ ನಿಜವಾದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.

ವಿಜಯೇಂದ್ರ ಹೇಳಿದ್ದೇನು?

ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಆರ್. ಅಶೋಕ್ ಅವರ ದೆಹಲಿ ಭೇಟಿಯ ಬಗ್ಗೆ ಸ್ಪಷ್ಟೀಕರಣ ನೀಡಿ, “ಅಶೋಕ್ ಉತ್ತಮವಾಗಿ ಕೆಲಸ ಮಾಡಿದ್ದಾರೆ. ದೆಹಲಿಗೆ ಬೇರೆ ಕಾರಣಕ್ಕೆ ಹೋಗಿರಬಹುದು,” ಎಂದು ಹೇಳಿದ್ದಾರೆ. ತಮ್ಮ ಸ್ಥಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್‌ನ ಒಳಗಿನ ಮಾತುಕತೆ:

ಬಿಜೆಪಿಯ ಆಂತರಿಕ ವಿಭಿನ್ನತೆಗಳನ್ನು ಸರಿಪಡಿಸಲು ಆರ್‌ಎಸ್‌ಎಸ್ ಕಳೆದ ವಾರ ಸಭೆ ನಡೆಸಿತ್ತು. ಇಂದು ಬೆಂಗಳೂರಿನಲ್ಲಿ ಮತ್ತೊಂದು ಸಭೆ ನಡೆಯಲಿದ್ದು, ಹೆಚ್ಚಿನ ನಾಯಕರ ಭಾಗವಹಿಸುವಿಕೆಯ ನಿರೀಕ್ಷೆಯಿದೆ. ಜುಲೈ ಎರಡನೇ ವಾರದಲ್ಲಿ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನವಾಗುವ ಸಾಧ್ಯತೆಯಿದೆ.

Exit mobile version